ಬಿಲ್ಲವ ಶಿರೋಮಣಿ ಸೂರು ಸಿ.ಕರ್ಕೇರ ಅಗಲಿಕೆಗೆ ಸಂಘ-ಸಂಸ್ಥೆಗಳ ಭಾವಪೂರ್ಣ ಶ್ರದ್ಧಾಂಜಲಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ನ.15: ಬಿಲ್ಲವ ಸಮುದಾಯ ಹಿರಿಯ ಧುರೀಣ, ಮುಂಬಯಿ ಮಹಾನಗರದ ಹೊಟೇಲು ಉದ್ಯಮದ ಕಾಂತ್ರಿಕಾರ, ಹಿರಿಯ ಹೊಟೇಲು ಉದ್ಯಮಿಯಾಗಿ ಭಾರತ್ ಬ್ಯಾಂಕ್ನ ಮಾಜಿ ಕಾರ್ಯಾಧ್ಯಕ್ಷರಾಗಿ ಬಹುಎತ್ತರದ ವ್ಯಕ್ತಿತ್ವ ಹೊಂದಿ ಬಿಲ್ಲವ ಕುಲರತ್ನ ಹಾಗೂ ತುಳುನಾಡ ಮಾಣಿಕ್ಯ ಬಿರುದಾಂಕಿತರಾಗಿ ಜೇಷ್ಠ ಸಮಾಜ ಸೇವೆಗೈದು ಇತ್ತೀಚೆಗೆ ಸ್ವರ್ಗಸ್ಥರಾದ ಬಿಲ್ಲವ ಶಿರೋಮಣಿ ಸೂರು ಸಿ.ಕರ್ಕೇರ ಅವರಿಗೆ ಇಂದಿಲ್ಲಿ ಮುಂಬಯಿ ವಾಣಿಜ್ಯನಗರಿಯಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು.
ಇಂದಿಲ್ಲಿ ಮಂಗಳವಾರ ಕುರ್ಲಾ ಪೂರ್ವದ ಭಂಡಾರಿ ಎಸ್ಟೇಟ್ನ ಬಂಟರ ಭವನದ ಶ್ರೀಮತಿ ರಾಧಾಭಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ನೆರೆದಿದ್ದ ಮಹಾನಗರದ ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು, ಸ್ವರ್ಗಸ್ಥರ ಬಂಧು-ಮಿತ್ರರು ಅಗಲಿದ ಚೇತನ ಸೂರು ಕರ್ಕೇರ ಅವರÀ ಭಾವಚಿತ್ರಕ್ಕೆ ಪುಷ್ಫಾಂಜಲಿಗೈದು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
ಕರ್ಕೇರರ ಆಪ್ತರೂ, ಕರ್ನಾಟಕ ರಾಜ್ಯದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರೋರ್ವ ಸ್ನೇಹಜೀವಿ ಆಗಿದ್ದರು ಎನ್ನುತ್ತಾ ತಮ್ಮಿಬ್ಬರ ನಿಕಟ ಸಂಬಂಧವನ್ನು ಮೆಲುಕು ಹಾಕಿ ಸಜ್ಜನಿಕೆಯ, ಪ್ರಾಮಾಣಿಕ ವ್ಯಕ್ತಿಯನ್ನು ಅಖಂಡ ಬಿಲ್ಲವ ಸಮಾಜ ಕಳೆದುಕೊಂಡಿದೆ ಎಂದರು. ಜನಸಾಮಾನ್ಯರನ್ನೂ ಜನಮಾನ್ಯರಾಗಿರಿಸಿ ಸದಾ ನಗುಮೊಗದಿಂದ ಸರ್ವರನ್ನೂ ಬಂಧುಗಳನ್ನಾಗಿಯೇ ಕಂಡುಕೊಂಡ ಅನನ್ಯ ಸದ್ಗುಣವಂತರು. ಮಹಾನಗರದ ಹೊಟೇಲು ರಂಗಕ್ಕೆ ಹೊಸ ಆಯಾಮವನ್ನೇ ನೀಡಿದ ದೂರದೃಷ್ಠಿತ್ವದ ಚಿಂತನೆಯ ವ್ಯಕ್ತಿತ್ವದ ಕರ್ಕೇರರ ವೃತ್ತಿನಿಷ್ಠೆ, ಸೇವಾತಾತ್ಪರತೆ ಅನನ್ಯವಾಗಿತ್ತು. ಜನಪರ ಕಾಳಜಿವುಳ್ಳ ಅವÀರು ಹೊಟೇಲುದ್ಯಮ ಮತ್ತು ಸ್ವಸಮಾಜದ ಘನತೆಯನ್ನೂ ಪ್ರತಿಷ್ಠಿತವಾಗಿರಿಸಿದ ಅಗ್ರಗಣ್ಯ ಬಿಲ್ಲವರಾಗಿ ನಮಗೆಲ್ಲರಿಗೂ ಆದರ್ಶಪ್ರಾಯರಾಗಿದ್ದರು. ಇಂತಹ ಅಸಮಾನ್ಯ ಸಾರ್ಥಕ, ಪರಿಪೂರ್ಣತೆಯ ಬದುಕು ರೂಪಿಸಿದ ಕರ್ಕೇರರು ನಮ್ಮನ್ನಗಲಿದರೂ ನಮ್ಮೆಲ್ಲರಲ್ಲೂ ಸದಾ ಶಾಸ್ವತವಾಗಿ ಉಳಿಯಲಿದ್ದಾರೆ ಎಂದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ಪಿ.ವಿ ಭಾಸ್ಕರ್, ಲೀಲಾಧರ ಶೆಟ್ಟಿ, ಸದಾಶಿವ ಎ.ಕರ್ಕೇರ, ಮೃತರ ಮೊಮ್ಮಕ್ಕಳಾದ ಮಾ| ರಿನವ್ ಎಂ.ಕರ್ಕೇರ, ಕು| ರಿದ್ಧಿ ಕರ್ಕೇರ ಮಾತನಾಡಿ ನುಡಿನಮನ ಸಲ್ಲಿಸಿದರು. ನಿತ್ಯಾನಂದ ಡಿ.ಕೋಟ್ಯಾನ್ ಅವರು ಸೂರು ಸಿ.ಕರ್ಕೇರ ಅವರ ಜೀವನ ಪಯಣ, ಬದುಕು ವೈಶಿಷ್ಟ್ಯತೆ ಬಣ್ಣಿಸಿ ಸಂತಾಪಸಭೆ ನಿರ್ವಾಹಿಸಿ ಕಂಬನಿ ಮಿಡಿದರು. ಗಣೇಶ್ ಎರ್ಮಾಳ್ ಬಳಗವು ಭಜನೆ ನಡೆಸಿತು.
ಸಭೆಯಲ್ಲಿ ಮೃತರ ಧರ್ಮಪತ್ನಿ, ಭಾರತ್ ಬ್ಯಾಂಕ್ನ ನಿರ್ದೇಶಕಿ ಶಾರದಾ ಎಸ್.ಕರ್ಕೇರ, ಸುಪುತ್ರರಾದ ಮಹೇಶ್ ಎಸ್.ಕರ್ಕೇರ (ಬಿಸಿಸಿಐ ನಿರ್ದೇಶಕ), ಚಂದ್ರಶೇಖರ್ ಎಸ್.ಕರ್ಕೇರ, ಸುಪುತ್ರಿ ಸ್ವಪ್ನಾ ಎಸ್.ಕರ್ಕೇರ, ರಶ್ಮೀ ಎಂ.ಕರ್ಕೇರ, ವಿಕ್ಕೀ ಅಹುಜಾ, ಸಹೋದರಿ ಕಲ್ಯಾಣಿ ಪೂಜಾರಿ, ಕೃಷ್ಣಪ್ಪ ಕರ್ಕೇರ, ಉಮೇಶ್ ಕರ್ಕೇರ, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ, ದೇವೇಂದ್ರ ವಿ.ಬಂಗೇರ ಖಾರ್ ಸೇರಿದಂತೆ ಮಹನೀಯರನೇಕರು, ಅಪಾರ ಬಂಧು-ಬಳಗ, ಭಾರತ್ ಬ್ಯಾಂಕ್ನ ನಿರ್ದೇಶಕರು, ಉನ್ನತಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು ಪಾಲ್ಗೊಂಡು ಬಾಷ್ಪಾಂಜಲಿ ಅರ್ಪಿಸಿ ಸದ್ಗತಿ ಕೋರಿದರು.