ಹಿರಿಯರ ತ್ಯಾಗಮಯ ಜೀವನ ಬದುಕಿನ ಸುಧಾರಣೆಗೆ ನಾಂದಿ: ನಿತ್ಯಾನಂದ ಡಿ.ಕೋಟ್ಯಾನ್
(ಚಿತ್ರ / ವರದಿ: ರೊನಿಡಾ ಮುಂಬಯಿ)
ಮುಂಬಯಿ, ಜು.01: ಮಾನವೀಯ ಮೌಲ್ಯದೊಂದಿಗೆ ಪ್ರಾಮಾಣಿಕವಾಗಿ ಅಧಿಕಾರ ನಿಭಾಯಿಸಿದಾಗ ಬಲಾಢ್ಯ ಸಾಂಘಿಕ ಶಕ್ತಿ ಹೊರ ಹೊಮ್ಮಲು ಸಾಧ್ಯ ಎಂಬುವುದನ್ನು ಬಿಲ್ಲವರ ಅಸೋಸಿಯೇಶನ್ ಸಾಭೀತುಪಡಿಸಿದೆ. ರಚನಾತ್ಮಕ ಕೆಲಸದೊಂದಿಗೆ ಪಾರದರ್ಶಕತೆಯನ್ನು ಉಳಿಸಿಕೊಂಡು ಬಿಲ್ಲವರು ವಿಶ್ವಮಟ್ಟದಲ್ಲಿ ಕೇಂದ್ರೀಕೃತಗೊಂಡು ಬಲಿಷ್ಟ ಸಂಘಟನೆಗೆ ಮುಂದಾಗಬೇಕು. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಂದೇಶ, ಅಭಿವೃದ್ಧಿಗಳ ಹರಿಕಾರ, ದೂರದೃಷ್ಟಿತ್ವದ ಬಿಲ್ಲವರ ಸಮಾಜದ ಮುಖಂಡ ಜಯ ಸಿ. ಸುವರ್ಣ ಅವರ ಕಾರ್ಯಯೋಜನೆಗಳನ್ನು ಕಾರ್ಯಗತಗೊಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಶತಮಾನಗಳ ಹಿರಿಯರ ತ್ಯಾಗಮಯ ಜೀವನ ನಮ್ಮ ಬದುಕಿನ ಸುಧಾರಣೆಗೆ ನಾಂದಿಯಾಯಿತು. ಅವರ ಸೇವೆಗೆ ಗೌರವಕೊಟ್ಟು ಯುವ ಶಕ್ತಿ ಮುಂದುವರಿಯಬೇಕು. ಬಿಲ್ಲವರ ಅಸೋಸಿಯೇಶನ್ ಮತ್ತು ಬಿಲ್ಲವ ಜಾಗೃತಿ ಬಳಗ ವಿಲೀನಗೊಂಡು ಭಾವನಾತ್ಮಕ ಬೆಸುಗೆಯಲ್ಲಿ ಇಂದಿನ ಸಭೆ ನಡೆದಿದೆ. ಈವರೆಗೆ ಸಹಕರಿಸಿದ ಕಾರ್ಯಕಾರಿ ಸಮಿತಿ, ಉಪಸಮಿತಿ, ಮಹಿಳಾ ವಿಭಾಗದವರಿಗೆ, ಸ್ಥಳೀಯ ಸಮಿತಿ, ಸೇವಾದಳ ಹಾಗೂ ಹಿತೈಷಿಗಳಿಗೆ ಅಂತರಾಳದ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ, ಭವಿಷ್ಯದಲ್ಲೂ ಅಸೋಸಿಯೇಶನ್ನನ್ನು ನಾವೆಲ್ಲರು ಒಟ್ಟಾಗಿ, ಒಮ್ಮತದಿಂದ ಅಭಿವೃದ್ಧಿಯತ್ತ ಕೊಂಡೊಯ್ಯೋಣ ಎಂದು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ನುಡಿದರು.
ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಶ್ರೀ ನಾರಾಯಣಗುರು ಸಭಾಗೃಹದಲ್ಲಿ ನಡೆಸಲ್ಪಟ್ಟ ಬಿಲ್ಲವರ ಅಸೋಸಿಯೇಶನ್ ಮುಂಬಯಿ ತನ್ನ 86ನೇ ವಾರ್ಷಿಕ ಮಹಾಸಭೆಯನ್ನು ನಡೆಸಿದ್ದು ಸಭೆಯ ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ನಿತ್ಯಾನಂದ ಕೋಟ್ಯಾನ್ ಮಾತನಾಡಿದರು.
