ಸಂತ್ರಸ್ತರಿಗೆ ಭರವಸೆಯಿತ್ತ ಸ.ಆಯುಕ್ತ ರೇಣುಕಾ ಪ್ರಸಾದ್-ತಹಶೀಲ್ದಾರ್ ಪುರಂದರ ಹೆಗ್ಡೆ
ಬಂಟ್ವಾಳ, ಆ.15 : ಆಲಡ್ಕ ಮಿಲಿಟರಿ ಗ್ರೌಂಡ್ ನಲ್ಲಿ ನೆರೆಯಿಂದಾಗಿ ಮುಳುಗಡೆಯಾಗುವ 17 ಮನೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ಪ್ರಯತ್ನ ನಡೆಸುವುದಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದ್ದಾರೆ.
ಬಂಟ್ವಾಳದ ನೆರೆಪೀಡಿತ ಪ್ರದೇಶಗಳಿಗೆ ಮಂಗಳೂರು ಸಹಾಯಕ ಆಯುಕ್ತ ರೇಣುಕಾ ಪ್ರಸಾದ್ ಹಾಗೂ ತಹಶೀಲ್ದಾರ್ ಪುರಂದರ ಹೆಗ್ಡೆ ಜೊತೆ ಭೇಟಿ ನೀಡಿದ ಅವರು, ಆಲಡ್ಕದಲ್ಲಿ ನೆರೆ ಸಂತ್ರಸ್ತರ ಜೊತೆ ಮಾತನಾಡಿದರು. ಕಳೆದ 15 ವರ್ಷಗಳಿಂದ ಮಳೆಗಾಲದಲ್ಲಿ ಆತಂಕದಲ್ಲೇ ದಿನ ಕಳೆಯಬೇಕಾಗುತ್ತದೆ ಎಂಬ ಸ್ಥಳೀಯರ ಮನವಿಗೆ ಸ್ಪಂದಿಸಿದ ಶಾಸಕರು, ನೆರೆ ಪೀಡಿತ ಪ್ರದೇಶಗಳಲ್ಲಿ ಕಾನೂನಾತ್ಮಕವಾಗಿ ಮನೆ ಹೊಂದಿವರಿಗೆ ಬದಲಿ ಜಮೀನು ಹಾಗೂ ಸರ್ಕಾರದ ವತಿಯಿಂದ ಮನೆ ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪಾಣೆಮಂಗಳೂರು ಗೂಡಿನ ಬಳಿ, ಬಡ್ಡಕಟ್ಟೆ, ಬಸ್ತಿಪಡ್ಪು, ಜಕ್ರಿಬೆಟ್ಟು ಮೊದಲಾದ ನೆರೆಪೀಡಿತ ಪ್ರದೇಶಗಳಿಗೆ ಅವರು ಭೇಟಿ ನೀಡಿದ ಅವರು, ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು, ಹಾಗೂ ನಿರಾಶ್ರಿತರಿಗೆ ಗಂಜಿಕೇಂದ್ರಗಳಲ್ಲಿ ಯಾವುದೇ ಕೊರತೆಯಾಗದಂತೆ ನಿಗಾವಹಿಸುವಂತೆ ಸೂಚಿಸಿದರು.
ಪುರಸಭಾ ಸದಸ್ಯ ಗೋವಿಂದ ಪ್ರಭು, ಶಿವಪ್ರಸಾದ್ ಬಂಟ್ವಾಳ, ಕಂದಾಯ ನಿರೀಕ್ಷಕ ರಾಮ ಕಾಟಿ ಪಳ್ಳ , ಆಡಳಿತ ಶಾಖೆಯ ಸೀತಾರಾಮ ಕಮ್ಮಾಜೆ , ಪ್ರಕೃತಿ ವಿಕೋಪ ಅಧಿಕಾರಿ ವಿಷು ಕುಮಾರ್ ಸಿಬಂದಿ ಸದಾಶಿವ ಕೈಕಂಬ. ಶೀತಲ್, ಲಕ್ಷ್ಮಣ್ ಸುಂದರ, ಸಿಬಂದಿ ಯಶೋದ, ಬಂಟ್ವಾಳ ನಗರ ಠಾಣಾ ಸಿಬ್ಬಂದಿ, ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಈ ಸಂದರ್ಭ ಹಾಜರಿದ್ದರು.