ಮುಂಬಯಿ,ಜೂ.08: ದಕ್ಷಿಣ ಅಯೋಧ್ಯೆ ಎಂದು ಕರೆಯಲ್ಪಡುವ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನ ನಿತ್ಯಾನಂದನಗರ ಧರ್ಮಸ್ಥಳ ಇದರ ಮಠಾಧೀಶರಾದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಪಟ್ಟಾಭೀಷೇಕ ದಶಮಾನೋತ್ಸವ ಸಂಭ್ರಮ ಸೆಪ್ಟೆಂಬರ್ 03.09.2018ರಂದು ಶ್ರೀರಾಮ ಕ್ಷೇತ್ರದಲ್ಲಿ ಜರಗಲಿದ್ದು ಆ ಪ್ರಯುಕ್ತ ಲೋಕ ಕಲ್ಯಾಣಾರ್ಥವಾಗಿ ಹಿಮಾಲಯದಿಂದ ಸುಮಾರು ಎರಡು ಸಾವಿರ ಸಾಧು ಸಂತರನ್ನು ಬರಮಾಡಿ ಶ್ರೀರಾಮ ತಾರಕ ಮಂತ್ರ ಯಜ್ಞ ಹಾಗೂ ಧರ್ಮ ಸಂಸದನ್ನು ಆಯೋಜಿಸಿ ಆ ಮುಖೇನ ಸಂತರಿಂದ ಲೋಕ ಕಲ್ಯಾಣಕ್ಕಾಗಿ ದಿವ್ಯ ಸಂದೇಶ ನೀಡಲಾಗುವುದು. ಈ ಕಾರ್ಯಕ್ರಮಕ್ಕೆ ರಾಷ್ಟ್ರದ ಅನೇಕ ನಾಯಕರು, ಮಂತ್ರಿಗಳು, ರಾಜ್ಯದ ಮುಖ್ಯಮಂತ್ರಿಗಳು ಬಹುತೇಕ ಶಾಸಕರು ಹಾಗೂ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ.
ಆ ಸಲುವಾಗಿ ಈಗಾಗಲೇ ದೇಶದ ಹಲವು ಕಡೆಗಳಲ್ಲಿ ಪೂಜ್ಯ ಸ್ವಾಮೀಜಿಯವರ ಉಪಸ್ಥಿತಿ ಮತ್ತು ಮಾರ್ಗದರ್ಶನದಲ್ಲಿ ಧಾರ್ಮಿಕ ಸಭೆಗಳನ್ನು ಪೂರ್ವಭಾವಿಯಾಗಿ ಜರಗಿಸಲಾಗಿದೆ. ಅದೇ ರೀತಿ ಇದೇ ಜೂ.09ರ ಶನಿವಾರ ಸಂಜೆ ಗಂಟೆ 4.00 ಕ್ಕೆ ಸರಿಯಾಗಿ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.
ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ದಿವ್ಯೋಪಸ್ಥಿತಿಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ಸಮಾಜದ ಮಾರ್ಗದರ್ಶಕ ಜಯ ಸಿ. ಸುವರ್ಣ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಸಭಿಕರನ್ನು ಉದ್ದೇಶಿಸಿ ಮಾತನಾಡಲಿರುವರು.
ಸಮಾಜ ಬಾಂಧವರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರಬೇಕೆಂದು ಬಿಲ್ಲವರ ಅಸೋಸಿಯೇಶನಿನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್, ಧಾರ್ಮಿಕ ಉಪಸಮಿತಿ ಕಾರ್ಯಾಧ್ಯಕ್ಷ ಮೋಹನ್ದಾಸ್ ಜಿ.ಪೂಜಾರಿ, ಕಾರ್ಯದರ್ಶಿ ರವೀಂದ್ರ ಎ.ಅಮೀನ್ ಶಾಂತಿ ಈ ಮೂಲಕ ವಿನಂತಿಸಿದ್ದಾರೆ.