ಗೋವಿಂದ ಹಾಲಾರೆ ಹಾಲಾ... ಘೋಷದೊಂದಿಗೆ ‘ದಹಿ ಹಂಡಿ’ ಸಂಭ್ರಮ
(ವರದಿ / ಚಿತ್ರ: ರೋನ್ಸ್ ಬಂಟ್ವಾಳ್)
ಮುಂಬಯಿ ಸೆ.03: ಭಗವಾನ್ ಶ್ರೀಕೃಷ್ಣ ದೇವರ ಜನ್ಮ ಪುಣ್ಯಾಧಿ ದಿನವಾದ ಇಂದು ಮುಂಬಯಿ ಮಹಾನಗರ ದಾದ್ಯಂತ ಹರೇ ಕೃಷ್ಣ ಪಠಣ, ಸಂಪ್ರಾದಾಯಿಕವಾಗಿ ಶ್ರದ್ಧೆ, ಭಕ್ತಿ ಮತ್ತು ಅತ್ಯುತ್ಸವದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಗಿದ್ದು, ಮಹಾರಾಷ್ಟ್ರ ರಾಜ್ಯದ ಜಗತ್ಪ್ರಸಿದ್ಧ `ದಹಿ ಹಂಡಿ' ಸಂಭ್ರಮ ಗೋವಿಂದ ಹಾಲಾರೆ ಹಾಲಾ... ಘೋಷಗಳೊಂದಿಗೆ ಸಂಭ್ರಮ ಸಡಗರಗಳೊಂದಿಗೆ ಆಚರಿಸಲ್ಪಟ್ಟಿತು.
ಮಹಾನಗರದಲ್ಲಿನ ವಿವಿಧ ರಾಜಕೀಯ ಪಕ್ಷಗಳು ವಿಶೇಷವಾಗಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೇಸ್ (ಐ), ರಾಷ್ಟ್ರವಾದಿ ಕಾಂಗ್ರೇಸ್ ಪಕ್ಷ (ಎನ್ಸಿಪಿ), ಶಿವಸೇನೆ, ಮಹಾರಾಷ್ಟ್ರ ನವನಿರ್ಮಾಣ ಸೇನೆ (ಮನಸೆ), ಆರ್ಪಿಐ ಇತ್ಯಾದಿ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ತಮ್ಮತಮ್ಮ ಕ್ಷೇತ್ರ, ಪರಿಸರಗಳಲ್ಲಿ ಲಕ್ಷಂತರ ಮೌಲ್ಯದ ನಗದು ಹಾಗೂ ಅತ್ಯಾಕರ್ಷಕ ಬಹುಮಾನಗಳನ್ನಿರಿಸಿ ಬಾಣೆತ್ತರದತ್ತ ಇರಿಸಿದ `ದಹಿ ಹಂಡಿ'ಗಳನ್ನು ಉತ್ಸಹಿ ತರುಣ ವೃಂದಗಳು ಪಿರಾಮಿಡ್ಗಳನ್ನು ರಚಿಸಿ `ದಹಿ ಹಂಡಿ' ಒಡೆದು ತಮ್ಮದಾಗಿಸಿ ಸಂಭ್ರಮಕ್ಕೆ ವಿಶೇಷ ಕಳೆಯನ್ನಿತ್ತರು.
ನಗರದಾದ್ಯಂತದ ಓಣಿ-ಗಲ್ಲಿಗಳು, ಮೈದಾನ- ರಸ್ತೆಗಳ ಮೂಲೆಗಳಲ್ಲಿ ವಿವಿಧ ಸಂಘಟನೆಗಳು ಅತೀ ಎತ್ತರದಲ್ಲಿ ಅತ್ಯಾಕರ್ಷಕವಾಗಿ `ದಹಿ ಹಂಡಿ' ರಚಿಸಿದ್ದು ವಿಶೇಷವಾಗಿ ಮಹಿಳಾ ತಂಡಗಳು ಮಾನವ ಗೋಪುರ (ಪಿರಮಿಡ್) ನಿರ್ಮಿಸಿ ಈ ದಹಿ ಹಂಡಿ ಒಡೆದು ಹರ್ಷಾಚರಣೆಯಲ್ಲಿ ತೊಡಗಿಸಿ ಕೊಂಡರು. ವಿವಿಧ ಪಕ್ಷದ ಕಾರ್ಯಕರ್ತರು, ಸಂಘ-ಸಂಸ್ಥೆಗಳ ಯುವಕ-ಯುವತಿಯರ ತಂಡಗಳು ಅನೇಕ ಕಡೆಗಳಲ್ಲಿ ದಹಿಹಂಡಿ ಸ್ಪರ್ಧೆ ಆಯೋಜಿಸಿದ್ದು, ಲಾರಿಲಾರಿಗಳಲ್ಲಿ ತಂಡೋಪತಂಡವಾಗಿ ಸಾಗಿ ದಹಿಹಂಡಿ ಒಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಿ ಪಾರಿತೋಷಕಗಳನ್ನು ಗಿಟ್ಟಿಸಿಕೊಂಡರೆ ಅನೇಕ ತಂಡಗಳು ಕೋಟ್ಯಾಂತರ ಮೊತ್ತದ ಬಹುಮಾನ ಬಾಚಿಕೊಂಡು ಸಂತಸದ ಸಾಗದಲ್ಲೇ ಜನ್ಮಾಷ್ಟಮಿ ಸಂಭ್ರಮಿಸಿದರು.
ಪುಟಾಣಿಗಳು ಮತ್ತು ಬಾಲಕ-ಬಾಲಕಿಯರು ರಾಧಾ-ಕೃಷ್ಣರಂತೆ ವೇಷ ಧರಿಸಿ ವೈವಿಧ್ಯಮಯ ನೃತ್ಯ ಪ್ರದರ್ಶನಗಳನ್ನಿತ್ತರೆ, ರಾಷ್ಟ್ರೀಯ ನಾಯಕರೂ, ಬಾಲಿವುಡ್ ತಾರೆಯರೂ ಜನ್ಮಾಷ್ಟಮಿಯಲ್ಲಿ ಪಾಲ್ಗೊಂಡು ಜನ್ಮಾಷ್ಟಮಿಗೆ ಮೆರುಗು ನೀಡಿದರು. ದಹಿಹಂಡಿ ಮಹೋತ್ಸವ ನಡೆಸುವ ಪ್ರಮುಖ ಮಂಡಲಗಳಾದ ಬಾಬು ಜೇನು ಮಂಡಿ ಮಂಡಲ್, ದಗ್ಡುಸೇಠ್ ಮಂಡಲ, ಹುತಾತ್ಮ ಬಾಬು ಮಂಡಲ್ಗಳು ಎಂದಿನಂತೆ ನೂತನ ಮಾದರಿಯಲ್ಲೇ ಸಂಭ್ರಮಕ್ಕೆ ಹೊಸ ಹುರುಪನ್ನಿತ್ತವು. ದಾದರ್ ಮಾರ್ಕೆಟ್, ಪರೇಲ್ಗಳಲ್ಲಂತೂ ಈ ಸಂಭ್ರಮ ಮುಗಿಲು ಮುಟ್ಟುವಂತಿದ್ದು ಸ್ಥಳಿಯ ಭಕ್ತರಲ್ಲಿ ನವೋಲ್ಲಾಸ ತುಂಬಿದಂತಿತ್ತು.