ಸಂಸ್ಕೃತಿಯು ಬದುಕಿನ ಶೈಲಿಯಾಗಿದೆ : ಮುಖ್ಯಮಂತ್ರಿ ಚಂದ್ರು
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಮಾ.31: ಕನ್ನಡದ ನಾಡು ನುಡಿಯ ಸೇವೆಗಾಗಿ ರಾಜ್ಯ, ರಾಷ್ಟ್ರ, ವಿದೇಶ ಎಲ್ಲಿಂದಲೂ ಕರೆದರೂ ಹೋಗುವ ಮನಸ್ಸು ಮಾಡಿಕೊಂಡಿದ್ದೇನೆ. ಕಾರಣ ಒಳನಾಡ ಕನ್ನಡಿಗರಿಂದ ಸಾಧ್ಯವಾಗದ್ದನ್ನು ಮುಂಬಯಿ ಕನ್ನಡಿಗರು ಸಾಧಿಸಿದ್ದಾರೆ. ಕನ್ನಡಿಗರಿಂದಲೇ ನಾನು ಈ ಮಟ್ಟಕ್ಕೆ ಏರಲು ಸಾಧ್ಯವಾಯಿತು. ಆ ಖರ್ಜನ್ನು ತೀರಿಸಲು ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತಿದ್ದೇನೆ. ಸಂಸ್ಕೃತಿಯು ಬದುಕಿನ ಶೈಲಿಯಾಗಿದ್ದು ಸಂಸ್ಕೃತಿಯ ಉಳಿವಿಗೆ ಇಂತಹ ಕಾರ್ಯಕ್ರಮಗಳು ಪೂರಕವಾಗಿವೆ ಎಂದು ಹೆಸರಾಂತ ಸಿನೆಮಾ ನಟ, ರಂಗ ಕಲಾವಿದ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಇದರ ನಿಕಟಪೂರ್ವ ಅಧ್ಯಕ್ಷ ಡಾ| ಮುಖ್ಯಮಂತ್ರಿ ಚಂದ್ರು ಹೇಳಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶತಮಾನ ಮಿಕ್ಕಿದ ಸೇವಾ ನಿರತ ಮಹಾನಗರದಲ್ಲಿನ ತುಳುಕನ್ನಡಿಗರ ಹಿರಿಯ ಸಂಸ್ಥೆ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಇಂದಿಲ್ಲಿ ಆದಿತ್ಯವಾರ ಸಂಜೆ ಅಂಧೇರಿ ಪಶ್ಚಿಮದಲ್ಲಿನ ಮೊಗವೀರ ಭವನದ ಎಂವಿಎಂ'ಎಸ್ ಶ್ರೀಮತಿ ಶಾಲಿನಿ ಜಿ.ಶಂಕರ್ ಕನ್ವೆನ್ಶನ್ ಸೆಂಟರ್ ಸಭಾಗೃಹದಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಜನಮನ ಜಾನಪದ ಸಾಂಸ್ಕೃತಿಕ ಸಂಸ್ಥೆ ಬೆಂಗಳೂರು ಸಹಯೋಗದಲ್ಲಿ ಆಯೋಜಿಸಿದ್ದ ಗಡಿನಾಡ ಜಾನಪದ ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿ ಚಂದ್ರು ಮಾತನಾಡಿದರು.
ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಅಧ್ಯಕ್ಷ ಕೃಷ್ಣಕುಮಾರ್ ಎಲ್.ಬಂಗೇರ ಅಧ್ಯಕ್ಷತೆಯಲ್ಲಿ ಜರುಗಿದ ಸಾಂಸ್ಕೃತಿಕ ಉತ್ಸವದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ| ಕೆ.ಮುರಳೀಧರ, ಹಿರಿಯ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ, ಕನ್ನಡ ಸಂಘ ಬಂಗಾರಪೇಟೆ ಅಧ್ಯಕ್ಷ ಪಲ್ಲವಿಮಣಿ ಎಂ.ಸುಬ್ರಹ್ಮಣಿ, ಎನ್ಆರ್ಎ ಫೆÇೀರಂ ಬಾಹ್ರೇಯ್ನ್ ಅಧ್ಯಕ್ಷ ಲೀಲಾಧರ್ ಬೈಕಾಂಪಾಡಿ, ಉದ್ಯಮಿ ಶ್ರೀನಿವಾಸ ಎನ್.ಕಾಂಚನ್ ಅತಿಥಿü ಅಭ್ಯಾಗತರುಗಳಾಗಿ ಹಾಗೂ ಮೊಗವೀರ ವ್ಯವಸ್ಥಾಪಕ ಮಂಡಳಿ ಉಪಾಧ್ಯಕ್ಷ ಶ್ರೀನಿವಾಸ ಸಿ.ಸುವರ್ಣ ಮತ್ತು ಅರವಿಂದ ಕಾಂಚನ್, ಗೌ| ಪ್ರ| ಕಾರ್ಯದರ್ಶಿ ಸಂಜಿವ ಕೆ.ಸಾಲ್ಯಾನ್, ಗೌ| ಕೋಶಾಧಿಕಾರಿ ದಿಲೀಪ್ಕುಮಾರ್ ಮೂಲ್ಕಿ, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ರಾಜು ಶ್ರೀಯಾನ್, ಕಾರ್ಯದರ್ಶಿ ಧರ್ಮೇಶ್ ಪುತ್ರನ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಅತಿಥಿüಗಳು ಮೊಗವೀರ ಮುತ್ಸದ್ಧಿ ಸುರೇಶ್ ಆರ್.ಕಾಂಚನ್, ಮೊಗವೀರ ಮಂಡಳಿಯ ವಿಶ್ವಸ್ಥ ಸದಸ್ಯ ಹರೀಶ್ ಕಾಂಚನ್ ಮತ್ತು ಗಣೇಶ್ ಎಸ್.ಪುತ್ರನ್ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
ಡಾ| ಪಲ್ಲವಿಮಣಿ ಮಾತನಾಡಿ ಸಂಘಟನೆಯಲ್ಲಿ ಭೇಟಿಯದವರನ್ನು ಮರೆಯಬಾರದು. ನಾನು ನನ್ನದು ನನ್ನಿಂದಲೇ ಅದದ್ದು ಎಂದೂ ಯಾವಾಗಲೂ ಮೆರೆಯಬಾರದು. ಸಾಧ್ಯವಾದರೆ ಸಂಸ್ಥೆಯೊಂದಿಗೆ ತನ್ನಿಂದಾದ ಸೇವೆ ಸಲ್ಲಿಸಬೇಕು. ಸಂಸ್ಥೆಯನ್ನು ಮುರಿಯುವ ಕೃತ್ಯ ಮಾಡುವುದು ಪಾಪವೇ ಸರಿ. ಆದುದರಿಂದ ಬುದ್ಧಿಜೀವಿಯಾದ ಮಾನವನು ಎಂದೂ ಮರೆಯಬಾರದು, ಮೆರಯಬಾರದು, ಮುರಿಯಬಾರದು. ಬದಲಾಗಿ ಎಲ್ಲರೊಡನೆ ಜೊತೆಯಾಗಿ ಸೇರಿ ಬೆರೆತು ಬಾಳಬೇಕು. ಅದರಿಂದ ಸಿಗುವ ಆನಂದ ಮತ್ತೊಂದಿಲ್ಲ ಎಂದರು.
ನಮ್ಮ ಸಂಸ್ಕೃತಿಯನ್ನು ಉಳಿಸುವ ಪ್ರಜ್ಞೆಯಿಂದ ನಾವು ಮುಂದೆ ಬರಬೇಕು. ಜಾನಪದವೇ ಸಂಸ್ಕೃತಿಯ ತಾಯಿ ಬೇರು. ಆದರೆ ಈಗಿನ ಜನತೆಯು ಜಾನಪದವನ್ನು ಮರೆಯುತ್ತಿದ್ದಾರೆ. ಎಲ್ಲಾ ಭಾಷೆ ಸಂಸ್ಕೃತಿಗಳಿಗೆ ತಾಯಿ ಬೇರು ಜಾನಪದ ಆಚರಣೆಯಾಗಿವೆÉ. ಅದರ ಅಳಿದು ಹೋಗುವ ಸ್ಥಿತಿ ಬಂದೋಗಿದಾಗ ಮತ್ತೊಮ್ಮೆ ಸಂಸ್ಕೃತಿ ಅಂತ್ಯದಿಂದ ಪ್ರಾರಂಭವಾಗುತ್ತದೆ ಎಂದು ಡಾ| ಸುನೀತಾ ಶೆಟ್ಟಿ ಎಂದು ತಿಳಿಸಿದರು.
