ಮುಂಬಯಿ, ನ.31: ಮುಂಬಯಿಯ ಪ್ರತಿಷ್ಠಿತ ಸಾಮಾಜಿಕ ಸಂಸ್ಥೆಯಾದ ಬಿಲ್ಲವರ ಎಸೋಸಿಯೇಶನ್ ಮುಂಬಯಿ, ಇದರ ವತಿಯಿಂದ ಹುಟ್ಟೂರಿನಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅಕ್ಷಯ ಮಾಸಿಕದ ಹುಟ್ಟು ಹಬ್ಬ ಕಾರ್ಯಕ್ರಮವು ಇದೇ ಕಳೆದ ತಾರೀಕು 17.10.2018ರಂದು ಮುಲ್ಕಿಯ ಬಿಲ್ಲವರ ಮಹಾಮಂಡಲದ ಸಭಾಗೃಹದಲ್ಲಿ ಜರಗಿತು.
ಈ ಕಾರ್ಯಕ್ರಮಕ್ಕೆ ಡಾ| ನಾಗರಾಜ್ ಎಸ್. (ಎಸೋಸಿಯೇಟ್ ಡೀನ್ ಫಾರ್ ಪಿ. ಜಿ. ಸ್ಟಡೀಸ್, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಹಾಸ್ಪಿಟಲ್ ಉದ್ಯಾವರ), ಡಾ| ಸೀತಾಲಕ್ಷ್ಮಿ ಕರ್ಕಿಕೋಡಿ (ಸಾಹಿತಿ, ಪತ್ರಕರ್ತೆ), ಹಾಗೂ ಶ್ರೀ ಎನ್. ಎಂ. ಸನಿಲ್ ( ಮಾಜಿ ಗೌ. ಪ್ರ. ಕೋಶಾಧಿಕಾರಿ ಬಿಲ್ಲವರ ಎಸೋಸಿಯೇಶನ್, ಮುಂಬಯಿ ಮತ್ತು ಮಾಜಿ ನಿರ್ದೇಶಕರು ಭಾರತ್ ಕೊ. ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿ.) ಇವರು ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮವನ್ನು ಗಣ್ಯರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು.
ವೇದಿಕೆಯಲ್ಲಿ ಎಸೋಸಿಯೇಶನಿನ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ಎಸ್. ಪೂಜಾರಿ, ಜನ ನಾಯಕ ಹಾಗೂ ಮಾರ್ಗದರ್ಶಕರಾದ ಸನ್ಮಾನ್ಯ ಶ್ರೀ ಜಯ ಸಿ. ಸುವರ್ಣ, ಅತಿಥಿ ಗಣ್ಯರು, ಉಪಾಧ್ಯಕ್ಷರಾದ ಶ್ರೀನಿವಾಸ್ ಆರ್. ಕರ್ಕೇರ, ಎಸೋಸಿಯೇಶನಿನ ಮಾಜಿ ಅಧ್ಯಕ್ಷರಾದ ಶ್ರೀ ಎಲ್. ವಿ. ಅಮೀನ್ , ಅಕ್ಷಯ ಮಾಸ ಪತ್ರಿಕೆಯ ಸಂಪಾದಕ ಶ್ರೀ ಈಶ್ವರ್ ಅಲೆವೂರು, ವಿದ್ಯಾ ಉಪಸಮಿತಿಯ ಕಾರ್ಯಾಧ್ಯಕ್ಷ ಶ್ರೀ ವಿಶ್ವನಾಥ್ ತೋನ್ಸೆ, ಯುವಾಭ್ಯುದಯ ಉಪ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ನಾಗೇಶ್ ಕೋಟ್ಯಾನ್, ಅಕ್ಷಯ ಸಮಿತಿಯ ಸದಸ್ಯರುಗಳಾದ ಶ್ರೀ ಧರ್ಮೇಶ್ ಸಾಲ್ಯಾನ್, ಶ್ರೀ ಹರೀಶ್ ಜಿ. ಪೂಜಾರಿ ಕೊಕ್ಕರ್ಣೆ, ಎಸೋಸಿಯೇಶನ್ನ ಕಾರ್ಯಕಾರಿ ಸಮಿತಿಯ ಸದಸ್ಯ ಹಾಗೂ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಉಪಾಧ್ಯಕ್ಷ ಶ್ರೀ ರಾಜ್ಶೇಖರ್ ಕೋಟ್ಯಾನ್, ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷರು, ಗುರು ನಾರಾಯಣ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರು, ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷರು, ಹಳೆಯಂಗಡಿ ಬಿಲ್ಲವ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಉಡುಪಿ, ಮಂಗಳೂರು ಪರಿಸರದ 260 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ 25 ಉಚ್ಛ ಶಿಕ್ಷಣ ಪಡೆಯುವ ಬಡ ಮಕ್ಕಳಿಗೆ ಆರ್ಥಿಕ ನೆರವನ್ನು ನೀಡಲಾಯಿತು.
ಡಾ| ಸೀತಾಲಕ್ಷ್ಮಿಯವರು ಅಕ್ಷಯ ಮಾಸ ಪತ್ರಿಕೆಯ ಹುಟ್ಟು ಹಬ್ಬದ ವಿಶೇಷ ಅಕ್ಟೋಬರ್ ತಿಂಗಳ ಸಂಚಿಕೆಯನ್ನು ಉದ್ಘಾಟಿಸಿ ಅಕ್ಷಯದಲ್ಲಿ ಪ್ರಕಟಗೊಳ್ಳುತ್ತಿರುವ ಮೌಲ್ಯಾಧಾರಿತ ಲೇಖನಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಡಾ| ನಾಗರಾಜ್ ಎಸ್. ಇವರು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಪಾಲಿಸಬೇಕಾದ ವಿಚಾರಗಳು ಹಾಗೂ ಜೀವನವನ್ನು ಸಫಲಗೊಳಿಸಲು ಸೂಕ್ತ ವಿಷಯಗಳ ಮಾಹಿತಿಗಳನ್ನಿತ್ತರು. ಶ್ರೀ ಎನ್. ಎಂ. ಸನಿಲ್ ಮತ್ತು ಶ್ರೀ ಎಲ್. ವಿ. ಅಮೀನ್ ವಿದ್ಯಾರ್ಥಿಗಳಿಗೆ ಸಂಧರ್ಬೋಚಿತವಾಗಿ ಸಲಹೆ ನೀಡಿದರು.