ಮುಂಬಯಿ, ಫೆ. 22: ಮಹಾನಗರದಲ್ಲಿನ ಪತ್ರಿಕಾ ಛಾಯಾಚಿತ್ರಕಾರ ರವೀಂದ್ರ ಆರ್.ಝೆಂಡೆ (53.) ಇವರು ಅನಾರೋಗ್ಯದಿಂದ ಇಂದಿಲ್ಲಿ (ಫೆ.22) ಶುಕ್ರವಾರ ಸಯಾನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ತನ್ನ ಸಾಂದರ್ಭಿಕ ಮತ್ತು ಆಧುನಿಕ ಛಾಯಾಚಿತ್ರಗಳ ಮೂಲಕ ಮುದ್ರಣ ಮಾಧ್ಯಮದಲ್ಲಿ ಗುರುತಿಸಿ ಕೊಂಡಿದ್ದ ಝೆಂಡೆ ಉದಯವಾಣಿ, ಫ್ರೀಪ್ರೆಸ್ ಜರ್ನಲ್, ಕರ್ನಾಟಕ ಮಲ್ಲ ಸೇರಿದಂತೆ ಮಹಾನಗರದಿಂದ ಪ್ರಕಾಶಿತ ವಿವಿಧ ಭಾಷೆಗಳ ವಿವಿಧ ದೈನಿಕಗಳಿಗೆ ನಗರದಲ್ಲಿ ನಡೆಯುತ್ತಿರುವ ವಿವಿಧ ಘಟನೆ, ಸಮಾರಂಭ, ಪತ್ರಿಕಾಗೋಷ್ಠಿಗಳ ಛಾಯಾಚಿತ್ರಗಳನ್ನು ಒದಗಿಸುತ್ತಿದ್ದರು.
ಹಲವು ಪತ್ರಿಕೆಗಳ ಸಂಪಾದಕರು, ಭಾತ್ಮಿದಾರರ ನಿಕಟ ಸಂಪರ್ಕ ಹೊಂದಿದ್ದ ಝೆಂಡೆ ಸರಳ ಸಜ್ಜನಿಕೆಯ ವ್ಯಕ್ತಿತ್ವವುಳ್ಳವರಾಗಿದ್ದರು. ಮಹಾರಾಷ್ಟ್ರ ಸಾಂಗ್ಳಿ ಜಿಲ್ಲೆಯ ಖಾನಾಪುರ್ ಬಲೋಡಿ ಮೂಲದವರಾಗಿದ್ದು ಕಳೆದ ಅನೇಕ ವರ್ಷಗಳಿಂದ ಮಾಟುಂಗಾ ಪೂರ್ವದ ಲೇಬರ್ ಕ್ಯಾಂಪ್ನಲ್ಲಿ ವಾಸವಾಗಿದ್ದರು. ಮೃತರು ಪತ್ನಿ, ಒಂದು ಗಂಡು ಸೇರಿದಂತೆ ಬಂಧುಗಳು, ಪತ್ರಕರ್ತ ಬಳಗ ಅಗಲಿದ್ದಾರೆ.