ಯಕ್ಷಗಾನದ ಅರ್ಥ ಬಹು ವ್ಯಾಪಕವಾದುದು : ಆನಂದ ಭಟ್ ಪುಣೆ
(ಚಿತ್ರ / ವರದಿ : ರೊನಿಡಾ ಮುಂಬಯಿ)
ಮುಂಬಯಿ, ಎ.01: ಜಾತಿ, ಮತ-ಭೇದವನ್ನು ಮರೆತು ಎಲ್ಲರಿಗೂ ಸೆಳೆಯುವ ಏಕೈಕ ಕಲೆ ಅದು ನಮ್ಮ ನೆಚ್ಚಿನ ಯಕ್ಷಗಾನ. ಯಕ್ಷಗಾನ ಕಲೆಯನ್ನು ಒಂದು ಕಲೆಯಾಗಿ ಸ್ವೀಕರಿಸದೆ ಅದನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ನಿಟ್ಟಿನಲ್ಲಿಇಂದಿನ ಈ ಯಕ್ಷ ಶಿಕ್ಷಣವು ತುಂಬಾ ವಿಶೇಷವೆನಿಸುತ್ತದೆ. ಬಹಳ ಶ್ರದ್ಧೆಯಿಂದ ಯಕ್ಷಗಾನ ಕಲೆಯನ್ನು ಕಲಿಯುವ ಈ ಮಕ್ಕಳು ಅಪಾರವಾದ ಶ್ರಮವನ್ನು ಮಾಡಬೇಕು. ಯಕ್ಷಗಾನ ಇದರ ಅರ್ಥ ಬಹು ವ್ಯಾಪಕವಾಗಿದೆ. ಬಹು ವೈವಿಧ್ಯಮಯ ಅಭಿನಯವನ್ನು ಬಯಸುವ ಈ ಕಲೆ ಜನರನ್ನು ಹೊಂದುಗೂಡಿಸುವ ಶಕ್ತಿಯನ್ನು ಹೊಂದಿದೆ. ನಿಮ್ಮ ಆಚಾರ ವಿಚಾರ ಹಾಗೂ ನಮ್ಮ ಸಂಸ್ಕೃತಿ ಉಳಿದಿರುವುದು ಈ ನಮ್ಮ ಯಕ್ಷಗಾನ ಕಲೆ ಎಂದು ಹೇಳಲು ತಪ್ಪೇನು ಇಲ್ಲ ಎಂದು ಯಕ್ಷರಂಗದ ಮಹಾನ್ ಕಲಾವಿದ ದಿ| ಕುರಿಯ ವಿಠಲ ಶಾಸ್ತ್ರಿ ಅವರ ಸೋದರಳಿಯ, ಮದಂಗಲ್ಲು ಗುರು ಆನಂದ ಭಟ್ (ಪುಣೆ) ನುಡಿದರು.
ಇಂದಿಲ್ಲಿ ರವಿವಾರ ಸಂಜೆ ವಾಶಿ ಅಲ್ಲಿನ ನವಿಮುಂಬಯಿ ಕನ್ನಡ ಸಂಘದ ಎಂ.ಬಿ ಕುಕ್ಯಾನ್ ಸಭಾಗೃಹದಲ್ಲಿ ಯಕ್ಷಗಾನ ಪರಂಪರೆಯನ್ನು ಉಳಿಸುವ ಮತ್ತು ಬೆಳೆಸುವ ದೃಷ್ಟಿಯಿಂದ ಯಕ್ಷ ಶಿಕ್ಷಣವಾಗಿಸಿ ಯಕ್ಷಗಾನದ ಸಮಗ್ರ ಶಿಕ್ಷಣ ವತಿಯಿಂದ ಪದವೀಧರ ಯಕ್ಷಗಾನ ಸಮಿತಿ ಮತ್ತು ನವಿಮುಂಬಯಿ ಕನ್ನಡ ಸಂಘ ವಾಶಿ ಸಂಸ್ಥೆಗಳು ಆಯೋಜಿಸಿದ್ದ `ಯಕ್ಷಗಾನದ ಸಮಗ್ರ ಶಿಕ್ಷಣ' ಉದ್ಘಾಟಿಸಿ ಆನಂದ ಭಟ್ ಮಾತನಾಡಿದರು.
ನವಿಮುಂಬಯಿ ಕನ್ನಡ ಸಂಘದ ಅಧ್ಯಕ್ಷ ಬಿ.ಎಚ್ ಕಟ್ಟಿ ಅಧ್ಯಕ್ಷೀಯ ಭಾಷಣಗೈದು ಕಳೆದ ಸುಮಾರು ನಾಲ್ಕು ದಶಕಗಳಿಂದÀ ನವಿಮುಂಬಯಿ ಕನ್ನಡ ಸಂಘ ಕನ್ನಡಿಗರ ಕೈಂಕರ್ಯವನ್ನು ಮಾಡಿತ್ತಾ ಬಂದಿದೆ ಎಂದು ಸಂಘದ ಇದುವರೆಗಿನ ಕಾರ್ಯವೈಖರಿಯನ್ನು ವಿವರಿಸಿದರು.