ಸಭೆಯ ಆದಿಯಲ್ಲಿ ಭವನದ ಮಂದಿರದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ ಅವರು ಗುರುಗಳ ಪ್ರತಿಮೆಗೆ ಪುಷ್ಪಾರ್ಚನೆಗೈದು ಆರತಿಗೈದು ಮಹಾಸಭೆಗೆ ಚಾಲನೆ ನೀಡಿದರು. ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ ಅವರು ಶ್ರೀ ನಾರಾಯಣಗುರು ಹಾಗೂ ಕೋಟಿಚೆನ್ನಯರಿಗೆ ಪೂಜೆ ನೆರವೇರಿಸಿದರು.
ಜಯ ಸುವರ್ಣ ಅವರು ಅಸೋಸಿಯೇಶನ್ನ ನೂತನ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಅಭಿನಂದಿಸಿ ಶುಭ ಹಾರೈಸಿದರು.
ಎನ್.ಟಿ ಪೂಜಾರಿ ಮಾತನಾಡಿ ಅಹಂ ಮತ್ತು ಬಿಗುಮಾನಗಳನ್ನು ದೂರವಿಟ್ಟು ಸಮುದಾಯಕ್ಕಾಗಿ ನಿಸ್ವಾರ್ಥವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಸಮಾಜದ ಅಭ್ಯುದಯ ಮತ್ತು ಏಕತೆಗೆ ನಾನು ಯಾವ ತ್ಯಾಗಕ್ಕೂ ಸಿದ್ಧನಿದ್ದೇನೆ. ಕೇಂದ್ರ ಕಾರ್ಯಕಾರಿ ಸಮಿತಿಗೆ ಆಯ್ಕೆಯಾದ ಸದಸ್ಯರು, ಸ್ಥಳೀಯ ಕಚೇರಿ ಇಲ್ಲವೆ ವಿವಿಧ ಉಪಸಮಿತಿಗಳಲ್ಲಿ ಸೇರಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆನೀಡಿದರು.
ಅಸೋಸಿಯೇಶನ್ನ ಉಪಾಧ್ಯಕ್ಷರುಗಳಾದ ಡಾ| ಯು.ಧನಂಜಯ ಕುಮಾರ್, ಶಂಕರ ಡಿ.ಪೂಜಾರಿ, ನ್ಯಾ| ರಾಜಾ ವಿ.ಸಾಲ್ಯಾನ್, ಪುರುಷೋತ್ತಮ ಎಸ್.ಕೋಟ್ಯಾನ್, ಗೌ| ಪ್ರ| ಕೋಶಾಧಿಕಾರಿ ಮಹೇಶ್ ಸಿ.ಕಾರ್ಕಳ, ಗೌ| ಜೊತೆ ಕಾರ್ಯದರ್ಶಿಗಳಾದ ಧನಂಜಯ ಎಸ್.ಕೋಟ್ಯಾನ್, ಹರೀಶ್ ಜಿ.ಸಾಲ್ಯಾನ್, ಪ್ರೇಮನಾಥ ಪಿ.ಕೋಟ್ಯಾನ್, ಆಶಾಲತಾ ಎಸ್.ಕೋಟ್ಯಾನ್, ಕೇಶವ ಕೆ.ಕೋಟ್ಯಾನ್, ಗೌ| ಜೊತೆ ಕೋಶಾಧಿಕಾರಿಗಳಾದ ರಾಜೇಶ್ ಜೆ.ಬಂಗೇರ, ಶಿವರಾಮ ಎಸ್.ಪೂಜಾರಿ, ಸದಾಶಿವ ಎ.ಕರ್ಕೇರ, ಮೋಹನ್ ಡಿ.ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್, ಯುವಾಭ್ಯುದಯ ಉಪ ಸಮಿತಿ ಮುಖ್ಯಸ್ಥ ನಿಲೇಶ್ ಪೂಜಾರಿ ಪಲಿಮಾರ್ ಹಾಗೂ ಸೇವಾದಳದ ಜಿಒಸಿ ಗಣೇಶ್ ಕೆ.