ಮುಂಬಯಿ, ಮಾ.11: ಕಾಸರಗೋಡು ಉಪ್ಪಳ ಅಲ್ಲಿನ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಕಳೆದ ಫೆ.18ರಿಂದ 25ರ ವರೆಗೆ ಜರಗಿದ `ವಿಶ್ವಜಿತ್ ಅತಿರಾತ್ರ ಸೋಮಯಾಗ' ಯಶಸ್ವಿಯಾಗಿ ಜರಗಿದ್ದು, ಲಕ್ಷಾಂತರ ಭಕ್ತರು ಭಾಗವಹಿಸಿ ಸೋಮಯಾಗಕ್ಕೆ ಸಾಕ್ಷಿಯಾಗಿ ಪುಣೀತರಾಗಿದ್ದಾರೆ. ಯಾಗ ಸಮಿತಿ, ಮುಂಬಯಿ ಉಪಸಮಿತಿ ಸೇರಿದಂತೆ ಮುಂಬಯಿನ ಅಪಾರ ಸಂಖ್ಯೆಯ ಭಕ್ತರು ಯಾಗದಲ್ಲಿ ಸಹಭಾಗಿಗಳಾಗಿ ಸಹಕಾರ ನೀಡಿದ್ದಾರೆ. ಆದರೆ ಅನಾನುಕೂಲದಿಂದ ಭಾಗವಹಿಸಲಾಗದ ಸಹಸ್ರ ಸಂಖ್ಯೆಯ ಭಕ್ತರಿಗೆ ಪ್ರಸಾದ ವಿತರಣೆ ನಡೆಸಲಾಗುವುದು.
ಆ ಪ್ರಯುಕ್ತ ಇದೇ ಮಾ.17ನೇ ಆದಿತವಾರ ಸಂಜೆ 4.00 ಗಂಟೆಗೆ ಮುಲುಂಡ್ ಚೆಕ್ನಾಕ ಸಮೀಪದ ನವೋದಯ ಹೈಸ್ಕೂಲು ಸಭಾಗೃಹದಲ್ಲಿ ಧಾರ್ಮಿಕ ಸಭೆವೊಂದನ್ನು ಆಯೋಜಿಸಲಾಗಿದ್ದು ಶ್ರೀ ಕ್ಷೇತ್ರದಲ್ಲಿ ಜರುಗಿದ ಯಾಗದ ಪ್ರಸಾದವನ್ನು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ತಮ್ಮ ಸ್ವಹಸ್ತದಿಂದ ವಿತರಿಸಿ ಆಶೀರ್ವಾದಿಸಲಿದ್ದಾರೆ.
ಭಕ್ತಾಭಿಮಾನಿಗಳೆಲ್ಲರೂ ಧಾರ್ಮಿಕ ಸಭೆಯಲ್ಲಿ ಉಪಸ್ಥಿತರಿದ್ದು, ಪವಿತ್ರ ಪ್ರಸಾದವನ್ನು ಸ್ವೀಕರಿ ಧನ್ಯರೆಣಿಸಬೇಕು ಎಂದು ಮುಂಬಯಿ ಯಾಗ ಸಮಿತಿ ಹಾಗೂ ಉಪ ಸಮಿತಿಯ ಪದಾಧಿಕಾರಿಗಳು ಈ ಮೂಲಕ ವಿನಂತಿಸಿದ್ದಾರೆ.