ಮುಂಬಯಿ (ಶಿರ್ವ), ಸೆ.17: ಉಡುಪಿ ಕಟಪಾಡಿ ಅಲ್ಲಿನ ಹಿರಿಯ ಹಾಸ್ಯ ನಾಟಕ ಕಲಾವಿದ, ಸಾವಿರ ನಾಟಕಗಳ ಸರದಾರ ಕಟಪಾಡಿಯ ವ್ಯಾಪಾರಿ ಫಕೀರ್ ಬ್ಯಾರಿ ಅವರ ಪುತ್ರ ಅಬ್ದುಲ್ ಖಾದರ್ ಕಟಪಾಡಿ (58.) ಹೃದಯಾಘಾತದಿಂದ ಭಾನುವಾರ ರಾತ್ರಿ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಹೆಸರಾಂತ ಹಿರಿಯ ರಂಗಕರ್ಮಿ ಪಿ.ಬಿ ರೈ ಸಾರಥ್ಯದ ನಂದಿಕೇಶ್ವರ ನಾಟಕ ಕಂಪೆನಿಯಲ್ಲಿ ಸುಮಾರು ಮೂರು ದಶಕಗಳ ಕಾಲ ಪ್ರಮುಖ ಹಾಸ್ಯ ಕಲಾವಿದನಾಗಿ ಮಿಂಚಿರುವ ಕಟಪಾಡಿ ಖಾದರ್ ಅವರು ಈ ಕಂಪೆನಿಯ ಮೂಲಕ ಕರ್ನಾಟಕ ರಾಜ್ಯಾದಾದ್ಯಂತ ತಿರುಗಾಟ ನಡೆಸಿ ಸಹಸ್ರಾರು ಕನ್ನಡ ,ತುಳು ನಾಟಕಗಳನ್ನು ಪ್ರದರ್ಶಿಸಿ ಮನೆಮಾತಾಗಿದ್ದರು. ಸಾವಿರಾರು ಪ್ರದರ್ಶನಗಳನ್ನು ಕಂಡಿರುವ ಕಂಪೆನಿ ನಾಟಕದ ಪ್ರಸಿದ್ಧ ಗೌಡ್ರ ಗದ್ಲ, ಮುದುಕನ ಮದುವೆ ನಾಟಕಗಳಲ್ಲಿ ಪ್ರಧಾನ ಹಾಸ್ಯ ಪಾತ್ರವನ್ನು ಮಾಡಿರುವ ಕಟಪಾಡಿ ಖಾದರ್ ಅವರ ಅಭಿನಯ ಅನೇಕ ಸಿನೆಮಾ ನಟರನ್ನೂ ನಾಚಿಸುವಂತಿತ್ತು. ಕಟಪಾಡಿ ಎಸ್.ವಿ.ಎಸ್ ಹಳೇ ವಿದ್ಯಾಥಿರ್ü ಸಂಘದಲ್ಲಿ ಕೂಡಾ ಕುದುರೆ ಮೊಟ್ಟೆ, ಮಂಗಳಾ ನನ್ನ ಅತ್ತಿಗೆ, ಕನ, ಅಂಚತ್ತ್ ಇಂಚ, ನೆಟ್ಟೆಂಚಿನವಾ ಗೊಬ್ಬುಂಡು ತುಳು ನಾಟಕಗಳಲ್ಲಿ ನಟಿಸಿ ಜನಪ್ರಿಯತೆಯನ್ನು ಗಳಿಸಿದ್ದರು. ನಂದಿಕೇಶ್ವರ ನಾಟಕ ಕಂಪೆನಿಯಲ್ಲಿ ಜನರೇಟರ್ ಆಪರೇಟರ್ ಆಗಿ ಸೇರಿ ಕೆಲಸ ಮಾಡುತ್ತಿದ್ದಾಗ ಕಲಾವಿದರೊಬ್ಬರು ಕೈಕೊಟ್ಟು, ಅಚಾನಕ್ಕಾಗಿ ಆ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿರುವ ಖಾದರ್ ಆ ಬಳಿಕ ಕನ್ನಡ ನಾಟಕ ರಂಗದಲ್ಲಿ ಮೇರು ಹಾಸ್ಯ ನಟರಾಗಿ ಮಿಂಚಿದರು.
ನಾಟಕ ಕಂಪೆನಿಯಲ್ಲಿ ಚಿತ್ರನಟಿ ಉಮಾಶ್ರೀ, ಸುಧೀರ್, ಡಿಂಗ್ರಿ ನಾಗರಾಜ್, ಬ್ಯಾಂಕ್ ಜನಾರ್ಧನ್, ವಜ್ರಮುನಿ, ಮುಸುರಿ ಕೃಷ್ಣಮೂರ್ತಿ, ಚಿಂದೋಡಿ ಲೀಲಾ ಜೊತೆ ನಟಿಸಿರುವ ಖಾದರ್ ಅವರು ಯುವ ನಾಟಕ ಹಾಗೂ ಚಿತ್ರಕಲಾವಿದರಾದ ಶೋಭಾ ರೈ ಮತ್ತು ರಾಘವೇಂದ್ರ ರೈ (ಮೀನನಾಥ) ಅವರಿಗೆ ಮಾರ್ಗದರ್ಶಕರಾಗಿದ್ದರು. ಇತ್ತೀಚಿನ ಕೆಲವು ವರ್ಷಗಳಿಂದ ನಾಟಕ ಕಂಪೆನಿಯನ್ನ ತೊರೆದು ತನ್ನ ಹುಟ್ಟೂರಾದ ಕಟಪಾಡಿಯಲ್ಲಿ ಗುಜರಿ ವ್ಯಾಪಾರದ ಅಂಗಡಿಯನ್ನು ನಡೆಸುತ್ತಿದ್ದರು. ಮೃತರು ಪತ್ನಿ, ಮೂವರು ಹೆಣ್ಣು, ಓರ್ವ ಗಂಡು ಅಗಲಿದ್ದಾರೆ.