(ಚಿತ್ರ / ವರದಿ: ರೊನಿಡಾ ಮುಂಬಯಿ)
ಮುಂಬಯಿ, ಅ.24: ಮುಂಬಯಿ ಚರ್ಚ್ಗೇಟ್ ಇಲ್ಲಿನ ಮಹಾರಾಷ್ಟ್ರ ರಾಜ್ಯ ಶಾಸಕರ ವಸತಿಗೃಹದಲ್ಲಿನ ಎಂಎಲ್ಎ ಹಾಸ್ಟೇಲ್ ಪ್ರಸಿದ್ಧಿಯ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿ ಈ ಬಾರಿ 45ನೇ ವಾರ್ಷಿಕ ನವರಾತ್ರಿ ಉತ್ಸವÀ ಮತ್ತು ದಸರಾ ಸಂಭ್ರಮ ಆಚರಿಸಿತು.
ಹೊರನಾಡ ತುಳು-ಕನ್ನಡಿಗರನ್ನೊಳಗೊಂಡ ಕ್ಯಾಂಟೀನ್ ಮಾಲೀಕರು ಮತ್ತು ನೌಕರವೃಂದವು ಸುಮಾರು ನಾಕ್ಲುವರೆ ದಶಕಗಳ ಹಿಂದೆ ತಮ್ಮ ಇಷ್ಟಾದೇವತೆ ಶ್ರೀಶಾರದಾದೇವಿ ಆರಾಧನೆ ಪ್ರಾರಂಭಿಸಿ ತುಳುನಾಡ ಸಂಪ್ರದಾಯ, ಸಂಸ್ಕೃತಿ, ಪೂಜೆಗಳೊಂದಿಗೆ ಶರನ್ನವರಾತ್ರಿ ಶ್ರೀ ದುರ್ಗಾಂಬಿಕೆ ದೇವಿಯನ್ನು ಪ್ರತಿಷ್ಠಾಪಿಸಿ ಅಲಂಕರಿಸಿ ಆರಾಧಿಸಿ ನವರಾತ್ರಿ ಆಚರಣೆ ಆಚರಿಸಲಾರಂಭಿಸಿದ್ದರು.
ಭಜನಾ ಮಂಡಳಿಯ ಅಧ್ಯಕ್ಷ ಹರೇಶ್ ಎಸ್.ಖೆಡೇಕರ್, ಗೌರವಾಧ್ಯಕ್ಷ ಜಯರಾಮ ಬಿ.ಶೆಟ್ಟಿ (ಅಜಂತಾ ಕ್ಯಾಟರರ್ಸ್), ಉಪಾಧ್ಯಕ್ಷ ನವೀನ್ ಕೆ.ಶೆಟ್ಟಿ, ಕಾರ್ಯದರ್ಶಿ ರಾಜು ಪೂಜಾರಿ, ಖಜಾಂಜಿ ಸೋಮಶೇಖರ ಬಂಗೇರ, ಜೊತೆ ಕಾರ್ಯದರ್ಶಿಗಳಾದ ಚಂದ್ರ ಮೊಗವೀರ, ಯೋಗೇಶ್ ಪುತ್ರನ್, ಯೋಗೇಶ್ ಬಂಗೇರ, ಜೊತೆ ಖಜಾಂಜಿ ಮನು ಪಾಟೇಲ್, ಸಲಹಾದಾರ ವಿಠಲ್ ಶೇರಿಗಾರ್ ಕಟಪಾಡಿ ಹಾಗೂ ಸದಸ್ಯರ ಸೇವೆ ಮತ್ತು ಮುಂದಾಳುತ್ವದಲ್ಲಿ ಈ ಬಾರಿ ಅಶ್ವಯಜ ಶುಕ್ಲ ಪಕ್ಷ ಮಹಾನಕ್ಷತ್ರ ಚಿತ್ರಾ ದಿನ ಬಿದಿಗೆಯ ಶರದೃತು ಆರಂಭದ ಶುಭಾವಸರದಲ್ಲಿ ಘಟಸ್ಥಾಪನೆ ಗೊಳಿಸಿ ನವರಾತ್ರಿ ಉತ್ಸವಕ್ಕೆ ಚಾಲನೆಯನ್ನೀಡಲಾಯಿತು.
ಒಂಭತ್ತು ದಿನಗಳಲ್ಲಿ ನಿತ್ಯಪೂಜೆ, ಅಭಿಷೇಕ, ಭಜನೆ, ಗಣಹೋಮ, ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ಪೂಜೆ, ಮಹಾಕಾಳಿ ಮಾತೆಗೆ ಪೂಜೆ, ವಿಜಯ ದಶಮಿ ದಿನ ಕಳಸಪೂಜೆ, ಭಜನೆ, ಅನ್ನಸಂತರ್ಪಣೆ, ಮೆರವಣಿಗೆ ಯೊಂದಿಗೆ ಚೌಪಟ್ಟಿಯಲ್ಲಿ ಕಳಸ ವಿಸರ್ಜನೆ ನಡೆಸಿ ವಾರ್ಷಿಕ ಶರನ್ನವರಾತ್ರಿ ಸಂಭ್ರಮ ಸಡಗರದಿಂದ ಆಚರಿಸಲ್ಪಟ್ಟಿತು. ಉತ್ಸವದಲ್ಲಿ ಹಲವಾರು ಗಣ್ಯರು, ರಾಜಕೀಯ ಧುರೀಣರು ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡು ಶ್ರೀದೇವಿಯ ಕೃಪೆಗೆ ಪಾತ್ರರಾದರು.