ವಿಜಯಪುರ (134 ಶಾಲೆಗಳಿಗೆ 5500 ಜೊತೆ), ಯಾದಗಿರಿ (109 ಶಾಲೆಗಳಿಗೆ 1000 ಜೊತೆ) ಕಲ್ಬುರ್ಗಿ (103 ಶಾಲೆಗಳಿಗೆ 995 ಜೊತೆ) ಬೀದರ್ (107 ಶಾಲೆಗಳಿಗೆ 1038 ಜೊತೆ)
ಈ ವರೆಗೆ ರಾಜ್ಯದ 29 ಜಿಲ್ಲೆಗಳ 9831 ಶಾಲೆಗಳಿಗೆ 21.46 ಕೋಟಿ ರೂ. ಮೌಲ್ಯದ 56,930 ಜೊತೆ ಡೆಸ್ಕ್, ಬೆಂಚುಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದ ವತಿಯಿಂದ ಶೇ.80ರ ಸಹಾಯಧನದಲ್ಲಿ 18.13 ಕೋಟಿ ರೂ. ವಿನಿಯೋಗಿಸಲಾಗಿದೆ. ಇದರಿಂದಾಗಿ 2.70 ಲಕ್ಷ ವಿದ್ಯಾರ್ಥಿಗಳಿಗೆ ಉತ್ತಮ ಆಸನ ವ್ಯವಸ್ಥೆ ಒದಗಿಸಲಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಮಂಗಳವಾರ ಧರ್ಮಸ್ಥಳದಲ್ಲಿ ಕಲ್ಬುರ್ಗಿ ಪ್ರಾದೇಶಿಕ ವ್ಯಾಪ್ತಿಯ ವಿಜಯಪುರ, ಯಾದಗಿರಿ, ಕಲ್ಬುರ್ಗಿ ಮತ್ತು ಬೀದರ್ ಜಿಲ್ಲೆಗಳ 453 ಶಾಲೆಗಳಿಗೆ ಡೆಸ್ಕ್-ಬೆಂಚುಗಳನ್ನು ಸಾಂಕೇತಿಕವಾಗಿ ವಿತರಿಸಿ ಮಾತನಾಡಿದರು.
ಪರಿಸರ ಸ್ನೇಹಿ ಪೀಠೋಪಕರಣಗಳು: ಡೆಸ್ಕ್, ಬೆಂಚುಗಳ ತಯಾರಿಕೆಯಲ್ಲಿ ಮರದ ಬಳಕೆ ಮಾಡದೆ ಸಿಮೆಂಟಿನಿಂದ ರಚಿಸಿ ಪರಿಸರ ಸಂರಕ್ಷಣೆಗೆ ವಿಶೇಷ ಒತ್ತು ನೀಡಲಾಗಿದೆ ಎಂದು ಅವರು ಹೇಳಿದರು.
ಒಂದು ಜೊತೆ ಡೆಸ್ಕ್ ಮತ್ತು ಬೆಂಚು ತಯಾರಿಸಲು 3 ಘನ ಅಡಿ ಮರದ ಅಗತ್ಯವಿದ್ದು ಸಿಮೆಂಟ್ ಬಳಸಿ ತಯಾರಿಸುವುದರಿಂದ ಈ ವರೆಗೆ 1,58,716 ಜೊತೆ ಡೆಸ್ಕ್, ಬೆಂಚು ತಯಾರಿಸಿ 1,58,148 ಘನ ಅಡಿ ಮರ ಉಳಿತಾಯ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಶೇ. 20 ಶಾಲಾಭಿವೃದ್ಧಿ ಸಮಿತಿಯವರು ಭರಿಸಿದರೆ, ಶೇ.80 ರಷ್ಟು ಹಣ ಧರ್ಮಸ್ಥಳದ ವತಿಯಿಂದ ನೀಡಲಾಗುತ್ತದೆ. ನೇರವಾಗಿ ಶಾಲೆಗಳಿಗೆ ಪೀಠೋಪಕರಣಗಳನ್ನು ವಿತರಿಸಲಾಗುತ್ತದೆ.
ತೆಂಗಿನ ನಾರಿನ ಡೆಸ್ಕ್, ಬೆಂಚುಗಳು: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಶಾಲೆಗಳಿಗೆ ತೆಂಗಿನ ನಾರಿನ ಡೆಸ್ಕ್, ಬೆಂಚುಗಳನ್ನು ನೀಡಲಾಗುವುದು ಎಂದು ಹೆಗ್ಗಡೆಯವರು ಪ್ರಕಟಿಸಿದರು.
ವಿಜಯಪುರ ಜಿಲ್ಲೆಗೆ 66 ಲಕ್ಷ ರೂ. ಮೌಲ್ಯದ 1200 ಜೊತೆ ಡೆಸ್ಕ್, ಬೆಂಚುಗಳನ್ನು ನೀಡಲಾಗುತ್ತದೆ.
ಪರಿಸರ ಸ್ನೇಹಿ ತೆಂಗಿನ ನಾರಿನ ಡೆಸ್ಕ್, ಬೆಂಚುಗಳನ್ನುಒದಗಿಸಲು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ತ್ಯಾಗಟನೂರು ತೆಂಗಿನ ನಾರಿನ ಕುಶಲ ಕೈಗಾರಿಕಾ ಸಹಕಾರಿ ಸಂಸ್ಥೆ ಒಪ್ಪಿಕೊಂಡಿದೆ.
ತೆಂಗಿನ ಕಾಯಿಯ ಸಿಪ್ಪೆಯಿಂದ ತೆಗೆದ ನಾರಿನಿಂದ ಪರಿಸರ ಸ್ನೇಹಿ ಡೆಸ್ಕ್ ಬೆಂಚುಗಳನ್ನು ತಯಾರಿಸಲಾಗುತ್ತಿದೆ. ಪರಿಸರ ಸಂರಕ್ಷಣೆಗೆ ಇದೊಂದು ಅಮೂಲ್ಯ ಕೊಡುಗೆಯಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸಸಿ ನಾಟಿ, ಸಾಲು ಮರ ನಾಟಿ ಬೀಜದುಂಡೆಗಳ ಬಳಕೆ, ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಅಭಿಯಾ£,À ಪರಿಸರ ಸಂರಕ್ಷಣೆಗೆ ಒತ್ತು ನೀಡುತ್ತಾ ಬಂದಿದ್ದು ಇದೀಗ ತೆಂಗಿನ ನಾರಿನ ಪೀಠೋಪಕರಣಗಳ ಬಳಕೆ ಮತ್ತೊಂದು ವಿನೂತನ ಕಾರ್ಯಕ್ರಮವಾಗಿದೆ. ತೆಂಗು ಬೆಳೆಯುವ ರೈತರಿಗೂ ಹೊಸ ಮನ್ನಣೆ ದೊರಕಿದೆ.
ಹೇಮಾವತಿ ವಿ. ಹೆಗ್ಗಡೆ, ಸಮುದಾಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಬಿ. ಜಯರಾಮ ನೆಲ್ಲಿತ್ತಾಯ, ತಾಂತ್ರಿಕ ಯೋಜನಾಧಿಕಾರಿ ಪುಷ್ಪರಾಜ್, ಉಜಿರೆಯ ಲಕ್ಷ್ಮಿ ಗ್ರೂಪ್ಸ್ನ ಮಾಲಕ ಮೋಹನ ಉಜಿರೆ ಮತ್ತು ಎ.ವಿ. ಶೆಟ್ಟಿ ಉಪಸ್ಥಿತರಿದ್ದರು.