ಮೊಗವೀರ ಬ್ಯಾಂಕ್ನ ಕಾರ್ಯಧ್ಯಕ್ಷ ಸದಾನಂದ ಎ.ಕೋಟ್ಯಾನ್, ಗಿನ್ನೇಸ್ ರೆಕಾರ್ಡ್ ನೃತ್ಯ ನಿರ್ದೇಶಕಿ ಡಾ| ವಿೂನಾಕ್ಷಿ ರಾಜು ಶ್ರೀಯಾನ್, ಮಂಡಳಿಯ ಟ್ರಸ್ಟಿ ಜಿ.ಕೆ ರಮೇಶ್, ಸಾಂಸ್ಕೃತಿಕ ಸಮಿತಿ ಸದಸ್ಯರುಗಳಾದ ಸುರೇಶ್ ಶ್ರೀಯಾನ್, ಸುರೇಖಾ ಸುವರ್ಣ, ಪ್ರೀತಿ ಶ್ರೀಯಾನ್, ದೇವ್ರಾಜ್ ಕುಂದರ್, ದಯಾನಂದ ಬಂಗೇರ, ಮತ್ತಿತರರು ಉಪಸ್ಥಿತರಿದ್ದು ಇಂದಿಲ್ಲಿ ಅಗಲಿದ ನಾಡಿನ ಹಿರಿಯ ಕವಿ, ಲೇಖಕ, ಹಿರಿಯ ಲೇಖಕ ಡಾ| ಬಿ.ಎ ಸನದಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಿದುಷಿ ಗುಣವತಿ, ಮಧುರ ವಿ., ರಿಷಿಕಾ ವಿ ಬೆಂಗಳೂರು, ಸತ್ಯವತಿ, ಗಿರೀಶ್ ತಂಡವು ನೃತ್ಯ ವೈಭವ, ಪುಷ್ಕರ ಸೆಂಟರ್ ಫಾರ್ ಪರ್ಫರ್ಮಿಂಗ್ ಆರ್ಟ್ಸ್ ಸಂಸ್ಥೆಯು ಜನಪದ ಸೌರಭ, ಮಿಮಿಕ್ರಿ ಗೋಪಿ ಬೆಂಗಳೂರು ಅವರು ಹಾಸ್ಯ ಸಿಂಚನ, ಜನಮನ ಸಂಸ್ಥೆಯ ಸಂಸ್ಥಾಪಕರು ಗೋ.ನಾ ಸ್ವಾಮಿ ಮತ್ತು ಪುಷ್ಪಾ ಆರಾಧ್ಯ ಬೆಂಗಳೂರು ಬಳಗ ಜಾನಪದ ರಸಮಂಜರಿ ಪ್ರಸ್ತುತ ಪಡಿಸಿತು. ಕುದ್ರೋಳಿ ಗಣೇಶ್ ತಂಡವು ಜಾದೂ ಪ್ರದರ್ಶನ ಪ್ರಸ್ತುತಿ ಪಡಿಸಿತು.
ಜನಮನ ಜಾನಪದ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಗೋ. ನಾ ಸ್ವಾಮಿ, ಸ್ವಾಗತಿಸಿ ಪ್ರಸ್ತಾವನೆಗೈದರು. ಅರವಿಂದ ಕಾಂಚನ್ ಮತ್ತು ಪ್ರತಿಭಾ ಆರ್.ಗೌಡ ಬೆಂಗಳೂರು ಕಾರ್ಯಕ್ರಮ ನಿರೂಪಿಸಿದರು. ಮೊಗವೀರ ಮಾಸಿಕದ ಸಂಪಾದಕ ಅಶೋಕ ಎಸ್.ಸುವರ್ಣ ವಂದನಾರ್ಪಣೆಗೈದರು.