Thursday 25th, April 2024
canara news

ಉಪ್ಪಳ-ಕೊಂಡೆವೂರುನ ವಿಶ್ವಜಿತ್ ಅತಿರಾತ್ರ ಸೋಮಯಾಗದ ಪೂರ್ವಭಾವಿಸಭೆ

Published On : 13 Nov 2018   |  Reported By : Ronida Mumbai


ಮೂಲ ಪರಿಕಲ್ಪನೆಯ ಪ್ರಕೃತಿಯಾರಾಧನೆ ರೂಢಿಸಿ-ಆಯುಷ್ ಸಚಿವ ನಾಯಕ್
(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ನ.12: ಯಜ್ಞ-ಯಾಗಾದಿಗಳಿಂದ ಸರ್ವರಿಗೂ ಒಳಿತಾಗುತ್ತದೆ. ಈ ನಿಟ್ಟಿನಲ್ಲಿ ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ನಿರಂತರ ಕಾರ್ಯಚಟುವಟಿಕೆಗಳು ಧನಾತ್ಮಕತೆಯ ಜಗ ನಿರ್ಮಾಣಕ್ಕೆ ಕಾರಣವಾಗುತ್ತದೆ ಎಂದು ಬಂಟ್ವಾಳ ಮುರುವ ಅಲ್ಲಿನ ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷಿ ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು.

ಕಾಸರಗೋಡು ಉಪ್ಪಳ ಅಲ್ಲಿನ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ 2019ರ ಫೆ.18ರಿಂದ 24ರ ವರೆಗೆ ಆಯೋಜಿಸಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗದ ಪೂರ್ವಭಾವಿಯಾಗಿ ಭಾನುವಾರ ನಡೆದ ಭೂಮಿಪೂಜೆ, ನಕ್ಷತ್ರವನ ಮತ್ತು ಪುಷ್ಕರಿಣಿಯ ಲೋಕಾರ್ಪಣಾ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಮಾಣಿಲಶ್ರೀ ಆಶೀರ್ವಚನಗೈದು ನೆರೆದ ಸದ್ಭಕ್ತರನ್ನು ಅನುಗ್ರಹಿಸಿದರು.

ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಶ್ರೀಗಳು ಆಶೀರ್ವಚನಗೈದು ಜಗತ್ತಿನಲ್ಲಿ ಭಗವದನುಗ್ರಹ ಪಡೆದು ಪಾವನವಾಗುವುದು ಪರಮ ಲಕ್ಷ್ಯವಾಗಿದ್ದಾಗ ನೆಮ್ಮದಿ ಸಾಧ್ಯವಾಗುತ್ತದೆ. ಆದರೆ ಭಗವದನುಗ್ರಹ ಪಡೆಯುವುದು ಸುಲಭವಾಗಿದ್ದರೂ ಅದರ ಹಾದಿ ಕಷ್ಟಕರವಾಗಿದ್ದು, ಸರ್ವರ ಒಳಿತಿನ ಶುದ್ದ ಅಂತಃಕರಣದಿಂದ ಅದನ್ನು ಸುಲಭವಾಗಿಸಲು ಸಾಧ್ಯ. ಅತಿರಾತ್ರ ಸೋಮಯಾಗದ ಪೂರ್ವಭಾವಿಯಾಗಿ ಹಮ್ಮಿಕೊಳ್ಳಲಾದ ಶ್ರೀವಿಷ್ಣು ಸಹಸ್ರನಾಮ ಅಭಿಯಾನದ ಫಲಶ್ರುತಿಯಾಗಿ ಕೆಲವು ತಿಂಗಳ ಹಿಂದೆ ಅತಿವೃಷ್ಠಿಯ ಸಂದರ್ಭ ತೀವ್ರ ಕಡಲ್ಕೊರೆತ ಕಂಡುಬಂದಾಗ ಸಹಸ್ರನಾಮ ನಡೆದ ಮಂಜೇಶ್ವರ-ಉಪ್ಪಳ ಪರಿಸರದ ಕಡಲು ತೀರದಲ್ಲಿ ಕಡಲ್ಕೊರೆತ ಕಂಡುಬರಲಿಲ್ಲ. ಜೊತೆಗೆ ಕಳೆದ 20 ವರ್ಷಗಳಳಿಂದ ಭೂ ಕಬಳಿಕೆಯಾಗಿದ್ದ ಪ್ರದೇಶದಿಂದ ಸಮುದ್ರ ಹಿಂದಕ್ಕೆ ತೆರಳಿತ್ತೆಂಬುದನ್ನು ಕಣ್ಣಾರೆ ಕಂಡಿರುವುದಾಗಿ ತಿಳಿಸಿದರು.

ಕೇಂದ್ರ ಸರಕಾರದ ಆಯುಷ್ ಖಾತೆ ಸಚಿವ ಶ್ರೀಪಾದ್ ಎಸ್ಸೋ ನಾಯಕ್ ಸಮಾರಂಭದ ಅಧ್ಯಕ್ಷತೆ ವಹಿಸಿ ನಕ್ಷತ್ರ ವನ ಸ್ಥಳದಾನ ನೀಡಿದ ಡಾ| ಮೋಹನದಾಸ್ ಬೆಂಗಳೂರು ದಂಪತಿಯನ್ನು ಸನ್ಮಾನಿಸಿ ಗೌರವಿಸಿದರು.

ಸಚಿವ ನಾಯಕ್ ಮಾತನಾಡಿ, ಜಗತ್ತಿನಲ್ಲಿ ಪ್ರಕೃತಿಯನ್ನು ಪೂಜನೀಯವಾಗಿ ಕಾಣುವ ಏಕೈಕ ಸಂಸ್ಕøತಿಯಾಗಿದ್ದು, ಅದು ಪ್ರಕೃತಿ ಮತ್ತು ಜೀನರಾಶಿಗಳ ಸಂಬಂಧಗಳನ್ನು ಪುಷ್ಠೀಕರಿಸುತ್ತದೆ. ಆದರೆ ಇಂದು ಪ್ರಕೃತಿ-ಧರ್ಮಗಳನ್ನು ನಾಶಗೊಳಿಸುವ ಹುನ್ನಾರಗಳಿಂದ ತೊಡಕುಗಳೆದುರಾಗಿ ಕಾಡುತ್ತಿವೆ ಎಂದು ಅವರು ತಿಳಿಸಿದರು. ಕೇರಳದಲ್ಲಿ ಇತ್ತೀಚೆಗೆ ಕ್ಷೋಭೆಗೆ ಕಾರಣವಾದ ಅತಿವೃಷ್ಠಿ ನೆರೆಗಳು ಪ್ರಕೃತಿಗೆ ನಾವೆಸಗಿರುವ ಅನಾಹುತದ ಕಾರಣದಿಂದಾಗಿದೆ ಎಂದು ತಿಳಿಸಿದ ಸಚಿವರು ಪ್ರತಿಯೊಬ್ಬರೂ ಒಗ್ಗಟ್ಟಾಗಿ ಮೂಲ ಪರಿಕಲ್ಪನೆಯ ಪ್ರಕೃತಿಯ ಆರಾಧನೆಯೆಡೆಗೆ ಮರಳಬೇಕು. ಕೊಂಡೆವೂರಿನ ಅತಿರಾತ್ರ ಸೋಮಯಾಗ ವರ್ತಮಾನದ ಪುಣ್ಯದ ಪ್ರತೀಕ. ರಾಷ್ಟ್ರದ ಸುಧೀರ್ಘ ಪರಂಪರೆ ಮುನ್ನಡೆಯುವಲ್ಲಿ ದೇಶದ ಉದ್ದಗಲ ಕಾಲಾಕಾಲಕ್ಕೆ ಆವಿರ್ಭವಿಸಿ ಉದ್ದರಿಸಿದ ಸಂತರಿಂದ ಕಾರಣವಾಗಿದ್ದು, ಪ್ರಸ್ತುತ ಕೊಂಡೆವೂರು ಆಶ್ರಮ ಜಗದೊಳಿತಿಗೆ ಮುನ್ನಡೆಯುತ್ತಿರುವುದು ಈ ಕಾಲದ ಪುಣ್ಯ ಎಂದರು.

ಮನುಷ್ಯ ಜೀವನದ ಸಾಕಾರತೆಯೆಂದರೆ ಪರೋಪಕಾರಕ್ಕಾಗಿ ಬದುಕನ್ನು ಮೀಸಲಿಡುವುದಾಗಿದೆ. ಸಂಕಷ್ಟದಲ್ಲಿ ಇರುವವರ, ಆರ್ತರ ಬದುಕಿಗೆ ನೆರವಾಗುವ ಸನ್ಮನಸ್ಸು ಎತ್ತರಕ್ಕೇರಿಸುತ್ತದೆ ಎಂದು ಕಟೀಲು ಶ್ರೀಕ್ಷೇತ್ರದ ಆನುವಂಶಿಕ ಪ್ರಧಾನ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.

ಗೋಕರ್ಣದ ಹಿರಿಯ ಅಗ್ನಿಹೋತ್ರಿ ಗಣೇಶ ವಾಸುದೇವ ಜೋಗಳೇಕರ್ ಅವರು ಮಾತನಾಡಿ, ಜೀವನ ಯಜ್ಞದ ಸಕಾರಾತ್ಮಕ ಸಾಕಾರಕ್ಕೆ ಪ್ರತಿಯೊಬ್ಬರೂ ಒಂದಾಗಬೇಕು. ಸಮಾಜದ ಎಲ್ಲಾ ವರ್ಗಗಳ ಜನರು ಜೊತೆಯಾಗಿ ನಿರ್ವಹಿಸುವ ಕರ್ಮ ಯಜ್ಞ ಎಂದೆನಿಸುತ್ತದೆ. ಭಗವಾನ್ ನಿತ್ಯಾನಂದರ ಅನುಗ್ರಹ ವಿಶೇಷತೆಯಿರುವ ಕೊಂಡೆವೂರಿನ ಇಂತಹ ಚಟುವಟಿಕೆಗಳ ಮೂಲಕ ಜಗತ್ತಿಗೇ ಒಳಿತುಂಟಾಗುತ್ತದೆ ಎಂದು ತಿಳಿಸಿದರು.

ಇತಾ ರುಕ್ಕಿಣ ಮಾತನಾಡಿ, ಜಗತ್ತಿಗೇ ಬೆಳಕು ನೀಡಿದ ಭಾರತದ ಬಗ್ಗೆ ನಮಗೆಲ್ಲರಿಗೂ ತುಂಬಾ ಗೌರವದ ಭಾವ ಇದೆ. ಇಲ್ಲಿಯ ಆಚರಣೆ-ನಂಬಿಕೆಗಳು ಪ್ರಕೃತಿಯೊಂದಿಗೆ ನೇರ ಸಂಬಂಧ ಹೊಂದಿದ್ದು, ಹಿನ್ನೆಲೆಯಲ್ಲಿ ಮೌಲ್ಯಯುತ ವಿಜ್ಞಾನ ಇದೆ. ಯಜ್ಞ ಯಾಗಗಳ ಸಕಾರಾತ್ಮಕ ಶಕ್ತಿ ಅಪೂರ್ವವಾಗಿದ್ದು, ಕೊಂಡೆವೂರಿನಲ್ಲಿ ನಡೆಯಲಿರುವ ಅತಿರಾತ್ರ ಸೋಮಯಾಗಕ್ಕೆ ರಷ್ಯಾದಿಂದ ಬಹಳಷ್ಟು ಜನರು ಆಗಮಿಸಲಿದ್ದಾರೆ ಎಂದರು.


ದ.ಕ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು, ಸಮಾಜ ಸೇವಕ ಪಿ.ದೊರೆ ಚೆಟ್ಟಿಯಾರ್ ಜೆಪ್ಪು, ಎ.ಎಸ್ ರಾಮ ಭಟ್, ಡಾ| ಮೋಹನದಾಸ್ ಬೆಂಗಳೂರು, ಡಾ| ಶ್ರೀಧರ ಭಟ್, ಮಾಜಿ ಎಂಎಲ್‍ಸಿ ಮೋನಪ್ಪ ಭಂಡಾರಿ, ಡಾ| ನಾರಾಯಣ ಬೆಂಗಳೂರು, ಡಾ| ಆಶಾ ಜ್ಯೋತಿ ರೈ, ಇತಾ ರುಕ್ಕಿಣ ರಷ್ಯಾ, ಡಾ| ತನ್ಮಯ ಗೋಸ್ವಾಮಿ, ಎಂ.ಬಿ ಪುರಾಣಿಕ್, ರವೀಂದ್ರ ಶೆಟ್ಟಿ ಉಳಿದೊಟ್ಟು ಮತ್ತಿತರ ಗಣ್ಯರು ವೇದಿಕೆಯಲ್ಲಿದ್ದು ಶುಭಹಾರೈಸಿದರು.

ಗಾಯತ್ರೀ ಪ್ರಾರ್ಥನಾಗೀತೆಯನ್ನಾಡಿದರು. ವಿಧಾನ ಪರಿಷತ್ತು ಮಾಜಿ ಪ್ರತಿಪಕ್ಷ ನಾಯಕ ಕ್ಯಾ| ಗಣೇಶ್ ಕಾರ್ಣಿಕ್ ಸ್ವಾಗತಿಸಿದರು. ದಿನಕರ ಹೊಸಂಗಡಿ ಕಾರ್ಯಕ್ರಮ ನಿರೂಪಿಸಿದರು. ರಾಮಚಂದ್ರ ಸಿ. ವಂದಿಸಿದರು.

ಬೆಳಿಗ್ಗಿನ ಸುಮುಹೂರ್ತದಲ್ಲಿ ಯಾಗ ಭೂಮಿಯ ಭೂಮಿ ಪೂಜೆ ನೆರವೇರಿತು. ಬಳಿಕ ಕಟೀಲಿನ ಅನಂತಪದ್ಮನಾಭ ಆಸ್ರಣ್ಣ ಅವರು ಆನಂದ ತೀರ್ಥ ಪುಷ್ಕರಿಣಿಯನ್ನು ಉದ್ಘಾಟಿಸಿದರು. ಗಣ್ಯರಿಂದ ನಕ್ಷತ್ರ ವನ, ನವಗ್ರಹ ಉದ್ಯಾನಗಳ ಲೋಕಾರ್ಪಣೆಯೂ ಈ ಸಂದರ್ಭ ನಡೆಯಿತು. ಒಂಭತ್ತು ಶಿಲಾದೀಪಗಳನ್ನು ಅನಾವರಣ ಗೊಳಿಸುವ ಮೂಲಕ ನವಗ್ರಹ ವನವನ್ನು ವಿಶಿಷ್ಟವಾಗಿ ಲೋಕಾರ್ಪಣೆ ಗೊಳಿಸಲಾಯಿತು.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here