Saturday 20th, April 2024
canara news

ನಾರಾಯಣ ಗುರು ಚಿಂತನೆ ಮೈಗೂಡಿಸಿದಾಗ ಮಾನವ ಧರ್ಮ ಫಲಿಸುವುದು

Published On : 10 Jun 2018   |  Reported By : Rons Bantwal


ಬಿಲ್ಲವ ಭವನದಲ್ಲಿ ಸಭೆಯನ್ನುದ್ದೇಶಿಸಿ ಕನ್ಯಾಡಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜೂ.09: ಧರ್ಮವೇ ಶ್ರೇಷ್ಠವಾಗಿದೆ. ಆದುದರಿಂದ ಧರ್ಮ ಉಳಿದರೆ ಮಾತ್ರ ಬದುಕು ಹಸನವಾಗುವುದು. ಸನಾತನ ಹಿಂದೂ ಧರ್ಮದ ಉದ್ದೇಶವೂ ಇದಾಗಿದೆ. ನಾವೂ ನಾರಾಯಣ ಗುರು ಚಿಂತನೆಗೆ ಪ್ರೇರಕರಾದಾಗ ಅದೇ ನಿಜವಾದ ಧರ್ಮವಾಗಿ ಫಲಿಸುವುದು. ಕರ್ಮ ಶುದ್ಧಿ ಒಂದು ಪಾಲಿಸಿದಾಗ ಜೀವನವೇ ಪರಿಪೂರ್ಣವಾಗುವುದು. ಬುದ್ಧಿ ಜ್ಞಾನದಿಂದ ಜಗತ್ತನ್ನು ಆಳಬಹುದು.ಅದಕ್ಕಾಗಿ ದ್ವಂದ ನಿವಾರಣೆ ನಮ್ಮ ಧರ್ಮವಾಗಲಿ. ಎಂದು ಧರ್ಮಸ್ಥಳ ಅಲ್ಲಿನ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಮಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.

ಬರುವ ಸೆಪ್ಟೆಂಬರ್‍ನಲ್ಲಿ ನಡೆಸಲ್ಪಡುವ ಬ್ರಹ್ಮಾನಂದ ಸ್ವಾಮೀಜಿ ಅವರ ಪಟ್ಟಾಭೀಷೇಕ ದಶಮಾನೋತ್ಸವ ಸಂಭ್ರಮ ಮತ್ತು ಶ್ರೀರಾಮ ತಾರಕ ಮಂತ್ರ ಯಜ್ಞ ಹಾಗೂ ಧರ್ಮ ಸಂಸದ್‍ನ ಪೂರ್ವಭಾವಿ ಸಿದ್ಧತಾ ಮುಂಬಯಿ ಸಭೆಯನ್ನುದ್ದೇಶಿಸಿ ಕನ್ಯಾಡಿಶ್ರೀ ಭಕ್ತವೃಂದವನ್ನುದ್ದೇಶಿಸಿ ಮಾತನಾಡಿ ಅನುಗ್ರಹಿಸಿದರು.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮುಂದಾಳುತ್ವದಲ್ಲಿ ಇಂದಿಲ್ಲಿ ಶನಿವಾರ ಸಂಜೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ನಡೆಸಲ್ಪಟ್ಟ ಸಭೆಯಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಹಾಗೂ ಭಾರತ್ ಬ್ಯಾಂಕ್ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ, ಅಸೋಸಿ -ಯೇಶನ್‍ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅವರು ವೇದಿಕೆಯಲ್ಲಿ ಅಸೀನರಾಗಿದ್ದರು.

