ಮಂಗಳೂರು : ಮಂಗಳೂರು ಆಕಾಶವಾಣಿ ಕೇಂದ್ರದ ಕಾರ್ಯನಿರ್ವಹಣಾಧಿಕಾರಿ ಡಾ,ಸದಾನಂದ ಹೊಳ್ಳ ಅವರು ತಮ್ಮ 29 ವರ್ಷ 3 ತಿಂಗಳ ಸೇವೆಯಿಂದ ಅಕ್ಟೋಬರ್ 31ರಂದು ನಿವೃತ್ತಿ ಹೊಂದಿದ್ದು ಹೃದಯಸ್ಪರ್ಶಿ ಬೀಳ್ಗೊಡುಗೆ ನೀಡಲಾಯಿತು.
ಆಕಾಶವಾಣಿ ಕೇಂದ್ರದದ ಮನೋರಂಜನಾ ಸಂಘದ ವತಿಯಿಂದ ಏರ್ಪಡಿಸಿದ ಬೀಳ್ಗೊಡುಗೆ ಸಮಾರಂಭದಲ್ಲಿ ಹೊಳ್ಳ ಅವರು ಭದ್ರಾವತಿ, ಮಡಿಕೇರಿ ಮತ್ತು ಮಂಗಳೂರು ಕೇಂದ್ರಗಳಲ್ಲಿ ಮಾಡಿದ ಅನುಪಮ ಸೇವೆಯನ್ನು ಶ್ಲಾಘಿಸಿ ಸೇವೆಯುದ್ದಕ್ಕೂ ಅರ್ಪಣಾ ಮನೋಭಾವದಿಂದ ದುಡಿದು ಸಂಸ್ಥೆಯ ಶ್ರೇಯಸ್ಸಿಗೆ ಸಾರ್ಥಕ ಸೇವೆ ಸಲ್ಲಿಸಿದರೆಂದು ಗುಣಗಾನ ಮಾಡಲಾಯಿತು. ಬಹ್ಮಾವರ ಸಕ್ಕರೆ ಕಾರ್ಖಾನೆ, ಕರ್ಣಾಟಕ ಬ್ಯಾಂಕ್ ಮುಂತಾದ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಬಳಿಕ ಆಕಾಶವಾಣಿಗೆ ಕೃಷಿ ಅಧಿಕಾರಿಯಾಗಿ ಸೇರಿ ರೈತಾಪಿ ವರ್ಗದ ಜಾಗೃತಿ ಕಾರ್ಯಕ್ರಮ, ರೂಪಕ, ನಾಟಕ ರಚನೆಯ ಕೆಲಸದಲ್ಲಿ ಹೆಸರು ಪಡೆದಿದ್ದರು. ಸ್ವತಃ ಬಡಗುತಿಟ್ಟು ಯಕ್ಷಗಾನ ಕಲಾವಿದರಾಗಿ ಭದ್ರಾವತಿಯಲ್ಲಿ ಮಕ್ಕಳ ಯಕ್ಷಗಾನ ಸಂಸ್ಥೆ ಕಟ್ಟಿದ್ದರು. ಸಂಘಟನೆ ಮತ್ತು ಸಾಮಾಜಿಕ, ಸೇವಾ ಕಾರ್ಯದಲ್ಲೂ ತೊಡಗಿ ಜನಾನುರಾಗಿಯಾದ ಇವರು ಮಂಗಳೂರು ಕೇಂದ್ರದಲ್ಲಿ 6 ವರ್ಷಗಳ ಕಾಲ ಕಾರ್ಯಕ್ರಮ ವಿಭಾಗದ ಉಸ್ತುವಾರಿ ಸಂಯೋಜಕರಾಗಿ ನೇರಪ್ರಸಾರ, ವಿಐಪಿ ಕಾರ್ಯಕ್ರಮ ಪ್ರಸಾರ ಹೀಗೆ ಹಲವು ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿ ಹೆಸರು ಪಡೆದಿದ್ದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮ ಸಿಬ್ಬಂದಿ ಸಂಘ (ಪಿಎಸ್ಎ), ಆಕಾಶವಾಣಿ ಪತ್ತಿನ ಸಹಕಾರ ಸಂಘದಿಂದ ಗೌರವದ ಸನ್ಮಾನ ನೀಡಲಾಯಿತು. ಮನೋರಂಜನಾ ಸಂಘದ ಅಧ್ಯಕ್ಷರಾದ ಜಿ.ರಮೇಶ್ಚಂದ್ರನ್, ಕಾರ್ಯಕ್ರಮ ಮುಖ್ಯಸ್ಥರಾದ ಉಷಾಲತಾ ಸರಪಾಡಿ, ಕಾರ್ಯದರ್ಶಿ ಡಾ.ಸದಾನಂದ ಪೆರ್ಲ, ಲೆಕ್ಕಾಧಿಕಾರಿ ದಮಯಂತಿ, ಕೋಶಾಧಿಕಾರಿ ಕುಸುಮಾವತಿ ಮನೋಹರ್, ಜತೆಕಾರ್ಯದರ್ಶಿ ಸೂರ್ಯನಾರಾಯಣ ಭಟ್ ಸ್ಮರಣಿಕೆ, ಶಾಲು ಹಾಗೂ ಹಣ್ಣು ಹಂಪಲು ನೀಡಿ ಗೌರವಿಸಿದರು.
ತಿರುಚ್ಚಿ ಆರ್ ಕುಮಾರ್, ಡಾ.ಶರಭೇಂದ್ರಸ್ವಾಮಿ, ಕನ್ಸೆಪ್ಟಾ ಫೆರ್ನಾಂಡಿಸ್, ಜೇಮ್ಸ್ ಫೆರ್ನಾಂಡಿಸ್ ಶುಭ ಹಾರೈಸಿದರು. ಬದುಕು ಮತ್ತು ಅನುಭವ ನೀಡಿದ ಆಕಾಶವಾಣಿ ಮಾಧ್ಯಮದ ಸೇವೆ ವ್ಯಕ್ತಿತ್ವಕ್ಕೆ ಗೌರವ ತಂದುಕೊಟ್ಟಿದ್ದು ಸಾರ್ಥಕತೆ ಮತ್ತು ಧನ್ಯತೆ ಇದೆ ಎಂದು ಸದಾನಂದ ಹೊಳ್ಳ ಅಭಿಪ್ರಾಯಪಟ್ಟರು.