ಕ್ರೈಸ್ತ ಜನರು ಶಾಂತಿ ಪ್ರಿಯರು : ಶಾಸಕ ಹರೀಶ್ ಪೂಂಜ
ಬೆಳ್ತಂಗಡಿ, ಮೇ.19: ಬೆಳ್ತಂಗಡಿಯ ಗರ್ಡಾಡಿಯಲ್ಲಿ ಹೊಸದಾಗಿ ನಿರ್ಮಾಣಗೊಂಡ ಸೈಂಟ್ ಸೆಬಸ್ಟಿನ್ ಚರ್ಚ್ ಉದ್ಘಾಟನಾ ಸಮಾರಂಭವು ಕಳೆದ ಶನಿವಾರ (ಮೇ.18) ಬೃಹತ್ ಭಕ್ತ ಸಮೂಹದ ಉಪಸ್ಥಿತಿಯಲ್ಲಿ ಜರುಗಿತು. ಮಂಗಳೂರು ಬಿಷಪ್ ರೈ| ರೆ| ಡಾ| ಪೀಟರ್ ಪೌಲ್ ಸಲ್ಡಾನ್ಹಾ ನೂತನ ಚರ್ಚ್ನ್ನು ಆಶೀರ್ವಚಿಸಿ ಉದ್ಘಾಟಿಸಿ ದಿವ್ಯಪೂಜೆ ನೆರವೇರಿಸಿ ಸಮಾರಂಭ ನಡೆಸಿದರು.
ಪ್ರಾರ್ಥನೆ ಜೊತೆಗೆ ಹೊಸ ಬೆಲ್ನ್ನು ರಿಂಗ್ ಮಾಡಿ, ಬಿಷಪ್ ರಿಬ್ಬನ್ ಕತ್ತರಿಸಿದ ಬಳಿಕ ಚರ್ಚನ್ನು ಭಕ್ತರಿಗಾಗಿ ತೆರೆಯಲಾಯಿತು. ಬಳಿಕ ನೆರೆದ ಸಮಸ್ತ ಧರ್ಮಗುರುಗಳಿಗೆ ಸಾಮೂಹಿಕ ಅಭಿನಂದನೆ ಸಮರ್ಪಣಾ ಸಮಾರಂಭವನ್ನು ನೆರವೇರಿಸಲಾಯಿತು. ಸಮೂಹ ಪ್ರಾರ್ಥನೆ ಬಳಿಕ ಚರ್ಚ್ನ ಪಾಲನಾ ಮಂಡಳಿ ಗೌರವಾರ್ಪಣಾ ಕಾರ್ಯಕ್ರಮ ನಡೆಸಿತು. ಕಾಪುಚಿನ್ನ ಹೋಲಿ ಟ್ರಿನಿಟಿ ಪೆÇ್ರವಿನ್ಸಿಯಲ್ ರೆ| ಫಾ| ಆಲ್ವಿನ್ ಡಯಾಸ್ ಮುಖ್ಯ ಅತಿಥಿüಯಾಗಿದ್ದು, ಚರ್ಚ್ನ ಪೂರ್ವ ಧರ್ಮಗುರು, ಸಹಾಯಕ ಧರ್ಮಗುರು, ಆಲ್ವಿನ್ ಸಿಕ್ವೇರಾ (ಓರ್ಲೆಮ್-ಮಲಾಡ್, ಮುಂಬಯಿ) ಸೇರಿದಂತೆ ಇತರ ದಾನಿಗಳನ್ನು, ಪಾಲನಾ ಮಂಡಳಿಯ ಮುಖ್ಯಸ್ಥರನ್ನು ಸಮಾರಂಭದಲ್ಲಿ ಬಿಷಪ್ ಡಾ| ಪೀಟರ್ ಪೌಲ್ ಗೌರವಿಸಿದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉಪಸ್ಥಿತರಿದ್ದು`ಚರ್ಚ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ದೊರಕಿದ್ದು ಅತೀವ ಸಂತಸ ತಂದಿದೆ, ಬೆಳ್ತಂಗಡಿಯ ಕ್ರಿಸ್ತ ಭಾಂಧವರನ್ನು ನಾನು ಚೆನ್ನಾಗಿ ತಿಳಿದಿದ್ದೇನೆ. ನನ್ನ ಶೈಕ್ಷಣಿಕ ಮತ್ತು ರಾಜಕೀಯ ಜೀವನದಲ್ಲಿ ಹಲವು ಕ್ರಿಸ್ತ ಸಮುದಾಯದ ಸಮಾರಂಭಗಳ ವೇದಿಕೆ ಏರುವ ಅವಕಾಶ ನನಗೆ ದೊರೆತಿದೆ. ಕ್ರಿಸ್ತ ಸಮುದಾಯದ ಜನರು ