ಮುಂಬಯಿ, ಸೆ.28: ಬೃಹನ್ಮುಂಬಯಿ ಹೃದಯ ಭಾಗದಲ್ಲಿದ್ದು, 93 ವರ್ಷಗಳ ಇತಿಹಾಸವುಳ್ಳ ಬಿಎಸ್ಕೆಬಿ ಅಸೋಸಿಯೇಶನ್ ಸಾಯನ್ ಗೋಕುಲ ಹಿರಿಯ ನಾಗರಿಕರ ಆಶ್ರಯಧಾಮ `ಆಶ್ರಯ' ಪ್ರತಿ ವರ್ಷವೂ ಅಕ್ಟೋಬರ್ನಲ್ಲಿ ಹಿರಿಯ ನಾಗರಿಕರ ದಿನಾಚರಣೆಯನ್ನು ಆಶ್ರಯದಲ್ಲಿ ಅತ್ಯಂತ ಉತ್ಸಾಹದಿಂದ ಆಚರಿಸುತ್ತಾ ಬಂದಿದ್ದು, ಅಂತೆಯೇ ಈ ವರ್ಷ ಆಶ್ರಯ ವಿಸ್ತರಣೆಯ ನಿಧಿ ಸಂಗ್ರಹದ ಅಂಗವಾಗಿ, ಇದೇ ಅ.7ನೇ ರವಿವಾರ ಸಂಜೆ 6.00 ಗಂಟೆಯಿಂದ ಶಿವಸ್ವಾಮಿ ಆಡಿಟೋರಿಯಂ, ಫೈನ್ ಆರ್ಟ್ಸ್, ಚೆ0ಬೂರ್ ಇಲ್ಲಿ ಹಿರಿಯ ನಾಗರಿಕರ ದಿನವನ್ನು ಆಚರಿಸಲಾಗುವುದು. ಅಂದು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಆಶ್ರಯ ನಿವಾಸಿಗಳಿಂದ ಸಿನಿ ಸೀನಿಯರ್ಸ್ ಮತ್ತು ಪ್ರಸಿದ್ಧ ನಿರೂಪಕ ಅಂಬರೀಷ್ ಮಿಶ್ರಾ ರವರ ನಿರೂಪಣೆ, ಮೃದ್ಗಂಧ್ ಆರ್ಕೆಸ್ಟ್ರಾದ ಖ್ಯಾತ ಗಾಯಕ ಶ್ರೀಕಾಂತ್ ನಾರಾಯಣ್, ಶೈಲಜಾ ಸುಬ್ರಹ್ಮಣ್ಯಂ, ಪ್ರಶಾಂತ್ ನಸೇರಿ, ಶರಯು ದಾತೆ ಯವರಿಂದ ಸಂಗೀತ ರಸಮಂಜರಿ ಹಮ್ಮಿಕೊಳ್ಳಲಾಗಿದೆ ಎಂದು ಉಭಯ ಸಂಸ್ಥೆಗಳ ವಕ್ತಾರರು ತಿಳಿಸಿದ್ದಾರೆ.
ತನ್ನ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಹತ್ತು ವರ್ಷಗಳ ಹಿಂದೆ ನೇರೂಲ್ ನಲ್ಲಿ ಸ್ಥಾಪಿಸಿದ ಹಿರಿಯ ನಾಗರಿಕರ ಆಶ್ರಯಧಾಮ `ಆಶ್ರಯ' ತನ್ನ ಉತ್ತಮ ಗುಣಮಟ್ಟ, ಸೇವಾ ಸೌಲಭ್ಯಗಳಿಂದ ಇಂದು ನವಿ ಮುಂಬಯಿ ವಲಯದಲ್ಲಿ ಅತ್ಯಂತ ಪ್ರಸಿದ್ಧಿಯನ್ನು ಪಡೆದ ಹಿರಿಯ ನಾಗರಿಕರ ಆಶ್ರಯಧಾಮ ಆಗಿದೆ. ಸುಮಾರು 45 ಹಿರಿಯ ನಾಗರಿಕರು ತಮ್ಮ ಬಾಳಸಂಜೆಯನ್ನು ಇಲ್ಲಿ ಗೌರವಯುತವಾಗಿ ನೆಮ್ಮದಿಯಿಂದ ಕಳೆಯುತ್ತಿದ್ದಾರೆ.
ದಿನೇ ದಿನೇ ಹೆಚ್ಚುತ್ತಿರುವ ಬೇಡಿಕೆ ಹಾಗೂ ಇನ್ನೂ ಉತ್ತಮ ಸವಲತ್ತುಗಳನ್ನು ಹಿರಿಯ ನಾಗರಿಕರಿಗೆ ನೀಡುವ ಉದ್ದೇಶದಿಂದ ಬಿಎಸ್ಕೆಬಿ ಸಂಸ್ಥೆಯ ಆಡಳಿತ ಮಂಡಳಿ, ಸದ್ಯ ಪುನರ್ ನಿರ್ಮಾಣ ಹಂತದಲ್ಲಿರುವ ಗೋಕುಲ ಕಟ್ಟಡ ಹಾಗೂ ಶ್ರೀ ಕೃಷ್ಣ ಮಂದಿರ ನಿರ್ಮಾಣ ಕಾರ್ಯದೊಂದಿಗೆ ಆಶ್ರಯದ ವಿಸ್ತರಣೆಯ ಯೋಜನೆಯನ್ನು ಕೂಡಾ ಹಮ್ಮಿಕೊಂಡಿದೆ.
ಮಹಾನಗರದಲ್ಲಿನ ಎಲ್ಲಾ ಕಲಾಭಿಮಾನಿಗಳು, ಸಂಗೀತಪ್ರೇಮಿಗಳು ಪಾಲ್ಗೊಂಡು ಸಿನಿ ಸೀನಿಯರ್ಸ್ ಮತ್ತು ಸಂಗೀತ ರಸಮಂಜರಿ ಕಾರ್ಯಕ್ರಮದ ಯಶಸ್ಸಿಗಾಗಿ ಸಹಕರಿಸುವಂತೆ ಎಂದು ಸಂಘದ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.