ಸ್ತ್ರೀಯರು ಸ್ವಾಭಿಮಾನ ಬೆಳೆಸಿ ಸ್ವತಂತ್ರರಾಗಬೇಕು - ಡಾ| ವಿದ್ಯಾ ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜ.28: ಕರ್ಮಭೂಮಿಯಲ್ಲೂ ತಾವು ಬೆಳೆದು ಬಾಳಿದ ಸಂಸ್ಕೃತಿಯ ನೆಪದಲ್ಲಿ ಸಂಘಟಿತರಾಗಿ ಅದೂ ಮಹಿಳೆಯರನ್ನು ಒಗ್ಗೂಡಿಸಿ ಸೇವಾ ನಿರತ ಈ ಸಂಸ್ಥೆಯ ಸೇವೆ ಅನುಪಮ. ತಾನು ಬೆಳೆದಷ್ಟೂ ಸಮಾಜವನ್ನೂ ಬೆಳೆಸುವ ಶಕ್ತಿಯೊಂದಿದ್ದರೆ ಅದು ಸ್ತ್ರೀಶಕ್ತಿಯಾಗಿದೆ. ಸಂಸಾರ ಮತ್ತು ಸಮಾಜದ ಸ್ವಸ್ಥ್ಯ ಕಾಪಾಡುವ ಶಕ್ತಿಯುಳ್ಳ ಮಹಿಳೆಯರು ಸ್ವತಂತ್ರರಾಗಿ ತಮ್ಮತನದಲ್ಲಿ ಮುನ್ನಡೆಯಬೇಕು. ಮಹಿಳೆಯರು ಸ್ವಾಭಿಮಾನ ಬೆಳೆಸಿದಾಗಲೇ ಇದು ಸಾಧ್ಯವಾಗುವುದು. ಆವಾಗಲೇ ಮಹಿಳೆಯರಿಂದ ಸರ್ವ ಶ್ರೇಯಸ್ಸು ಸಾಧ್ಯವಾಗುವುದು ಎಂದು ಆರೋಗ್ಯ ಕಾಳಜಿ ಬಗ್ಗೆ ತಿಳಿಸಿ ಸರ್ವೋತ್ಕೃಷ್ಟ ಆರೋಗ್ಯವನ್ನು ಕಾಪಾಡುವಂತೆ ಮಹಾನಗರದ ಪ್ರಸಿದ್ದ ಸ್ತ್ರೀರೋಗ ತಜ್ಞೆ ಡಾ| ವಿದ್ಯಾ ಹೆಚ್.ಶೆಟ್ಟಿ ಸಲಹಿದರು.
ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ಮಹಿಳಾ ವಿಭಾಗವು ಕಳೆದ ಆದಿತ್ಯವಾರ ಸಾಂತಾಕ್ರೂಜ್ ಪೂರ್ವದಲ್ಲಿನ ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ಶ್ರೀ ವಿಶ್ವೇಶತೀರ್ಥ ಸಭಾಗೃಹದಲ್ಲಿ ಆಯೋಜಿಸಿದ್ದ 2019ನೇ ವಾರ್ಷಿಕ ಮಕರ ಸಂಕ್ರಮಣ ಕಾರ್ಯಕ್ರಮದಲ್ಲಿ ಅತಿಥಿü ಅಭ್ಯಾಗತರಾಗಿದ್ದು ಡಾ| ವಿದ್ಯಾ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಂಡಾರಿ ಸೇವಾ ಸಮಿತಿ ಅಧ್ಯಕ್ಷ ನ್ಯಾ| ಆರ್.ಎಂ ಭಂಡಾರಿ ಮಾರ್ಗದರ್ಶನ ಮತ್ತು ಮಹಿಳಾ ವಿಭಾಗಧ್ಯಕ್ಷೆ ಶಾಲಿನಿ ಆರ್.ಭಂಡಾರಿ ಅಧ್ಯಕ್ಷತೆಯಲ್ಲಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಅತಿಥಿüಗಳಾಗಿ ಹೆಸರಾಂತ ಹೋಮಿಯೋಪಥಿü ಚಿಕಿತ್ಸಕಿ ಡಾ| ನೀತಾ ಕೆ.ದೆಯೋಧರ್, ಸಮಾಜ ಸೇವಕರಾದ ವಸಂತಿ ಮರೋಲಿ ಮತ್ತು ಡಾ| ಹೇಮಂತ್ ಶೆಟ್ಟಿ ಉಪಸ್ಥಿತರಿದ್ದರು.
ಡಾ| ನೀತಾ ಮಾತನಾಡಿ ವ್ಯವಸ್ಥಿತ ಸಂಸಾರಿಕ ಬದುಕÀು ಅಲಂಕರಿಸಲು ಓರ್ವ ಮಹಿಳೆಯಿಂದ ಎಷ್ಟು ಸಾಧ್ಯವೋ ಅಂತೆಯೇ ಸಂಸ್ಕಾರಯುತ ಜೀವನಕ್ಕೂ ಆಕೆಯೇ ಶಕ್ತಿದಾಯಕಳಾಗಿರುತ್ತಾಳೆ. ಮಕರ ಸಂಕ್ರಮಣದಂತಹ ಆಚರಣೆಗಳಿಂದ ಪಾಶ್ಚತ್ಯ ಸಂಸ್ಕೃತಿಯ ಅಂಧಕಾರ ಹೋಗಲಾಡಿಸಲು ಸಾಧ್ಯ. ಆದುದರಿಂದ ಇಂತಹ ಕಾರ್ಯಕ್ರಮಗಳು ಕೇವಲ ಏಕದಿನದ ಉತ್ಸವ ಆಗಿಸದೆ ಮನೆಮನಗಳಲ್ಲಿ ಸಂಸ್ಕೃತಿ ಬಿಂಬಿಸುವ ಆಚರಣೆಯನ್ನಾಗಿಸಲು ಮಹಿಳೆಯರು ಪ್ರಯತ್ನಿಸಬೇಕು ಎಂದರು.