ಪೂಜಾರಿ, ಸದಸ್ಯರುಗಳಾದ ಮೋಹನ್ದಾಸ್ ಜಿ. ಪೂಜಾರಿ, ಎಂ. ಆನಂದ ಪೂಜಾರಿ, ಬಿ. ರವೀಂದ್ರ ಅಮೀನ್, ರವೀಂದ್ರ ಎ. ಅಮೀನ್, ಬೇಬಿ ಎಸ್. ಕುಕ್ಯಾನ್, ಶ್ರೀನಿವಾಸ ಆರ್. ಕರ್ಕೇರ, ದಯಾನಂದ ಆರ್. ಪೂಜಾರಿ, ಡಾ| ರಾಜಶೇಖರ್ ಕೋಟ್ಯಾನ್, ವಿಶ್ವನಾಥ ತೋನ್ಸೆ, ದಿನೇಶ್ ಅಮೀನ್, ಪದ್ಮನಾಭ ಎ. ಪೂಜಾರಿ, ಸುಮಿತ್ರಾ ಎಸ್. ಬಂಗೇರ, ನಾಗೇಶ್ ಎಂ. ಕೋಟ್ಯಾನ್, ಅಶೋಕ್ ಕೆ. ಕುಕ್ಯಾನ್ ಸಸಿಹಿತ್ಲು, ಉಮೇಶ್ ಎನ್. ಕೋಟ್ಯಾನ್, ಭಾಸ್ಕರ ಕರ್ನಿರೆ ಅಂತರಿಕ ಲೆಕ್ಕ ಪರಿಶೋಧಕರಾದ ಸಚಿನ್ ಎಸ್.ಪೂಜಾರಿ ಮತ್ತು ದಿವಾಕರ್ ಎನ್.ಪೂಜಾರಿ ಸೇರಿದಂತೆ ಅಸೋಸಿಯೇಶನ್ನ 22 ಸ್ಥಳೀಯ ಕಚೇರಿಗಳ ಮತ್ತು ವಿವಿಧ ಉಪಸಮಿತಿಗಳ ಮುಖ್ಯಸ್ಥರು, ಪದಾಧಿಕಾರಿಗಳು ವೇದಿಕೆಯಲ್ಲಿ ಆಸೀನರಾಗಿದ್ದರು.
ಇದೇ ಸಂದರ್ಭದಲ್ಲಿ ಸಾಹಿತ್ಯ, ಉದ್ದಿಮೆ, ಸಮಾಜ ಸೇವೆಯಲ್ಲಿ ವಿಶಿಷ್ಟ ಸೇವೆಗೈದ ಅಕ್ಷಯ ಮಾಸಿಕದ ಮಾಜಿ ಗೌರವ ಸಂಪಾದಕ ಎಂ. ಬಿ. ಕುಕ್ಯಾನ್ ಅವರನ್ನು ಜ್ಞಾನ ಭಾಸ್ಕರ ಬಿರುದು ಪ್ರದಾನಿಸಿದರು. ಲೆಫ್ಟಿನೆಂಟ್ ಕರ್ನಲ್ ಲಕ್ಷ್ಮೀಶ್ ಸುವರ್ಣ ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಂಸ್ಥೆಯ ಪದಾಧಿಕಾರಿಗಳು ಸಮ್ಮಾನಿಸಿ ಅಭಿನಂದಿಸಿದರು.
ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್ ಸ್ವಾಗತಿಸಿ ಗತ ವಾರ್ಷಿಕ ಮಹಾಸಭೆಯ ವರದಿ ವಾಚಿಸಿದರು. ಅಕ್ಷಯ ಮಾಸಿಕದ ಸಹ ಸಂಪಾದಕ ಹರೀಶ್ ಕೆ.ಹೆಜ್ಮಾಡಿ ಸನ್ಮಾನಿತರನ್ನು ಪರಿಚಯಿಸಿದರು. ಕಾರ್ಯಕಾರಿ ಸಮಿತಿಯ ವಾರ್ಷಿಕ ವರದಿ ಮತ್ತು ಗತವಾರ್ಷಿಕ ಲೆಕ್ಕಪತ್ರಗಳ ಮಾಹಿತಿಯನ್ನು ಸದಸ್ಯರು ಮಂಡಿಸಿದರು. ಬಳಿಕ ಅಸೋಸಿಯೇಶನ್ನ 2018-21ರ ಮೂರು ವರ್ಷಗಳ ಕಾಲಾವಧಿಯ ಕಾರ್ಯಕಾರಿ ಸಮಿತಿಗೆ 30 ಸದಸ್ಯರುಗಳ ಹೆಸರಗಳನ್ನು ಧರ್ಮಪಾಲ ಜಿ.ಅಂಚನ್ ಅವರು ಪ್ರಕಟಿಸಿದರು.
ಅಸೋಸಿಯೇಶನ್ನ ಧುರೀಣರುಗಳಾದ ವಾಸುದೇವ ಆರ್.ಕೋಟ್ಯಾನ್, ಭಾರತ್ ಬ್ಯಾಂಕ್ನ ನಿರ್ದೇಶಕರನೇರು, ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ, ಸಿಎ| ಅಶ್ವಜಿತ್ ಹೆಜ್ಮಾಡಿ, ಗುರುನಾರಾಯಣ ರಾತ್ರಿ ಶಾಲೆಯ ಕಾರ್ಯಾಧ್ಯಕ್ಷಬನ್ನಂಜೆ ರವೀಂದ್ರ ಅಮೀನ್, ಉಮೇಶ್ ಕರ್ಕೇರ, ಗುರುನಾರಾಯಣ ರಾತ್ರಿ ಶಾಲೆಯಲ್ಲಿ ಈ ಬಾರಿ ಎಸ್ಎಸ್ಸಿ ಫಲಿತಾಂಶದಲ್ಲಿ ಅತ್ಯಧಿಕ ಅಂಕ ಪಡೆದಿರುವ ಕಿಶೋರ್ ಶಂಕರ್ ಪವಾರ್, ಅರ್ಜುನ ಕಾಂಬ್ಳೆ, ಗಂದಾಧರ ಕ್ಯಾತಿ, ಬಿಲ್ಲವರ ಎಸೋಸಿಯೇಶನ್ ಸಾಧನೆಯ ಬಗ್ಗೆ ಸಾಕ್ಷ್ಯ ಚಿತ್ರವನ್ನು ನಿರ್ಮಿಸಿರುವ ದಿನೇಶ ಅಂಚನ್ ಅವರನ್ನು ಶಾಲು ಹೊದಿಸಿ ಹೂಗುಚ್ಛ ನೀಡಿ ಜಯ ಸಿ.ಸುವರ್ಣ ಅವರು ಗೌರವಿಸಿದರು.
ವರದ ಉಳ್ಳಾಲ್, ಶ್ರೀನಿವಾಸ ಪೂಜಾರಿ, ಶಂಕರಡಿ.ಸುವರ್ಣ, ಎಂ.ಬಿ ಸನೀಲ್, ಎಲ್.ಬಿ ಬಂಗೇರ, ಜಯಕರ ಡಿ.ಪೂಜಾರಿ, ಕೆ.ಎಂ. ಮಾಬಿಯಾನ್, ಕೆ.ಆರ್ ಪೂಜಾರಿ, ಚಂದಯ್ಯ ಪೂಜಾರಿ ಸಭಿಕರ ಪರವಾಗಿ ಮಾತನಾಡಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಸಲಹೆ, ಸೂಚನೆಗಳನ್ನಿತ್ತರು.
ಕು| ವಿಧಿತಾ ಎ. ಪೂಜಾರಿ ಪ್ರಾರ್ಥನೆಯನ್ನಾಡಿದರು. ಗತ ವಾರ್ಷಿಕ ಸಾಲಿನಲ್ಲಿ ಅಗಲಿದ ಅಸೋಸಿಯೇಶನ್ನ ಸದಸ್ಯರು, ಹಿತೈಷಿಗಳು ಮತ್ತು ಗಣ್ಯರಿಗೆ ಸಭೆಯ ಆದಿಯಲ್ಲಿ ಸಂತಾಪ ಸೂಚಿಸಿ ಸದ್ಗತಿ ಕೋರಲಾಯಿತು. ಧರ್ಮಪಾಲ ಜಿ.ಅಂಚನ್ ವಂದನಾರ್ಪಣೆಗೈದರು. ರಾಷ್ಟ್ರಗೀತೆಯೊಂದಿಗೆ ಸಭೆ ಸಮಾಪನ ಗೊಂಡಿತು.