ದೀಕ್ಷೆಯಿಂದ ಆತ್ಮಕಲ್ಯಾಣ-ಮೋಕ್ಷ ಪ್ರಾಪ್ತಿ : ವರ್ಧಮಾನ ಸಾಗರ ಮುನಿಜೀ
ಮುಂಬಯಿ (ಉಜಿರೆ), ಫೆ.10: ಸುಖ-ಭೋಗಗಳನ್ನು ತ್ಯಾಗ ಮಾಡಿ ವೈರಾಗ್ಯ ಭಾವನೆಯಿಂದಯೋಗ ಸಾಧನೆ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಆತ್ಮನೇ ಪರಮಾತ್ಮನಾಗಬಲ್ಲ. ರಾಗದ ಪರಿತ್ಯಾಗವೇ ವೈರಾಗ್ಯ. ದೀಕ್ಷೆಯು ಶಾಶ್ವತ ಸುಖಕ್ಕೆ ಕಾರಣವಾಗಿದೆ.ಮೋಕ್ಷಪ್ರಾಪ್ತಿಗೆ ಮನುಷ್ಯಜನ್ಮವೇ ಶ್ರೇಷ್ಠವಾಗಿದೆ ಎಂದು ಆಚಾರ್ಯ ಶ್ರೀ 108 ವರ್ಧಮಾನ ಸಾಗರ ಮುನಿಮಹಾರಾಜರು ತಿಳಿಸಿದರು. ಐದು ಮಂದಿಗೆ ಕ್ಷುಲ್ಲಕ ದೀಕ್ಷೆ ನೀಡಿದ ಬಳಿಕ ಅವರು ಮಂಗಲ ಪ್ರವಚನ ಮಾಡಿದರು.
ಧರ್ಮಸ್ಥಳದಲ್ಲಿ ನಡೆಯುತ್ತಿರುವ ಭಗವಾನ್ ಬಾಹುಬಲಿ ಮಹಾ ಮಸ್ತಕಾಭಿಷೇಕದ ಸಂದರ್ಭದಲ್ಲಿ ಇಂದಿಲ್ಲಿ ಭಾನುವಾರ ರತ್ನಗಿರಿಯಲ್ಲಿ ಬಾಹುಬಲಿಯ ಪದತಲದಲ್ಲಿ ಧಾರ್ಮಿಕ ವಿಧಿ-ವಿಧಾನಗಳು ನಡೆಯುತ್ತಿದ್ದಂತೆ ಯೇ ಅಮೃತವರ್ಷಿಣಿ ಸಭಾ ಭವನದಲ್ಲಿ ಮೋಕ್ಷ ಸಾಧನೆಗಾಗಿ ಕ್ಷುಲ್ಲಕ ದೀಕ್ಷಾ ಮಹೋತ್ಸವದ ಸಂಭ್ರಮ ಸಡಗರ ನೇರವೇರಿಸಿ ವರ್ಧಮಾನ ಸಾಗರ ಮುನಿಮಹಾರಾಜರು ತಿಳಿಸಿದರು.
ಆಚಾರ್ಯ ಶ್ರೀ 108 ವರ್ಧಮಾನ ಸಾಗರ್ಜಿ ಮುನಿಮಹಾರಾಜರು, ಆಚಾರ್ಯ ಶ್ರೀ 108 ಪುಷ್ಪದಂತ ಸಾಗರ ಮುನಿ ಮಹಾರಾಜರು ಹಾಗೂ ಮುನಿ ಸಂಘದವರು ಮತ್ತು ಮಾತಾಜಿಯವರ ನೇತೃತ್ವದಲ್ಲಿ ಐದು ಮಂದಿಗೆ ಕ್ಷುಲ್ಲಕ ದೀಕ್ಷೆ ನೀಡುವ ಮಹೋತ್ಸವ ನಡೆಯಿತು.
