ಮಂಗಳೂರು ಆಕಾಶವಾಣಿ ಕೇಂದ್ರವು ದಸರಾ ಹಾಗೂ ಮಹಾನವಮಿ ಉತ್ಸವದ ನೇರಪ್ರಸಾರ ಮಾಡಲು ಮಂಗಳೂರು ಹಾಗೂ ಕೊಲ್ಲೂರಿನಲ್ಲಿ ವ್ಯಾಪಕ ಸಿದ್ಧತೆ ಮಾಡಿಕೊಂಡಿದೆ. ಮಂಗಳೂರು ದಸರಾ ವೈಭವದ, ಮುಖ್ಯಮಂತ್ರಿಗಳ ಭೇಟಿ ಮತ್ತು ಶೋಭಾಯಾತ್ರೆಯ ಹಾಗೂ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದ ಮಹಾನವಮಿ ರಥೋತ್ಸವ ವಿಜಯದಶಮಿಯ ನೇರಪ್ರಸಾರದ ವೀಕ್ಷಕ ವಿವರಣೆ ಬಿತ್ತರವಾಗಲಿದೆ.
ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ-2018 ರ ಉದ್ಘಾಟನಾ ಸಮಾರಂಭ ಅಕ್ಟೋಬರ 14 ರಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೆರವೇರಿಸಲಿದ್ದು ಈ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರದ ಸಂತೋಷಿ ಕಲಾ ಮಂಟಪದಿಂದ ಸಾಯಂಕಾಲ 5 ಗಂಟೆ 30 ನಿಮಿಷಕ್ಕೆ ನೇರ ಪ್ರಸಾರ ಮಾಡಲಾಗುವುದು. ಆತ್ಮಶಕ್ತಿ ವಿವಿಧೊದ್ಧೇಶ ಸಹಕಾರಿ ಸಂಘದ ಸಹಯೋಗದೊಂದಿಗೆ ನೇರಪ್ರಸಾರ ಮೂಡಿ ಬರಲಿದೆ. ಅಕ್ಟೋಬರ್ 19 ರಂದು ನಡೆಯುವ ಬೃಹತ್ ಮಂಗಳೂರು ದಸರಾ ಮೆರವಣಿಗೆಯ ವೀಕ್ಷಕ ವಿವರಣೆಯನ್ನು ಸಾಯಂಕಾಲ 5 ಗಂಟೆ 30 ನಿಮಿಷದಿಂದ ಪ್ರಸಾರ ಮಾಡಲಾಗುವುದು.
ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ನಡೆಯುವ ಮಹಾನವಮಿ, ರಥೋತ್ಸವ ಹಾಗೂ ವಿಜಯದಶಮಿ ಕಾರ್ಯಕ್ರಮಗಳನ್ನು ಅಕ್ಟೋಬರ್ 18 ಮತ್ತು 19 ರಂದು ನೇರ ಪ್ರಸಾರ ಮಾಡಲಾಗುವುದು. ಅಕ್ಟೋಬರ್ 18 ರಂದು ಬೆಳಿಗ್ಗೆ 9 ಗಂಟೆಯಿಂದ ಚಂಡಿಕಾ ಹೋಮ ಹಾಗೂ ರಥೋತ್ಸವ ಹಾಗೂ ಅಕ್ಟೋಬರ್ 19 ರಂದು ಬೆಳಿಗ್ಗೆ 8 ಗಂಟೆ 30 ನಿಮಿಷದಿಂದ ವಿಜಯದಶಮಿ ದಿನ ನವಾನ್ನಪ್ರಾಶನದ ಹಾಗೂ ವಿದ್ಯಾರಂಭ ಕುರಿತ ವೀಕ್ಷಕ ವಿವರಣೆ ಮೂಡಿಬರಲಿದೆ.
ಆಕಾಶವಾಣಿ ನಿಲಯದ ಕಾರ್ಯಕ್ರಮ ಮುಖ್ಯಸ್ಥರಾದ ಉಷಾಲತಾ ಸರಪಾಡಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಅಧಿಕಾರಿಗಳ ವೀಕ್ಷಕ ವಿವರಣೆಕಾರರ ತಂಡ ರಚಿಸಲಾಗಿದೆ. ಈ ದಸರಾ-ಮಹಾನವಮಿಯ ನೇರ ಪ್ರಸಾರವನ್ನು ಎಫ್ಎಂ 100.3 ಹಾಗೂ 1089 ಕಿಲೋಹಟ್ರ್ಸ್ನಲ್ಲಿ ಆಲಿಸುವಂತೆ ನಿಲಯದ ಪ್ರಕಟನೆ ಕೋರಿದೆ.