ಪದವೀಧರ ಯಕ್ಷಗಾನ ಸಮಿತಿ ಅಧ್ಯಕ್ಷ ಹೆಚ್.ಬಿ.ಎಲ್ ರಾವ್ ಮಾತನಾಡಿ ಯಕ್ಷಗಾನ ಕಲೆಯು ತುಳು ಕನ್ನಡಿಗರ ಉಸಿರಾಗಿದೆ. ವಾದನ, ಗಾಯನ, ನರ್ತನ, ವೇಷಭೂಷಣಗಳಿದ ಜನಮನ ಆಕರ್ಷಿಸುವ ಏಕೈಕ ಕಲೆ ಯಕ್ಷಗಾನ ಆಗಿದೆ. ಅದು ಬರೀ ಕಲೆಯಾಗಿ ಉಳಿಯದೆ ತುಳು ಕನ್ನಡಿಗರ ಆರಾಧನೆಯ ಕಲೆಯಾಗಿ ಈಗಲೂ ಮುಂಬಯಿಯ ಲ್ಲಿ ವಿಜೃಂಭಣೆಯಿಂದ ಮೆರೆಯುತ್ತಿದೆ. ಇಂತಹ ಬಹು ಪರಂಪರೆಯುಳ್ಳ ಕಲೆ ಮುಂದಿನ ಪೀಳಿಗೆಗೆ ತಿಳಿಯುವಂತೆ ಮಾಡುವುದು, ಅವರಿಗೆ ಯಕ್ಷಗಾನ ಕಲೆಯ ಮಹತ್ವವನ್ನು ಕಲಿಸಿಕೊಡುವುದು ಓರ್ವ ಯಕ್ಷಗಾನ ಕಲಾವಿದನಾದ ನನಗೆ ಹೆಮ್ಮೆ ಅನಿಸುತ್ತದೆ. ಯಕ್ಷಗಾನ ಕಲೆಯಲ್ಲಿ ಆಸಕ್ತಿ ಇದ್ದವರಿಗೆ ಅವಕಾಶವನ್ನು ಕಲ್ಪಿಸಿ ಕೊಡುವುದು ಯಕ್ಷಗಾನದ ಸಮಗ್ರ ಶಿಕ್ಷಣದ ಉದ್ದೇಶವಾಗಿದೆ. ಇಂದಿಲ್ಲಿ ಬಹಳಷ್ಟು ಜನ ಯಕ್ಷಗಾನ ಕುರಿತು ಶಿಕ್ಷಣ ಪಡೆಯುವ ನಿಮಿತ್ತ ನಿಮಗೆಲ್ಲರಿಗೂ ಶುಭಾಶಯಗಳನ್ನು ಅರ್ಪಿಸುತ್ತೇನೆ ಎಂದರು.
ಚೆಂಡೆ, ಮದ್ದಳೆ ಮತ್ತು ಭಾಗವತಿಕೆ ವಿಷಯದಲ್ಲಿ ಭಾಗವತ ಜಯಪ್ರಕಾಶ್ ನಿಡುವಣ್ಣಾಯ, ತೆಂಕುತಿಟ್ಟಿನ ಹೆಜ್ಜೆಗಾರಿಕೆ ವಿಷಯದಲ್ಲಿ ವಾಸುದೇವ ಮಾರ್ನಾಡ್, ಬಡಗುತಿಟ್ಟಿನ ಹೆಜ್ಜೆಗಾರಿಕೆ ವಿಷಯದಲ್ಲಿ ರಮೇಶ್ ಬಿರ್ತಿ, ಯಕ್ಷಗಾನ ಸಾಹಿತ್ಯ, ಅರ್ಥಗಾರಿಕೆ ಮತ್ತು ಮುಖವರ್ಣಿಕೆ ವಿಷಯ ಹೆಚ್.ಬಿ.ಎಲ್ ರಾವ್ ಮಾಹಿತಿ ನೀಡಿದರು.
ಗುರು ನಾರಾಯಣ ಯಕ್ಷಗಾನ ಮಂಡಳಿ, ಯಕ್ಷಗಾನ ಕಲಾವಿದರುಗಳಾದ ವಿದುಷಿ ಸಹನಾ ಭಾರದ್ವಾಜ್, ಡಾ| ಸುರೇಂದ್ರ ಕುಮಾರ್ ಹೆಗ್ಡೆ, ವೈ.ವಿ ಮಧುಸೂದನ್ ರಾವ್, ಎಸ್.ಕೆ ಸುಂದರ್, ಸಾ.ದಯಾ, ನಿತ್ಯಾನಂದ ಕೋಟ್ಯಾನ್, ಬೈಲೂರು ಬಾಲಚಂದ್ರ ರಾವ್, ಎಂ.ಬಿ ಕುಕ್ಯಾನ್, ಸೋಮನಾಥ ಕರ್ಕೇರ, ಕರುಣಾಕರ ಎನ್.ಶೆಟ್ಟಿ, ದುರ್ಗಪ್ಪ ಕೋಟ್ಯಾವರ್ ಮತ್ತಿತರರು ಉಪಸ್ಥಿತರಿದ್ದರು.
ಈ ಶುಭವಸರದಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆ ನಡೆಸಲಾಗಿದ್ದು, ದಿನೇಶ್ ಚಡಗ ಪೂಜಾಧಿಗಳನ್ನು ನೆರವೇರಿಸಿ ತೀರ್ಥಪ್ರಸಾದ ವಿತರಿಸಿದರು. ಸುಧೇಶ್ ಕರ್ಕೇರ ದಂಪತಿ ಪೂಜೆಯ ಯಜಮಾನತ್ವ ವಹಿಸಿದ್ದರು. ನವಿಮುಂಬಯಿ ಕನ್ನಡ ಸಂಘದ ಕಾರ್ಯದರ್ಶಿ ಸುಜಾತಾ ರಾವ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಗದೀಶ್ ಎನ್.ರೈ ವಂದನೆಗೈದರು.