ಶ್ರೀಗಳು ಮಾತನಾಡಿ ತಮ್ಮ ಆತ್ಮದ ಮೋಕ್ಷದ ಜೊತೆಗೆ ಜನತಾ ಜನಾರ್ದನ ಸೇವೆ, ಅದೇ ಕರ್ಮಯೋಗ. ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ ಹಾಗೆ ನಾವೆಲ್ಲ ಶ್ರದ್ಧಾ ಭಕ್ತಿಯಿಂದ ಲೋಕ ಕಲ್ಯಾಣಕ್ಕಾಗಿ ನಿಸ್ವಾರ್ಥ ಕರ್ಮವನ್ನು ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ನಮ್ಮ ಗುರು ಪೀಠ ವಸುದೈವ ಕುಟುಂಬಕಂ ಎಂಬ ತತ್ವದಡಿ ಎಲ್ಲಾ ಜಾತಿ ಜನಾಂಗಗಳಲ್ಲಿ ಸಂಸ್ಕಾರಯುಕ್ತ ಪ್ರಜೆಗಳನ್ನು ನಿರ್ಮಿಸುವಲ್ಲಿ ಅಹೋರಾತ್ರಿ ಕೆಲಸ ನಿರ್ವಹಿಸುತ್ತಿದೆ. ಯಾವುದೇ ಜಾತಿ, ಮತ, ಪಂಥದ ತಾರತಮ್ಯವಿಲ್ಲದೆ ತಮ್ಮ ಗುರುಕುಲ ಮಾದರಿಯ ಆತ್ಮಾನಂದ ಸರಸ್ವತಿ ವಿದ್ಯಾಲಯದಲ್ಲಿ ನೂರಾರು ಮಕ್ಕಳಿಗೆ ಆಂಗ್ಲ ಮಾಧ್ಯಮದ ಶಿಕ್ಷಣದೊಂದಿಗೆ ಯೋಗ, ಧ್ಯಾನ, ಭಜನೆ, ಸತ್ಸಂಗ, ಭಗವದ್ಗೀತೆ, ವಾಸ್ತು, ಜ್ಯೋತಿಷ್ಯ ಎಲ್ಲವನ್ನೂ ಉಚಿತವಾಗಿ ವಸತಿ ಸೌಲಭ್ಯದೊಂದಿಗೆ ಬೋಧಿಸುದ್ದೇವೆ. ಸಮಾಜದ ಎಲ್ಲಾ ಜಾತಿಯ ಬಡ ಮಕ್ಕಳಿಗೆ ಇದು ಅಸರೆಯಾಗಿದ್ದು, ಇದರ ಖರ್ಚು ವೆಚ್ಚಗಳಿಗೆ ನಾವೂ ಅಹೋರಾತ್ರಿ ಭಗೀರಥ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಸಭೆಯಲ್ಲಿ ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ಭಾಸ್ಕರ ವಿ.ಬಂಗೇರ, ಶಂಕರ ಡಿ.ಪೂಜಾರಿ, ಪುರುಷೋತ್ತಮ ಎಸ್.ಕೋಟ್ಯಾನ್ ಗೌ| ಪ್ರ| ಕೋಶಾಧಿಕಾರಿ ಮಹೇಶ್ ಸಿ.ಕಾರ್ಕಳ, ಯುವಾಭ್ಯುದಯ ಸಮಿತಿ ಮುಖ್ಯಸ್ಥ ನಿಲೇಶ್ ಪೂಜಾರಿ ಪಲಿಮಾರ್, ಕಾರ್ಯಾಧ್ಯಕ್ಷ ಮೋಹನ್‍ದಾಸ್ ಜಿ.ಪೂಜಾರಿ, ಹಾಗೂ ಸೇವಾದಳದ ಜಿಒಸಿ ಗಣೇಶ್ ಕೆ.ಪೂಜಾರಿ, ಮಾಜಿ ಅಧ್ಯಕ್ಷ ಎಲ್.ವಿ ಅಮೀನ್, ಅಸೋಸಿಯೇಶನ್‍ನ ಸಂಚಾಲಕತ್ವದ ಭಾರತ್ ಬ್ಯಾಂಕ್‍ನ ನಿರ್ದೇಶಕರುಗಳಾದ ಭಾಸ್ಕರ್ ಎಂ.ಸಾಲ್ಯಾನ್, ಚಂದ್ರಶೇಖರ ಎಸ್.ಪೂಜಾರಿ, ಗಂಗಾಧರ್ ಜೆ. ಪೂಜಾರಿ, ಸೂರ್ಯಕಾಂತ್ ಜೆ.ಸುವರ್ಣ ಪ್ರಧಾನವಾಗಿ ಉಪಸ್ಥಿತರಿದ್ದರು.

ಸಭೆಯ ಮುನ್ನ ಶ್ರೀಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು ನಂತರ ಶ್ರೀಗಳು ಭವನದ ಮಂದಿರದಲ್ಲಿ ಪ್ರತಿಷ್ಠಾಪಿತ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಪೂಜೆ ನೆರವೇರಿಸಿ ಆರತಿಗೈದರು. ಶ್ರೀಗಳನ್ನು ಜಯ ಸಿ.ಸುವರ್ಣರು ಫಲಪುಷ್ಫಗಳಿಂದ ಗೌರವಿಸಿದರು.

ಅಸೋಸಿಯೇಶನ್‍ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಸ್ವಾಗತಿಸಿದರು. ಕ್ಷೇತ್ರದ ಸಂಚಾಲಕ ಕೃಷ್ಣಪ್ಪ ಪೂಜಾರಿ ಪ್ರಸ್ತಾವಿಕ ನುಡಿಗಳನ್ನಾಡಿ ಕ್ಷೇತ್ರದ ಯೋಜನೆ, ಉದ್ದೇಶವನ್ನು ಮನವರಿಸಿದರು. ಧಾರ್ಮಿಕ ಉಪಸಮಿತಿ ಕಾರ್ಯದರ್ಶಿ ರವೀಂದ್ರ ಶಾಂತಿ ಅವರ ನೇತೃತ್ವದಲ್ಲಿ ಭಜನೆ ನಡೆಸಲ್ಪಟ್ಟಿತು. ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.

ಇದೇ ಶುಭಾವಸರದಲ್ಲಿ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯ ಗತ ವರ್ಷದ ಕೊನೆಯ ಆಟಕ್ಕೆ ಮಂಗಳವನ್ನಾಡಲಾಯಿತು. ಕೊನೆಯಲ್ಲಿ ಸಾಯಿಕೇರ್ ಲಾಜಿಸ್ಟಿಕ್ಸ್ ಸಂಸ್ಥೆಯ ಸುರೇಂದ್ರ ಎ.ಪೂಜಾರಿ ಪರಿವಾರದ ಪ್ರಾಯೋಜಕತ್ವದಲ್ಲಿ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯು ವಿದ್ಯುನ್ಮತಿ ಕಲ್ಯಾಣ ಯಕ್ಷಗಾನ ಬಯಲಾಟ ಪ್ರದರ್ಶಿಸಿದರು.

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here