ವಾರ್ಷಿಕ ಮಹೋತ್ಸವ "ಸಾಂತ್ಮಾರಿ" ಹಬ್ಬದ ಪೂರ್ವಭಾವಿಯಾಗಿ ಉದ್ಯಾವರದ ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯದಲ್ಲಿ ಆದಿತ್ಯವಾರ ಸಂಜೆ ಸಹೋದರತ್ವದ ದಿನ ಹಾಗೂ ಪರಮ ಪ್ರಸಾದದ ಭವ್ಯ ಮೆರವಣಿಗೆ ಮತ್ತು ದಿವ್ಯ ಬಲಿಪೂಜೆ ನೆರವೇರಿತು. 'ಪರಮಪ್ರಸಾದದ ಆಶೀರ್ವಾದದಿಂದ ಸೇವೆಯ ಸಮುದಾಯ ಕಟ್ಟೋಣ', ಎಂಬ ಧ್ಯೇಯ ವಾಕ್ಯದೊಂದಿಗೆ ಮಿಲಾಗ್ರಿಸ್ ಕಾಲೇಜ್ ಕ್ಯಾಂಪಸ್ ನ ನಿರ್ದೇಶಕರು, ಕೊಳಲಗಿರಿ ದೇವಾಲಯದ ಧರ್ಮ ಗುರುಗಳಾಗಿರುವ ವಂದನೀಯ ಫಾ.ಪ್ರಕಾಶ್ ಅನಿಲ್ ಕಾಸ್ತೆಲಿನೋ ರವರು ಯೇಸುವಿನ ಸೇವಕರಾಗಲು ಕರೆ ನೀಡಿದರು.
150 ವರ್ಷಗಳ ಇತಿಹಾಸವಿರುವ ಈ ದೇವಾಲಯದಲ್ಲಿ ದೇವರ ಇಚ್ಛೆಯಂತೆ ಪವಿತ್ರ ಸಭೆಯನ್ನು ಕಟ್ಟೋಣ. ಯೇಸುವಿನ ಸೇವಕರಗೋಣ. ಯೇಸುವಿನ ಬೋಧನೆಯಂತೆ ಇತರರನ್ನು ಕ್ಷಮಿಸಿ, ಅವರ ವಾಕ್ಯದಂತೆ ನಡೆಯೋಣ. ಸತತವಾಗಿ ಸೋಲುವರಿಗೆ ಮತ್ತು ಎಲ್ಲವನ್ನೂ ಕಳೆದುಕೊಂಡು ದುಃಖಿತರಾದವರಿಗೆ ದೇವರು ಹೆಚ್ಚಾಗಿ ಪ್ರೀತಿಸುತ್ತಾರೆ. ದೇವರ ಆಶೀರ್ವಾದದಿಂದ ಸಮುದಾಯವನ್ನು ಕಟ್ಟೋಣ ಎಂದು ಪ್ರಧಾನ ಧರ್ಮಗುರುಗಳಾಗಿ ಕರೆ ನೀಡಿದರು.
ದಿವ್ಯ ಬಲಿಪೂಜೆಯ ಬಳಿಕ ಉದ್ಯಾವರ ದೇವಾಲಯದ ಪರಿಸರದಲ್ಲಿ ಪರಮ ಪ್ರಸಾದದ ಭಕ್ತಿಯ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಭಕ್ತಿಯಿಂದ ಭಾಗವಹಿಸಿದರು.
ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಕುಲಪತಿ ಮತ್ತು ಉದ್ಯಾವರ ದೇವಾಲಯದ ಪ್ರಧಾನ ಧರ್ಮಗುರುಗಳಾದ ವಂ. ಫಾ.ಸ್ಟ್ಯಾನಿ ಬಿ ಲೋಬೊ ಉಡುಪಿ ಧರ್ಮಪ್ರಾಂತ್ಯದ ಎಸ್ಟೇಟ್ ನಿರ್ದೇಶಕರಾದ ವಂ. ಫಾ. ಹೆನ್ರಿ ಮಸ್ಕರೇನಸ್, ಸಹಾಯಕ ಗುರುಗಳಾದ ಫಾ.ರಾಲ್ವಿನ್, ದಿಯಾಕಾನ್ ಸ್ಟೀವನ್ ಫೆರ್ನಾಡಿಸ್ ಬಲಿಪೂಜೆಯಲ್ಲಿ ಉಪಸ್ಥಿತರಿದ್ದು, ಭಕ್ತಾದಿಗಳಿಗೆ ಆಶೀರ್ವಚನ ಮಾಡಿದರು.
ದೇವಾಲಯದ ವಾರ್ಷಿಕ ಮಹೋತ್ಸವ ಸಾಂತ್ಮಾರಿ ಹಬ್ಬವು ಮಂಗಳವಾರ ಮತ್ತು ಬುಧವಾರ ಸಂಭ್ರಮದಿಂದ ನಡೆಯಲಿದೆ.