ಅದ್ದೂರಿಯಾಗಿ ಸಂಭ್ರಮಿಸಲ್ಪಟ್ಟ ಶ್ರೀ ರಾಮ ನವಮಿ-ಬ್ರಹ್ಮ ರಥೋತ್ಸವ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಎ.13: ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠದ ಮಹಾರಾಷ್ಟ್ರದ ಅಯೋಧ್ಯನಗರ ಪ್ರಸಿದ್ಧಿಯ ವಡಾಲ ಕತ್ರಾಕ್ ರಸ್ತೆಯ ದ್ವಾರಕನಾಥ್ ಭವನದ ಶ್ರೀರಾಮ ಮಂದಿರದಲ್ಲಿ ಇಂದಿಲ್ಲಿ ಶನಿವಾರ 54ನೇ ವಾರ್ಷಿಕ ಶ್ರೀ ರಾಮ ನವಮಿಯನ್ನು ಸಂಭ್ರಮೋಲ್ಲಾಸದಿಂದ ಆಚರಿಸಲಾಯಿತು.
ಶ್ರೀ ರಾಮೋತ್ಸವವನ್ನು ದಿನಪೂರ್ತಿಯಾಗಿ ಧಾರ್ಮಿಕ ವಿಧಿವತ್ತಾಗಿ ಆಚರಿಸಲ್ಪಟ್ಟಿತು. ನಿರಂತರ ಅಖಂಡ ರಾಮನಾಮ ಸಂಕೀರ್ತನೆಯೊಂದಿಗೆ ಪೂರ್ವ ಸಿದ್ಧತೆ ನಡೆಸಿ ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀರಾಮ ನಮಿತ ರಾಮ ನವಮಿ ಮಹೋತ್ಸವ ಅದ್ದೂರಿಯಾಗಿ ಸಂಭ್ರಮಿಸಿತು.
ವೈಧಿಕರಿಂದ ವಾಲ್ಮೀಕಿ ರಾಮಾಯಣವನ್ನು ಆಖ್ಯಾನಗೊಳಿಸಿ ಲಘು ವಿಷ್ಣು ಹವನ ನೇರವೇರಿಸಿ ವಿವಿಧ ಸೇವೆಗಳು, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಪ್ತಾಹದೊಂದಿಗೆ ಈ ಬಾರಿ ಮಂದಿರದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರ ದೇವರ ವಾರ್ಷಿಕ ಶ್ರೀ ರಾಮೋತ್ಸವಕ್ಕೆ ಪೂರ್ವಸಿದ್ಧತೆ ನಡೆಸಲಾಗಿತ್ತು.
ಶ್ರೀ ರಾಮ ನವಮಿ ಪ್ರಯುಕ್ತ ಇಂದಿಲ್ಲಿ ಮುಂಜಾನೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ನಡೆಸಲ್ಪಟ್ಟವು. ದೇವತಾ ಪ್ರಾರ್ಥನೆ, ರಥ ವಾಸ್ತು ಹವನ, ತುಲಭಾರ ಸೇವೆ, ರಥೋರಾಧನೆ, ಬ್ರಹ್ಮರಥೋತ್ಸವ, ಮಹಾ ಮಂಗಳಾರತಿ, ರಾತ್ರಿಪೂಜೆ, ಸಮಾರಾಧನೆಯೊಂದಿಗೆ ವಾರ್ಷಿಕ ಉತ್ಸವ ಸಮಾಪನ ಕಂಡಿತು. ಶ್ರೀ ರಾಮ ಮಂದಿರ ಸಮಿತಿ ವಡಾಲ ಇದರ ಸಾಂಸ್ಕೃತಿಕ ಹಾಗೂ ಧಾರ್ಮಿಕ ಉಪ ಸಮಿತಿ ಸೇರಿದಂತೆ ಸಾವಿರಾರು ಸಂಖ್ಯೆಯ ರಾಮಭಕ್ತÀರು ಚಿತ್ತೈಸಿ ವಿಶೇಷ ಪೂಜೆಗಳನ್ನು ನೆರವೇರಿಸಿದರು. ಮಹಿಳಾ ಭಕ್ತೆಯರು ಶ್ರೀರಾಮನ ಪ್ರತಿಮೆ ತೊಟ್ಟಿಲ್ಲರಿಸಿ ನಾಮಕರಣೋತ್ಸವ ನೆರವೇರಿಸಿ ಸಾಂಪ್ರದಾಯಿಕವಾಗಿ ರಾಮ ಜನ್ಮೋತ್ಸವ ಸಂಭ್ರಮಿಸಿ ದರು. ಮಂದಿರದ ಪ್ರಧಾನ ಅರ್ಚಕ ಸುಧಾಮ ಅನಂತ ಭಟ್ ಪ್ರಧಾನ ಪೂಜೆ ನೆರವೇರಿಸಿದ್ದು, ಸಹ ಪುರೋಹಿತರು ವಿವಿಧ ಪೂಜೆಗಳನ್ನು ನೆರವೇರಿಸಿ ತೀರ್ಥಪ್ರಸಾದ ವಿತರಿಸಿ ಅನುಗ್ರಹಿಸಿದರು. ಕು| ಸಹನ ನಾಯಕ್ ಮತ್ತು ಕು| ಶ್ರೇಯಾ ನಾಯಕ್ ನೃತ್ಯಸೇವೆಗೈದರು.
ಈ ಸಂದರ್ಭದಲ್ಲಿ ದಕ್ಷಿಣ ಮಧ್ಯ ಮುಂಬಯಿ ಲೋಕಸಭಾ ಸದಸ್ಯ ರಾಹುವ್ ಶೆವಾಲೆ, ಸತೀಶ್ ರಾಮ ನಾಯಕ್, ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಮುಂಬಯಿ ವಡಾಲಾ ಸಮಿತಿ ಕಾರ್ಯಾಧ್ಯಕ್ಷ ಮುಕುಂದ್ ವೈ.ಕಾಮತ್, ಪ್ರಧಾನ ಕಾರ್ಯಾದರ್ಶಿ ಉಲ್ಲಾಸ್ ಡಿ.ಕಾಮತ್, ಕಾರ್ಯದರ್ಶಿ ಅಮೊಲ್ ವಿ.ಪೈ, ಖಜಾಂಜಿಗಳಾದ ಅನಂತ ಪೈ ಮತ್ತು ಪ್ರವೀಣ್ ಕಾಮತ್, ಶ್ರೀರಾಮ ಮಂದಿರದ ಗಣೇಶೋತ್ಸವ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಎನ್.ಎನ್.ಪಾಲ್ ಸೇರಿದಂತೆ ಇತರ ಪದಾಧಿಕಾರಿಗಳು, ಸದಸ್ಯರನೇಕರು ಉಪಸ್ಥಿತರಿದ್ದು ವಿವಿಧ ಸೇವೆಗಳನ್ನು ನೆರವೇರಿಸಿದರು.