ಪ್ರಸಿದ್ದ ಕಲಾವಿದರ ಕೂಡುವಿಕೆಯೊಂದಿಗೆ ಶರಸೇತು ಬಂಧನ ಯಕ್ಷಗಾನ ತಾಳಮದ್ದಳೆ
ಮುಂಬಯಿ (ಬದಿಯಡ್ಕ), ಆ.11: ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಪಾದಂಗಳ 58ನೇ ಚಾತುರ್ಮಾಸ್ಯದ ಆರನೇ ದಿನವಾದ ಕಳೆದ ಮಂಗಳವಾರ ಶ್ರೀಮಠದಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ಶ್ರದ್ದಾ ಭಕ್ತಿಯಿಂದ ನೆರವೇರಿದವು.
ಯಕ್ಷಗಾನ ಕ್ಷೇತ್ರದಲ್ಲಿ ಸ್ವತಃ ಭಾಗವತರಾದ ಶ್ರೀಕೇಶವಾನಂದ ಭಾರತೀ ಪಾದಂಗಳು ಸಾಂಸ್ಕøತಿಕತೆಯ ಮೂಲಕ ಮಧುರ ಸಮಾಜ ನಿರ್ಮಾಣದಲ್ಲಿ ತಮ್ಮದೇ ಕೊಡುಗೆಗಳನ್ನು, ಅಸಂಖ್ಯ ಶಿಷ್ಯರನ್ನು ಹೊಂದಿದ್ದು, ಶ್ರೀ ಎಡನೀರು ಮಠದಲ್ಲಿ ಮಂಗಳವಾರ ಸಂಜೆ ಪ್ರಸಿದ್ದ ಕಲಾವಿದರ ಕೂಡುವಿಕೆಯೊಂದಿಗೆ ಶರಸೇತು ಬಂಧನ ಯಕ್ಷಗಾನ ತಾಳಮದ್ದಳೆ ಜನಮನ ಸೆಳೆಯಿತು.
ಹಿಮ್ಮೇಳದಲ್ಲಿ ಪದ್ಯಾಣ ಗಣಪತಿ ಭಟ್, ದಿನೇಶ್ ಅಮ್ಮಣ್ಣಾಯ, ಪದ್ಯಾಣ ಶಂಕರನಾರಾಯಣ ಭಟ್, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಕೃಷ್ಣಪ್ರಕಾಶ ಉಳಿಯತ್ತಾಯ, ಲವಕುಮಾರ ಐಲ ಹಾಗೂ ಮುಮ್ಮೇಳದಲ್ಲಿ ಡಾ| ರಮಾನಂದ ಬನಾರಿ (ವೃದ್ದ ಬ್ರಾಹ್ಮಣ), ವಿದ್ವಾನ್ ಉಮಾಕಾಂತ ಭಟ್ ಮೇಲುಕೋಟೆ (ಹನೂಮಂತ), ಉಜಿರೆ ಅಶೋಕ ಭಟ್ (ಅರ್ಜುನ) ಭಾಗವಹಿಸಿದರು.
ಒಂದೇ ವೇದಿಕೆಯಲ್ಲಿ ತೆಂಕುತಿಟ್ಟಿನ ಹಿರಿಯ ಈರ್ವರು ಭಾಗವತರು ದ್ವಂದ್ವ ಭಾಗವತಿಕೆ ನಡೆಸಿದ್ದು ಹೊಸ ದಾಖಲೆಯಾಗಿ ಈ ಸಂದರ್ಭವ ಗುರುತಿಸಲ್ಪಟ್ಟಿತು.
ಬುಧವಾರ ಸಂಜೆ ಮೇಲುಕೋಟೆ ಸಂಸ್ಕøತ ವಿದ್ಯಾಲಯದ ಪ್ರಾಂಶುಪಾಲ ವಿದ್ವಾನ್ ಉಮಾಕಾಂತ ಭಟ್ ಅವರಿಂದ ಜ್ಞಾನಮೂರ್ತಿ ದಕ್ಷಿಣಾಮೂರ್ತಿ ಎಂಬ ವಿಷಯದಲ್ಲಿ ವಿಶೇಷೋಪನ್ಯಾಸ ನಡೆಯಿತು. ಗುರುವಾರ ಸಂಜೆ ಕಾಸರಗೋಡಿನ ಉಷಾ ಈಶ್ವರ ಭಟ್ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.