ಬೆಳಿಗ್ಗೆ ಭಗವಾನ್ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಿಶೇಷ ಪೂಜೆ ಬಳಿಕ ದೀಕ್ಷೆ ಪಡೆಯುವ ಐದು ಮಂದಿಯವರಾದ ಮಧ್ಯಪ್ರದೇಶದ 24 ವರ್ಷ ಪ್ರಾಯದ ಸತೀಶ್ ಬೈಯ್ಯಾಜಿ, ಹೈದ್ರಾಬಾದ್ನ ಪೂರನ್ ಬೈಯ್ಯಾಜಿ, ಉತ್ತರ ಪ್ರದೇಶದ ಶ್ರೀ ಪ್ರಭು ಬೈಯ್ಯಾಜಿ, ಸಂಯಮ ಮತ್ತು ಸವಿತಾ ಇವರನ್ನು ಹಾಗೂ ಮುನಿ ಸಂಘದವರನ್ನು ಭವ್ಯ ಮೆರವಣಿಗೆಯಲ್ಲಿ ಅಮೃತ ವರ್ಷಿಣಿ ಸಭಾ ಭವನಕ್ಕೆ ಕರೆತರಲಾಗಿ ಕ್ಷುಲ್ಲಕ ದೀಕ್ಷೆ ನೀಡಲಾಯಿತು. ಅಂತೆಯೇ ದೀಕ್ಷಾಥಿರ್üಗಳನ್ನು ಮುನಿಗಳು ಯಾಕೆ ದೀಕ್ಷೆ ಪಡೆಯುವುದು ಎಂದು ಪ್ರಶ್ನಿಸಿ ಉತ್ತಮ ವಸ್ತ್ರಾಭರಣ ತೊಡಿಸಿ ಸಿಂಗರಿಸಿ ಸತೀಶ್ ಬೈಯ್ಯಾಜಿಗೆ ಪರಮಸಾಗರ್ ಮಹಾರಾಜ್, ಪೂರನ್ ಬೈಯ್ಯಾಜಿಗೆ ಪರಮಾತ್ಮಸಾಗರ್, ಶ್ರೀಪ್ರಭು ಬೈಯ್ಯಾಜಿಗೆ ಪ್ರಭಾಕರ್ ಸಾಗರ್ ಮಹಾರಾಜ್, ಸಂಯಮ ಅವರಿಗೆ ಅಮರಜ್ಯೋತಿ ಮಾತಾಜಿ ಹಾಗೂ ಸವಿತಾ ಅವರಿಗೆ ಅಮೃತಜ್ಯೋತಿ ಮಾತಾಜಿ ಎಂದು ಆಚಾರ್ಯ ಪುಷ್ಪದಂತ ಸಾಗರ ಮುನಿಮಹಾರಜರು ನಾಮಕರಣ ಮಾಡಿದರು.
ಎಲ್ಲರೂ ಆತ್ಮಕಲ್ಯಾಣಕ್ಕಾಗಿ ಹಾಗೂ ಮೋಕ್ಷಪ್ರಾಪ್ತಿಗಾಗಿ ದೀಕ್ಷೆ ಪಡೆಯುವುದಾಗಿ ತಮ್ಮ ಅಭಿಪ್ರಾಯ ತಿಳಿಸಿದರು. ಅವರ ಮಾತಾ-ಪಿತರಲ್ಲಿಯೂ ಒಪ್ಪಿಗೆ ಪಡೆದ ಬಳಿಕ ದೀಕ್ಷಾಕಾರ್ಯಕ್ರಮ ನಡೆಯಿತು. ದೀಕ್ಷಾಥಿರ್üಗಳ ಎಲ್ಲಾ ಆಭರಣಗಳನ್ನು ಒಂದೊಂದಾಗಿ ಕಳಚಲಾಯಿತು.ಅಂಗಿ ಮತ್ತು ಬಟ್ಟೆಯನ್ನೂ ಕಳಚಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಕೇಶಲೋಚನ ಮಾಡಲಾಯಿತು.ತಲೆಯಕೂದಲನ್ನು ಮುನಿಗಳು ಕೈಯಿಂದ ಎಳೆದು ತೆಗೆಯುವುದಕ್ಕೆ ಕೇಶಲೋಚನ ಎನ್ನುತ್ತಾರೆ. ಸಂಯಮ ಮತ್ತು ಸವಿತಾಗೆ ಬಿಳಿ ಸೀರೆ ಉಡಿಸಿದರು. ಪಂಚ ನಮಸ್ಕಾರ ಮಂತ್ರ ಪಠಣ ಹಾಗೂ ಶ್ಲೋಕಗಳ ಪಠಣದೊಂದಿಗೆ ಮುನಿ ಸಂಘದವರು ಪಿಂಛಿ ಮತ್ತು ಕಮಂಡಲ ಹಾಗೂ ಸ್ವಾಧ್ಯಾಯಕ್ಕಾಗಿ ಶಾಸ್ತ್ರ ಗ್ರಂಥಗಳನ್ನು ನೀಡಿ ಕ್ಷುಲ್ಲಕ ದೀಕ್ಷೆ ನೀಡಿದರು.
ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ, ಡಿ.ಸುರೇಂದ್ರಕುಮಾರ್, ಹರ್ಷೆಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಮತ್ತು ಶ್ರದ್ಧಾ ಅಮಿತ್ ಹಾಗೂ ಗಣ್ಯರನೇಕರು ಉಪಸ್ಥಿತರಿದ್ದು, ಅನಿತಾ ಸುರೇಂದ್ರ ಕುಮಾರ್ ಅಕ್ಕಿಯಿಂದ ಸ್ವಸ್ತಿಕವನ್ನು ರಚಿಸಿದರು.