ನಾದೋಪಾಸನೆ ಮೂಲಕ ಭಕ್ತಿಯುತ ಬದುಕು ಸಾಧ್ಯ : ಸದಾಶಿವ ಶಾನುಭೋಗ್
ಮುಂಬಯಿ, (ಬದಿಯಡ್ಕ) ಡಿ.30: ಆಧುನಿಕ ವ್ಯವಸ್ಥೆಗಳ ಸಮಗ್ರ ನಿರ್ವಹಣೆಗೆ, ಮನೋಸ್ಥಿತಿ ಸ್ಥಿಮಿತಿಯ ಕಾಪಿಟ್ಟು ಧನಾತ್ಮಕತೆಯೆಡೆಗೆ ಸಾಗುವ ಶಕ್ತಿ ಸಂಚಯನ ಇಂದು ಅಗತ್ಯವಿದೆ. ನಾದೋಪಾಸನೆಯ ಮೂಲಕ ಭಕ್ತಿಯಿಂದೊಡಗೂಡಿದ ಸಕಾರಾತ್ಮಕ ಪರಿಸರ ನಿರ್ಮಿಸುವ ನಿಟ್ಟಿನಲ್ಲಿ ವೈವಿಧ್ಯಮಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು ಸ್ತುತ್ಯರ್ಹ. ಸಾಮಾಜಿಕ ಜವಾಬ್ದಾರಿಯೂ ಹೌದು ಎಂದು ಕಿರಿಮಂಜೇಶ್ವರದ ಹಿರಿಯ ಸಾಮಾಜಿಕ, ಧಾರ್ಮಿಕ ಮುಖಂಡ ಸದಾಶಿವ ಶಾನುಭೋಗ್ ತಿಳಿಸಿದರು.
ರಾಷ್ಟ್ರೋತ್ಥಾನಕ್ಕಾಗಿ ಸಕಾರಾತ್ಮಕ ಶಕ್ತಿ ಸಂಚಯನದ ಉದ್ದೇಶದೊಂದಿಗೆ ನೀರ್ಚಾಲು ಮಾನ್ಯ ಸಮೀಪದ ಮೇಗಿನಡ್ಕದಲ್ಲಿ ಹಮ್ಮಿಕೊಳ್ಳಲಾದ ಚತುರ್ಮುಖ ಚಿಂತನೆಗಳಿಂದೊಡಗೂಡಿದ ನಮೋ, ಜ್ಞಾನ, ಭಕ್ತಿ, ಯಕ್ಷ ಯಜ್ಞಗಳ ಮೂರನೇ ದಿನವಾದ ಭಾನುವಾರ ನಡೆದ ಭಕ್ತಿ ಯಜ್ಞ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಂತರಂಗಿಕ ಭಕ್ತಿ ಸ್ವಸ್ವರೂಪವನ್ನು ಬಿಂಬಿಸಲು ನೆರವಾಗುತ್ತದೆ. ಪ್ರತಿಯೊಬ್ಬನಲ್ಲೂ ಇಂತಹ ಪಾತೃತ್ವ ಸಿದ್ದಿಸಿದಾಗ ಭಾರತದ ರಾಷ್ಟ್ರ ಸಿದ್ದಾಂತ ಪರಿಕಲ್ಪನೆ ಮೂರ್ತ ಸ್ವರೂಪ ಪಡೆಯುತ್ತದೆ. ಸಂಕಷ್ಟ ಸವಾಲುಗಳಿಂದ ಪಾರಾಗಿದ ಜಗದ್ಗುರುತ್ವ ಸಿದ್ದಿಸುತ್ತದೆ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಹಿರಿಯ ಭಕ್ತಿ ಸಂಗೀತ ಸಂತ ಡಾ.ವಿದ್ಯಾಭೂಷಣ ಅವರು ಮಾತನಾಡಿ ಅಂತರಂಗ ಶುದ್ದಿಯೊಂದಿಗೆ ಬದುಕನ್ನು ಸಾರ್ಥಕಗೊಳಿಸುವುದು ಮಾನವ ಜೀವನದ ಲಕ್ಷ್ಯವಾಗಿದೆ. ಭಕ್ತಿಯ ಹೊರತಾದ ಶುದ್ದಿ ಬೇರೊಂದಿರಲಾರದು. ನರತಂತುಗಳಲ್ಲಿ ಪ್ರವಹಿಸುವ ರಕ್ತದ ಸಂಚಾರವನ್ನು ಉದ್ದೀಪಿಸುವ, ಸಕಾರಾತ್ಮಕತೆಯೆಡೆಗೆ ಮುನ್ನಡೆಸುವ ಶಕ್ತಿ ಸಂಗೀತದ ವಿಶೇಷತೆಯಾಗಿದೆ. ಪರಿಸರ ಸಮಾಜವನ್ನು ತನ್ಮೂಲಕ ರಾಷ್ಟ್ರವನ್ನು ಪ್ರೀತಿ-ಸ್ನೇಹಗಳ ಗಾಂಧರ್ವ ಕಡಲೊಳಗೆ ವೈಭವಕ್ಕೊಯ್ಯುವ ಸಂಕಲ್ಪ ನಮಗಿರಲಿ ಎಂದು ತಿಳಿಸಿದರು.
ಮುಖ್ಯ ಅತಿಥಿüಗಳಾಗಿ ಉಪಸ್ಥಿತರಿದ್ದ ಸಿಂಡಿಕೇಟ್ ಬ್ಯಾಂಕ್ ವಿಭಾಗೀಯ ನಿವೃತ್ತ ಪ್ರಬಂಧಕ ಸದಾನಂದ ರಾವ್ ನವದೆಹಲಿ ಅವರು ಮಾತನಾಡಿ, ಗಡಿನಾಡು ಕಾಸರಗೋಡಿನ ಕನ್ನಡ ಭಾಷೆ, ಸಂಸ್ಕøತಿಯ ಮೇಲಾಗುತ್ತಿರುವ ಪ್ರಹಾರಗಳು ಭೀತಿಗೊಳಪಡಿಸಿದೆ. ಅಸ್ತಿತ್ವದ ಮೇಲಾಗುವ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುವಲ್ಲಿ ನಾವು ನಾವಾಗಿರಲು ಪರಂಪರೆಯನ್ನು ನೆನಪಿಸುವ ಚಟುವಟಿಕೆಗಳು ನಡೆಯುತ್ತಿರಲಿ ಎಂದು ಹಾರೈಸಿದರು.
ಕಾರ್ಯಕ್ರಮ ಸಂಯೋಜಕ ಡಾ| ಮನೋಹರ್ ಮೇಗಿನಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸತೀಶ್ ಕಿರಿಮಂಜೇಶ್ವರ ವಂದಿಸಿದರು. ಪೆÇ್ರ| ಎ.ಶ್ರೀನಾಥ್ ಕಾರ್ಯಕ್ರಮ ನಿರೂಪಿಸಿದರು. ಭಾನುವಾರ ಅಗಲಿದ ಸಂಗೀತ ವಿಮರ್ಶಕ, ಪತ್ರಕರ್ತ ಎ.ಈಶ್ವರಯ್ಯ ಅವರಿಗೆ ಬಾಷ್ಪಾಂಜಲಿ ಕೋರಲಾಯಿತು.
ಬಳಿಕ ಡಾ| ವಿದ್ಯಾಭೂಷಣರಿಂದ ಭಕ್ತಿ ಸಂಗೀತ ಸಂಜೆ ನಡೆಯಿತು. ಪಕ್ಕವಾದ್ಯಗಳಲ್ಲಿ ಫಣೀಂದ್ರ ಭಾಸ್ಕರ ಬೆಂಗಳೂರು (ಮೃದಂಗ), ಎಂ.ಎಸ್ ಗೋವಿಂದ ಸ್ವಾಮಿ (ವಯೊಲಿನ್), ಎಂ.ಆರ್ ಚಂದ್ರಶೇಖರ್ ಮೈಸೂರು (ಘಟಂ)ನಲ್ಲಿ ಸಹಕರಿಸಿದರು.