ಮಂಗಳೂರು: ಮಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಮಹಾಮಳೆಗೆ ನಗರದಲ್ಲಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿಗೆ ನಾನೇ ಕಾರಣ ಎಂದು ಟೀಕಿಸುವವರಿಗೆ ಸಾಮಾನ್ಯ ಜ್ಞಾನ ಇಲ್ಲ ಎಂದು ಮಾಜಿ ಶಾಸಕ ಜೆ.ಆರ್. ಲೋಬೋ ಕಿಡಿಕಾರಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಮಂಗಳೂರಿನಲ್ಲಿ ಕೇವಲ 6 ಗಂಟೆಯೊಳಗೆ 36 ಮಿಮಿ ಮಳೆಯಾಗಿದೆ. ಮಂಗಳೂರಿನಲ್ಲಿ ಈ ಹಿಂದೆ ಇಷ್ಟು ಪ್ರಮಾಣದಲ್ಲಿ ಮಳೆಯಾಗಿರಲಿಲ್ಲ. ಅದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ನನ್ನ ಮೇಲೆ ವಿನಾ ಕಾರಣ ಬಿಜೆಪಿ ಮುಖಂಡರು ಟೀಕೆ ಮಾಡುತ್ತಿದ್ದಾರೆ,"
ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಆದರೆ, ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿ ಪ್ರದೇಶದಲ್ಲಿ ಕೂಡ ಭಾರೀ ಪ್ರವಾಹ ಪರಿಸ್ಥಿತಿ ಸೃಷ್ಠಿಯಾಗಿತ್ತು. ಅದಕ್ಕೆ ಸಂಸದರನ್ನು ದೂರಿ ಪ್ರಯೋಜನವಿಲ್ಲ. ಯಾಕೆಂದರೆ ಜನ ಪ್ರತಿನಿಧಿಗಳು ಯಾರು ತಾಂತ್ರಿಕವಾಗಿ ಪರಿಣತಿ ಹೊಂದಿರುವ ವ್ಯಕ್ತಿಗಳಲ್ಲ. ಆದರೆ ಅವರಿಗೆ ತಾಂತ್ರಿಕ ಸಲಹೆ ನೀಡುವವರೇ ಈ ಪರಿಸ್ಥಿತಿಗಳಿಗೆ ಕಾರಣ ಎಂದು ಅವರು ಹೇಳಿದರು.