ಉಳ್ಳಾಲ: ಅವೈಜ್ಞಾನಿಕವಾದ ಪ್ರಗತಿಯ ಅಭಿವೃದ್ಧಿ ಹಮ್ಮಿಕೊಂಡಾಗ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿವೆ ಅನ್ನುವ ಕುರಿತು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಇಂತಹ ಪ್ರಕೃತಿಯ ಮೇಲಿನ ಅತ್ಯಾಚಾರವನ್ನು ತಡೆಯುವ ಪ್ರಯತ್ನ ಎಲ್ಲರಿಂದ ಆಗಬೇಕಿದೆ ಎಂದು ಪಿಎಫ್ ಐ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಝಾಕ್ ಕೆಮ್ಮಾರ ಅಭಿಪ್ರಾಯಪಟ್ಟರು.
ಅವರು ಜಿಲ್ಲಾ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಕೇರಳ-ಕರ್ನಾಟಕ ಪ್ರವಾಹ ಪೀಡಿತರಿಗೆ ನೆರವಾಗಿರಿ ಅನ್ನುವ ಕಾರ್ಯಕ್ರಮದ ಮೂಲಕ ನಾಲ್ಕು ದಿನಗಳಿಂದ ದಾನಿಗಳಿಂದ ಸಂಗ್ರಹಿಸಿದ ಸುಮಾರು ರೂ. 15 ಲಕ್ಷ ವೆಚ್ಚದ ಅಗತ್ಯ ದಿನಬಳಕೆ ವಸ್ತುಗಳನ್ನು ಕೇರಳ ಭಾಗಕ್ಕೆ ಕಳುಹಿಸುವ ಸಂದರ್ಭ ಭಾಗವಹಿಸಿ ಮಾತನಾಡಿದರು.
ಪ್ರಾಕೃತಿಕ ವಿಕೋಪ ಸಂಭವಿಸಿದ ಕೇರಳ ಹಾಗೂ ಕೊಡಗಿನ ಜನರೊಂದಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸದಾ ಇದೆ. ದಿನರಾತ್ರಿ ಪಿಎಫ್ ಐನ ಕಾರ್ಯಕರ್ತರು ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ. ದುರಂತಗಳು ಮುಂದೆಂದೂ ನಡೆಯದಿರಲಿ ಎಂದು ಪ್ರತಿಯೊಬ್ಬರೂ ಪ್ರಾರ್ಥಿಸಬೇಕಾಗಿದೆ. ಮಾನವೀಯ ಮೌಲ್ಯಗಳನ್ನು ಮುಂದಿಟ್ಟುಕೊಂಡು ಜಾತಿಬೇಧವಿಲ್ಲದೆ ಕೇರಳದಾದ್ಯಂತ ಜನರು ಸಂತ್ರಸ್ತರ ಸೇವೆಯಲ್ಲಿ ಕಾರ್ಯಕರ್ತರು ಸಹಕರಿಸಿದ್ದಾರೆ. ಪರಿಹಾರ ಕಾರ್ಯಕ್ರಮವನ್ನು ಹಮ್ಮಿಕೊಂಡು ಅಲ್ಲಿನ ಜನರಿಗೆ ಬೇಕಾದ ಸಾಮಗ್ರಿಗಳನ್ನು ದಾನಿಗಳಿಂದ ಪಡೆದುಕೊಂಡು ಅದನ್ನು ಕಳುಹಿಸಲಾಗುತ್ತಿದೆ.
ಜಿಲ್ಲಾ ಅಧ್ಯಕ್ಷ ಹನೀಫ್ ಕಾಟಿಪಳ್ಳ ಮಾತನಾಡಿ ಪ್ರಕೃತಿ ವಿಕೋಪದಲ್ಲಿ ನೊಂದ ಎಲ್ಲಾ ಮಾನವರ ನೋವಿನಲ್ಲಿ ಪಿಎಫ್ ಐ ಭಾಗಿಯಾಗಿದೆ. ಮಾನವ ಸ್ವಾರ್ಥವಾಗಿರದೆ ಸಂಘಜೀವನವನ್ನು ರೂಢಿಸಿಕೊಂಡು ಬಾಳಬೇಕಿದೆ. ಪ್ರಕೃತಿ ವಿಕೋಪವನ್ನು ತಡೆಗಟ್ಟುವುದು ಅಸಾಧ್ಯದ ಮಾತು. ಆದರೆ ರಕ್ಷಣಾ ಕಾರ್ಯದಲ್ಲಿ ಅನೇಕರು ಜೀವವನ್ನು ಪಣವಾಗಿಟ್ಟುಕೊಂಡು ಸಹಕರಿಸುವುದು ಅಭಿನಂದನೀಯ ಎಂದರು.
ಜಿಲ್ಲಾ ಕಾರ್ಯದರ್ಶಿ ಖಾದರ್ ಕುಳಾಯಿ, ಜಿಲ್ಲಾ ಸಮಿತಿ ಸದಸ್ಯ ಮಜೀದ್ ಜೋಕಟ್ಟೆ, ಮೊಯ್ದೀನ್ ಹಳೆಯಂಗಡಿ ಉಪಸ್ಥಿತರಿದ್ದರು.