ಮಂಗಳೂರು: ಗೌರಿ ಲಂಕೇಶ್ ಹತ್ಯೆ ನಡೆಸಿದ ಹಂತಕರ ಬಂಧನದ ಬೆನ್ನಲ್ಲೇ, ವಿಚಾರವಾದಿ ಪ್ರೋ. ನರೇಂದ್ರ ನಾಯಕ್ ಹತ್ಯೆಗೆ ಸ್ಕೆಚ್ ಹಾಕಲಾಗಿದೆಯಾ ಎನ್ನುವ ಆತಂಕ ಕಾಡಲಾರಂಭಿಸಿದೆ. ಕಾರಣ ಜೂನ್ 12 ರಂದು ಆಗಂತುಕನೊಬ್ಬ ಪ್ರೋ. ನರೇಂದ್ರ ನಾಯಕ್ ಅವರು ವಾಸಿಸುವ ಮಂಗಳೂರಿನ ಹ್ಯಾಟ್ ಹಿಲ್ ನಲ್ಲಿರುವ ನೋಯಲ್ ಪಾರ್ಕ್ ಫ್ಲಾಟ್ ಗೆ ಬಂದು ನರೇಂದ್ರ ನಾಯಕ್ ಬಗ್ಗೆ ವಿಚಾರಿಸಿದ್ದ ಎನ್ನಲಾಗಿದೆ.ಆಗಂತುಕ ವ್ಯಕ್ತಿಯ ನಡವಳಿಕೆ ಬಗ್ಗೆ ಪ್ಲ್ಯಾಟ್ ನ ವಾಚ್ ಮ್ಯಾನ್ ಅನುಮಾನಗೊಂಡು ಮರು ಪ್ರಶ್ನೆ ಹಾಕಿದ ಕೂಡಲೇ ಉತ್ತರಿಸಲಾಗದ ಆ ಅಪರಿಚಿತ ವ್ಯಕ್ತಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ತಕ್ಷಣ ಆತನನ್ನು ಹಿಂಬಾಲಿಸಲು ಪ್ರಯತ್ನಿಸಿದರೂ ಆತನನ್ನು ಹಿಡಿಯಲು ಸಾಧ್ಯವಾಗಿಲ್ಲ. ಇವೆಲ್ಲವೂ ಘಟಾನಾವಳಿಗಳೂ ಅಪಾರ್ಟ್ ಮೆಂಟ್ ನ ಸಿಸಿಟಿವಿಯಲ್ಲಿ ದಾಖಲಾಗಿದೆ.
ಈ ಹಿಂದೆ ಕೊಲೆಗೆ ಸಂಚು ರೂಪಿಸಲಾಗಿತ್ತು ಎಂದು ಪ್ರೋ. ನರೇಂದ್ರ ನಾಯಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಹೀಗಾಗಿ ಪೊಲೀಸ್ ಇಲಾಖೆ ಇಬ್ಬರು ಗನ್ ಮ್ಯಾನ್ ಒದಗಿಸಿ ಬಳಿಕ ಒಬ್ಬ ಗನ್ ಮ್ಯಾನ್ ನನ್ನು ಇಲಾಖೆ ಹಿಂಪಡೆದುಕೊಂಡಿತ್ತು.ಇದೀಗ ವಿಚಾರವಾದಿಯಾಗಿರುವ ನರೇಂದ್ರ ನಾಯಕ್ ಹತ್ಯೆಗೆ ಪಿತೂರಿ ನಡೆದಿದೆಯಾ ಎಂಬ ಬಗ್ಗೆ ಚರ್ಚೆಗಳು ಆರಂಭಗೊಂಡಿದೆ.