ತುಳುನಾಡಿನ ಪ್ರಸಿದ್ದ ಕ್ಷೇತ್ರಗಳಲ್ಲಿ ಒಂದಾದ ಕಟೀಲು ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಇಂದು ಸಂಪ್ಪನ್ನಗೊಂಡಿತು. ಎ.14 ರಂದು ಆರಂಭಗೊಂಡ ಕ್ಷೇತ್ರದ ವಾರ್ಷಿಕ ಜಾತ್ರೆಯು ಸೋಮವಾರ ತನಕ ವಿಜೃಂಭಣೆಯಿಂದ ನಡೆಯಿತು. ಈ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಜನರು ತಾಯಿ ದುರ್ಗಾ ಪರಮೇಶ್ವರಿಯ ದರ್ಶನ ಪಡೆದು ಜನರು ಕೃತಾರ್ಥರಾದರು . ಜಾತ್ರಾ ಮಹೋತ್ಸವದ ಕೊನೆಯ ದಿನ ವಾದ ಆದಿತ್ಯವಾರದಂದು ಸಂಜೆ ದೇವರ ಬಲಿ ಉತ್ಸವ ನಡೆಯಿತು . ದೇವಳದ ವಸಂತ ಮಂಟಪದಲ್ಲಿ ದುರ್ಗಾ ಪರಮೇಶ್ವರಿಗೆ ಪೂಜೆ ನಡೆದು ಬಳಿಕ ಪಲ್ಲಕಿಯಲ್ಲಿ ಎಕ್ಕಾರಿನವರೆಗೆ ನಿನ್ನೆ ಸವಾರಿ ಸಾಗಿತು .
ಸವಾರಿ ಹೋಗಿ ಹಿಂದೆ ಬರುವ ಸಂದರ್ಭದಲ್ಲಿ ಸಿಗುವ ದೇವರ ಸುಮಾರು 18 ಕಟ್ಟೆಗಳಲ್ಲಿ ಕಟ್ಟೆ ಪೂಜೆ ನೆರವೇರಿಸಿ ಬಳಿಕ ಶ್ರೀದುರ್ಗಾ ಪರಮೇಶ್ವರಿ ಕಟೀಲಿಗೆ ಆಗಮಿಸಿತು.ಈ ಸಂದರ್ಭದಲ್ಲಿ ಶಿಬರೂರು ಕೊಡಮಣಿತ್ತಾಯ ದೈವದ ಭೇಟಿ ಜರುಗಿತು .
ನಂತರ ಕಟೀಲಿನಲ್ಲಿ ಶ್ರೀದೇವಿ ರಥಾರೂಢಳಾಗಿ ಬ್ರಹ್ಮರಥೋತ್ಸವ ಜರುಗಿತು ನಂತರ ದೇವರ ಜಲಕವಾಗುತ್ತದೆ. ನಂತರ ನಡೆಯುವುವ ಸೇವೆಯೇ ಅತ್ಯಂತ ಆಕರ್ಷಕ ಮೈ ಜುಮ್ಮೆನಿಸುವ ತೂಟೆದಾರ ಸೇವೆಯಾಗಿದೆ.
ಎರಡು ಮಾಗಣೆಗೆ ಸೇರಿದ ಅತ್ತೂರು ಮತ್ತು ಕೊಡತ್ತೂರು ಗ್ರಾಮಸ್ಥರ ನಡುವೆ ನಡೆಯುತ್ತದೆ.ತೂಟೆದಾರ ಸೇವೆ ನಡೆಯುವ ಅಗ್ನಿ ಯುದ್ಧ ಸೇವೆ ನೋಡಲು ಸಾವಿರಾರು ಜನರು ಸೇರುತ್ತಾರೆ.