ಮಂಗಳೂರು: ಕರಾವಳಿಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಸಾಮಾನ್ಯವಾಗಿ ಕಾಡುವ ಡೆಂಗ್ಯೂ ಜ್ವರದಿಂದಾಗಿ ಜಿಲ್ಲೆಯಲ್ಲಿ ರಕ್ತಕ್ಕಾಗಿ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಈ ಸಮಸ್ಯೆ ವಿಪರೀತವಾಗಿದ್ದು, ರಕ್ತಕ್ಕಾಗಿ ರೋಗಿಗಳನ್ನು ನಗರಕ್ಕೆ ಕರೆದುಕೊಂಡು ಬರಲಾಗುತ್ತಿದೆ.ಕರಾವಳಿಯಲ್ಲಿ ಮಳೆಗಾಲ ಬಂತೆಂದರೆ ಡೆಂಗ್ಯೂ, ಮಲೇರಿಯಾದಂತ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗುತ್ತದೆ. ಅದರಲ್ಲೂ ಡೆಂಗ್ಯೂ ಜ್ವರದ ಹಾವಳಿಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಚಿಕಿತ್ಸೆ ನೀಡುವ ವೈದ್ಯರು ರಕ್ತದ ಪ್ಲೇಟ್ ಲೆಟ್ ಹೆಚ್ಚಿಸಲು ಪರದಾಡುತ್ತಿದ್ದಾರೆ.
ರೋಗಿಗಳ ಸಂಬಂಧಿಕರಂತೂ ರಕ್ತಕ್ಕಾಗಿ ಅಲೆದಾಡುತ್ತಿದ್ದು, ನಗರ ಪ್ರದೇಶಗಳಿಗೆ ಬಂದರೂ ತಮಗೆ ಬೇಕಾದ ಪ್ಲೇಟ್ ಲೆಟ್ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.ಡೆಂಗ್ಯೂ ಪೀಡಿತರನ್ನು ಸಾಮಾನ್ಯವಾಗಿ ಕಾಡುವ ಸಮಸ್ಯೆ ರಕ್ತದಲ್ಲಿ ಪ್ಲೆಟ್ ಲೆಟ್ ಕಡಿಮೆಯಾಗುವುದು. ಡೆಂಗ್ಯೂ ಜ್ವರ ಬಂದರೆ ಏಕಾಏಕಿ ರೋಗಿಯ ದೇಹದ ಪ್ಲೇಟ್ ಲೆಟ್ ದಿನಕ್ಕೆ 20 ಸಾವಿರದಂತೆ ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ಮನುಷ್ಯನ ದೇಹದಲ್ಲಿ ಪ್ಲೇಟ್ ಲೆಟ್ 1.5 ಲಕ್ಷದಿಂದ 4 ಲಕ್ಷದವರೆಗೆ ಇರುತ್ತದೆ. ಆದರೆ ಪ್ಲೇಟ್ ಲೆಟ್ ಪ್ರಮಾಣ 40 ಸಾವಿರಕ್ಕಿಂತ ಕಡಿಮೆಯಾದರೆ ರೋಗಿಗೆ ರಕ್ತ ನೀಡಬೇಕಾಗುತ್ತದೆ.ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ ಭಾಗದಲ್ಲಿ ಡೆಂಗ್ಯೂ ಜ್ವರದ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.