ಉಪ್ಪಳ: ಕಲಾಸೇವೆಯ ಬಹುಮುಖ ಸಾಧನೆಯ ಹಿಂದಿನ ಪರಿಶ್ರಮವು ವ್ಯಕ್ತಿಯನ್ನು ಶಕ್ತಿಯಾಗಿ ರೂಪಿಸುತ್ತದೆ. ಕಲಾಸೇವಕನಿಗೆ ಹುಟ್ಟೂರ ಮಾನ-ಸನ್ಮಾನಗಳಿಗಿಂತ ಮಿಗಿಲಾದ ಕೃತಾರ್ಥತೆ ಬೇರೊಂದರಲ್ಲಿ ಲಭ್ಯವಾಗದು ಎಂದು ವಗೆನಾಡು ಶ್ರೀಸುಬ್ರಾಯ ದೇವಸ್ಥಾನ ಮತ್ತು ಕರೋಪಾಡಿ ಮಲರಾಯ ದೈವಸ್ಥಾನದ ಮೊಕ್ತೇಸರರಾದ ಮುಗುಳಿ ತಿರುಮಲೇಶ್ವರ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕುರುಡಪದವು ಸಮೀಪದ ಸಾದಂಗಾಯ ಮಠ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ವಿಶೇಷ ಅಭಿನಂದನಾ ಸಮಾರಂಭದಲ್ಲಿ ಖ್ಯಾತ ಯಕ್ಷಗಾನ ಕಲಾವಿದ, ಪ್ರಸಂಗಕರ್ತ, ಪ್ರವಚನಕಾರ ಸೀತಾರಾಮ ಭಟ್ ಸೇರಾಜೆ ಅವರ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸೀತಾರಾಮ ಭಟ್ ಅವರ ಕಲಾಸೇವೆ ಹೆಮ್ಮೆಯಾಗಿದ್ದು, ಯುವ ತಲೆಮಾರಿಗೆ ಪ್ರೇರಣದಾಯಿ ಎಂದು ಅವರು ತಿಳಿಸಿದರು.
ಯಕ್ಷಗಾನ ಅರ್ಥಧಾರಿ ಸರ್ಪಂಗಳ ಈಶ್ವರ ಭಟ್ ಅಭಿನಂದನಾ ಭಾಷಣಗೈದು ಸೇರಾಜೆಯವರ ಅತ್ಯಪೂರ್ವ ಕಲಾಸೇವೆಯ ಬಗ್ಗೆ ನೆನಪಿಸಿದರು. ಸದಾ ಕ್ರಿಯಾಶೀಲ ವ್ಯಕ್ತಿತ್ವದ ಸೀತಾರಾಮ ಭಟ್ ಅವರ ನಿರಂತರ ಅಧ್ಯಯನ, ಎಲ್ಲರೊಂದಿಗೆ ಒಂದಾಗುವ ಅವರ ಸರಳ ವ್ಯಕ್ತಿತ್ವಗಳಿಂದ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ಸೇರಾಜೆ ಸೀತಾರಾಮ ಭಟ್ ದಂಪತಿಗಳನ್ನು ಸಮಾರಂಭದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು. ಬಳಿಕ ಅವರು ಮಾತನಾಡಿ ತನ್ನ ಕಲಾಸೇವೆಗೆ ಕುರಿಯ ವಿಠಲ ಶಾಸ್ತ್ರಿಗಳ ಪ್ರಭಾವ ಆಶೀರ್ವಾಗಳಿಂದ ಸಾಧ್ಯವಾಗಿದೆ. ಯಕ್ಷಗಾನ-ತಾಳಮದ್ದಳೆಗಳ ಆಟ-ಕೂಟಗಳು ವಿಕಾಸಗಳ ಮೈಲುಗಲ್ಲುಗಳಾಗಿ ದಿಗ್ದರ್ಶನ ನೀಡಿದೆ ಎಂದು ತಿಳಿಸಿದರು.
ಪೈವಳಿಕೆ ಗ್ರಾ.ಪಂ. ಸದಸ್ಯೆ ತಾರಾ.ವಿ.ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು. ಸಾದಂಗಾಯ ಶಂಕರ ಭಟ್ ಉಪಸ್ಥಿತರಿದ್ದರು. ವಿದ್ಯಾ ಜಯರಾಮ ಕಜೆ ಸನ್ಮಾನ ಪತ್ರ ವಾಚಿಸಿದರು. ಶ್ರೀನಿವಾಸ ಭಟ್ ಸೇರಾಜೆ ಸ್ವಾಗತಿಸಿ, ಕುರಿಯ ಗೋಪಾಲಕೃಷ್ಣ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಯಕ್ಷಗಾನ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನ ಬಯಲಾಟ ಸಂಪೂರ್ಣ ಶ್ರೀದೇವೀ ಮಹಾತ್ಮ್ಯೆ ಪ್ರದರ್ಶನಗೊಂಡಿತು. ರಾತ್ರಿ 9.30 ರಿಂದ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಿತು.