ಮಂಗಳೂರು: ಮಂಗಳೂರಿನ ಆಗ್ನೆಸ್ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ ಅಥವಾ ಸ್ಕಾರ್ಪ್ ವಿವಾದ ಈಗ ಹೊಸ ತಿರುವು ಪಡೆದಿದೆ. ಕಾಲೇಜಿನಲ್ಲಿ ಹಿಜಾಬ್ ನಿಷೇಧಿಸಿದ ಕಾಲೇಜಿನ ಆಡಳಿತ ಮಂಡಳಿಯ ನಿಯಮವನ್ನು ವಿರೋಧಿಸದ ಕೆಲ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಬೆದರಿಕೆ ಕರೆಗಳು ಬರುತ್ತಿವೆ.ಮಂಗಳೂರಿನ ಪ್ರತಿಷ್ಠಿತ ಸೈಂಟ್ ಆಗ್ನೆಸ್ ಕಾಲೇಜು, ಕಾಲೇಜಿನ ತರಗತಿ ಒಳಗೆ ಸ್ಕಾರ್ಫ್ ಅಥವಾ ಹಿಜಾಬ್ ಧರಿಸುವಂತಿಲ್ಲ ಎಂಬ ನಿಯಮ ವಿಧಿಸಿದೆ. ಕಾಲೇಜಿನ ಅಡಳಿತ ಮಂಡಳಿಯ ಕ್ರಮವನ್ನು ವಿರೋಧಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕಾರ್ಯಕರ್ತರ ನೇತೃತ್ವದಲ್ಲಿ ಆಗ್ನೆಸ್ ಕಾಲೇಜಿನ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಕೆಲದಿನಗಳ ಹಿಂದೆ ಕಾಲೇಜಿನ ಎದುರು ಪ್ರತಿಭಟನೆ ನಡೆಸಿದ್ದರು.
ಆದರೆ, ಕಾಲೇಜು ಆಡಳಿತ ಮಂಡಳಿ ಯಾವುದೇ ರೀತಿಯಲ್ಲೂ ಈ ಪ್ರತಿಭಟನೆಗೂ ಮಣಿದಿರಲಿಲ್ಲ. ಈ ನಡುವೆ, ಕಾಲೇಜಿನ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ನೌರೀನ್ ಎಂಬವರಿಗೆ ವಿದೇಶದಿಂದ ಬೆದರಿಕೆ ಕರೆ ಬಂದಿದ್ದನ್ನು ಹೇಳಿಕೊಂಡಿದ್ದಾರೆ."'ಜಸ್ಟಿಸ್ ಫಾರ್ ಸ್ಕಾರ್ಫ್ ಆ್ಯಂಡ್ ನಮಾಝ್' ಎನ್ನುವ ವಾಟ್ಸಪ್ ಗ್ರೂಪಿನಲ್ಲಿ ಸ್ಕಾರ್ಫ್ ವಿವಾದಕ್ಕೆ ಸಂಬಂಧಿಸಿ ಚರ್ಚೆ ನಡೆದಿತ್ತು. ತಾನು ಮಾತ್ರ ಚರ್ಚೆಗೆ ಸ್ಪಂದಿಸಿರಲಿಲ್ಲ. ಅಲ್ಲದೆ, ಚರ್ಚೆಯ ಮಧ್ಯೆಯೇ ಗ್ರೂಪಿನಿಂದ ಲೆಫ್ಟ್ ಆಗಿದ್ದೆ. ಆದರೆ, ಇದಕ್ಕೆ ಸಂಬಂಧಿಸಿ ಅನಾಮಿಕರೊಬ್ಬರು ಸೌದಿಯಿಂದ ಕರೆಮಾಡಿ, ಬೆದರಿಕೆ ಹಾಕಿದ್ದಾರೆ," ಎಂದು ನೌರಿನ್ ತಿಳಿಸಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ನೌರೀನ್ ಮುಂದಾಗಿದ್ದಾರೆ.