ಸಂಸ್ಕೃತಿಗಳು ಸಾಂಸಾರಿಕ ಜೀವನದ ಜ್ಞಾನದ ಸಂಕೇತವಾಗಿವೆ. ಇದಕ್ಕೆ ಪೂರಕ ಎಂಬಂತೆ ಸಂಕ್ರಾಂತಿ ಹಬ್ಬವನ್ನು ಸುಗ್ಗಿ ಸಂಕೇತವಾಗಿಸಿ ಸಂಭ್ರಮಿಸುತ್ತಾರೆÉ. ಹಳದಿ ಕುಂಕುಮ ಕಾರ್ಯಕ್ರಮವನ್ನಾಗಿಸಿ ನಾಡಿನ ಸಮಾಜ ಬಾಂಧವರನ್ನು ಒಗ್ಗೂಡಿಸಿ ಸಮಿತಿಯ ಮಹಿಳೆಯರು ಹಮ್ಮಿಕೊಂಡಿರುವ ಈ ಸಂಭ್ರಮ ನಿಜಕ್ಕೂ ಅರ್ಥಪೂರ್ಣ ಎಂದು ಅಧ್ಯಕ್ಷ ನ್ಯಾ| ಆರ್.ಎಂ ಭಂಡಾರಿ ನೆರೆದ ಸಮಸ್ತ ಮಹಿಳೆಯರಿಗೆ ಶುಭಾರೈಸಿದರು.
ಮಹಿಳಾ ವಿಭಾಗವು ಆಯೋಜಿಸಲ್ಪಟ್ಟ ಹಳದಿಕುಂಕುಮ ಕಾರ್ಯಕ್ರಮದಲ್ಲಿ ಸಮಿತಿಯ ಗೌ| ಪ್ರ| ಕಾರ್ಯದರ್ಶಿ ಶಶಿಧರ್ ಡಿ.ಭಂಡಾರಿ ಮತ್ತು ಗೌರವ ಕಾರ್ಯದರ್ಶಿ ಜಯಸುಧಾ ಟಿ.ಭಂಡಾರಿ ಹಾಗೂ ಸಮಿತಿಯ ಇತರ ಪದಾಧಿಕಾರಿಗಳು, ಮಹಿಳಾ ಸದಸ್ಯೆಯರು ಉಪಸ್ಥಿತರಿದ್ದು ಕುಲದೇವರಾದ ಶ್ರೀ ಕಚ್ಚೂರು ನಾಗೇಶ್ವರ ದೇವರನ್ನು ಸ್ತುತಿಸಿದರು. ಗೌರವ ಕಾರ್ಯದರ್ಶಿ ಜಯಸುಧಾ ಟಿ.ಭಂಡಾರಿ ಮತ್ತು ಮಹಿಳಾ ಪದಾಧಿಕಾರಿಗಳು ಅತಿಥಿüಗಳನ್ನು ಸಂಪ್ರದಾ ಯಿಕವಾಗಿ ಗೌರವಿಸಿ ಅಭಿನಂದಿಸಿದರು.
ಕು| ರಿಯಾ ರಂಜಿತ್ ಭಂಡಾರಿ ಪ್ರಾರ್ಥನೆಯನ್ನಾಡಿದರು. ಮಹಿಳಾ ಜೊತೆ ಕಾರ್ಯದರ್ಶಿ ಸರಿತಾ ಬಂಗೇರ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕಾರಿ ಸಮಿತಿ ಸದಸ್ಯೆ ಪಲ್ಲವಿ ರಂಜಿತ್ ಭಂಡಾರಿ ಅರಶಿಣ ಕುಂಕುಮದ ಬಗ್ಗೆ ವಿವರಿಸಿ ಅತಿಥಿüಗಳನ್ನು ಪರಿಚಯಿಸುತ್ತಾ ಸಭಾ ಕಾರ್ಯಕ್ರಮ ನಿರೂಪಿಸಿದರು. ಉಪ ಕಾರ್ಯಾಧ್ಯಕ್ಷೆ ರೇಖಾ ಎ.ಭಂಡಾರಿ ವಂದಿಸಿದರು. ನಿರೀಕ್ಷಾ ಆರ್.ನಿತ್ಯಾನಂದ ನಾರಿಶಕ್ತಿಯ ನೃತ್ಯ ಪ್ರದರ್ಶಿಸಿದರು ಹಾಗೂ ಮಕ್ಕಳು ಮತ್ತು ಮಹಿಳಾ ಸದಸ್ಯೆಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು.