ಮುಂಬಯಿ, ಜೂ.30: ಸರಕಾರದ ಪ್ರತಿಷ್ಠಿತ ಪಂಪಾ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿರುವ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಅವರ ಬದುಕು ಬರಹ ಸಮಾಜಕ್ಕೆ ಆದರ್ಶ. ಅವರ ಚಿಂತನೆಯ ವಿಚಾರ ಧಾರೆ, ಬದುಕಿನ ರೀತಿ-ನೀತಿ ಅನುಕರಣಿಯವಾದುದು ಎಂದು ಮಂಗಳೂರು ಆಕಾಶವಾಣಿ ಕಾರ್ಯಕ್ರಮ ನಿರ್ಮಾಪಕರಾದ ಡಾ| ಸದಾನಂದ ಪೆರ್ಲ ಅಭಿಪ್ರಾಯ ಪಟ್ಟರು.
ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ, ಶ್ರೀ ಗೋಕರ್ಣ ನಾಗೇಶ್ವರ ಕಾಲೇಜಿನ ಸಹಭಾಗಿತ್ವದಲ್ಲಿ ನಡೆಸಿದ ಕಯ್ಯಾರರ ನೆನಪು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಯ್ಯಾರ ಅವರ ಬದುಕು ಬರಹ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು ಮಾತನಾಡಿ ಸಾಹಿತ್ಯ ಸಂಸ್ಕೃತಿಯ ಅರಿವು ಯುವ ಪೀಳಿಗೆಗೆ ಆಗಬೇಕಾದರೆ ಹಿರಿಯರ ಆದರ್ಶವನ್ನು ಮನಗಾಣಿಸಬೇಕು. ಆ ದಿಸೆಯಲ್ಲಿ ಕಯ್ಯಾರ ಅವರ ನೆನಪು ಅರ್ಥಪೂರ್ಣವಾದುದು ಎಂದು ಅಭಿಪ್ರಾಯ ಪಟ್ಟರು.
ಕವಿ ಕಯ್ಯಾರ ಸುಪುತ್ರ ಡಾ| ಪ್ರಸನ್ನ ರೈ ಅಭ್ಯಾಗತರಾಗಿದ್ದು ಈ ಸಂದರ್ಭದಲ್ಲಿ ಕಾಲೇಜಿನ ಕನ್ನಡ ಸಂಘದ ಉದ್ಘಾಟನೆ ನೇರವೇರಿತು. ಕಾಲೇಜಿನ ಪ್ರಾಂಶುಪಾಲರಾದ ಡಾ| ರೇಣುಕಾ ಕೆ. ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದು ಕ್ಷಮಾ ಎನ್.ರಾವ್, ವಿಘ್ನೇಶ್ ಬಿ., ಕು| ಸುರಕ್ಷಾ ಉಪಸ್ಥಿತರಿದ್ದರು.
ಕಾಲೇಜ್ನ ಕನ್ನಡ ಸಂಘದ ನಿರ್ದೇಶಕ ಡಾ| ದಿನಕರ ಎಸ್.ಪಚ್ಚುನಾಡಿ ಕಾರ್ಯಕ್ರಮ ನಿರೂಪಿಸಿದರು. ರತ್ನಾವತಿ ಜೆ.ಬೈಕಾಡಿ ಕಯ್ಯಾರು ಅವರ ಹಾಡುಗಳನ್ನು ಪ್ರಸ್ತುತಪಡಿಸಿದರು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕಧ್ಯಕ್ಷೆ ಕೆ.ವಿಜಯಲಕ್ಷ್ಮೀ ಸ್ವಾಗತಿಸಿದರು. ಕೋಶಾಧಿಕಾರಿ ವೈ.ಕೃಷ್ಣಮೂರ್ತಿ ವಂದಿಸಿದರು.