ಉಜಿರೆ: ಧರ್ಮಸ್ಥಳ ಯಕ್ಷಗಾನ ಮಂಡಳಿಯ ಮದ್ದಳೆ ವಾದಕ ಅಡೂರು ಗಣೇಶ್ ರಾವ್ (50) ಮಂಗಳವಾರ ಮಂಗಳೂರಿನ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.
ತೆಂಕುತಿಟ್ಟಿನ ಖ್ಯಾತ ಮದ್ದಳೆಗಾರ ನೆಡ್ಲೆ ನರಸಿಂಹ ಭಟ್ ಹಾಗೂ ಚಿಪ್ಪಾರು ಕೃಷ್ಣಯ್ಯ ಬಳ್ಳಾಲರ ಸಹವರ್ತಿಯಾಗಿ ಹಲವು ವರ್ಷ ಮದ್ದಳೆಗಾರರಾಗಿ ಸೇವೆ ಸಲ್ಲಿಸಿದ ಅಡೂರು ಗಣೇಶ್ರಾವ್ ಆರಂಭದಲ್ಲಿ ಕೆಲವು ವರ್ಷ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸಿ ಬಳಿಕ ಕಳೆದ 22 ವರ್ಷಗಳಿಂದ ಧರ್ಮಸ್ಥಳ ಮೇಳದಲ್ಲಿ ಪ್ರಧಾನ ಮದ್ದಳೆಗಾರರಾಗಿ ಸೇವೆ ಸಲ್ಲಿಸುತ್ತಿದ್ದರು.
ರಂಗದ ಸೂಕ್ಷ್ಮತೆಯ ಜ್ಞಾನದ ಜೊತೆಗೆ ಭಾಗವತರ ಮನೋಧರ್ಮಕ್ಕೆ ಅನುಗುಣವಾಗಿ ಮದ್ದಳೆ ನುಡಿಸುವುದರಲ್ಲಿ ಚಾಣಾಕ್ಷರಾಗಿದ್ದರು. ಚೆಂಡೆ, ಮದ್ದಳೆ ಅಲ್ಲದೆ ಭಾಗವತಿಕೆಯಲ್ಲಿಯೂ ಪರಿಣತರಾಗಿದ್ದ ಇವರು ರಂಗದ ಆಪದ್ಬಾಂಧವ ಕಲಾವಿದರಾಗಿದ್ದರು.
ಚೆಂಡೆ ಮತ್ತು ಮದ್ದಳೆಯನ್ನು ಶುೃತಿಗೊಳಿಸುವುದರಲ್ಲಿಯೂ ಪರಿಣತರಾಗಿದ್ದರು. ಕಳೆದ ಕೆಲವು ದಿನಗಳಿಂದ ಮಧುಮೇಹ ಹಾಗೂ ಕಿಡ್ನಿ ಸಮಸ್ಯೆಯಿಂದ ಪೀಡಿತರಾಗಿದ್ದು ಮಂಗಳವಾರ ಮುಂಜಾನೆ ಆಸ್ಪತ್ರೆಯಲ್ಲಿ ನಿಧನರಾದರು.
ಮೂಲತಃ ಕಾಸರಗೋಡಿನ ಅಡೂರು ನಿವಾಸಿಯಾದ ಅವರಿಗೆ ಪತ್ನಿ, ಒಬ್ಬ ಮಗ ಮತ್ತು ಒಬ್ಬಳು ಮಗಳು ಇದ್ದಾರೆ.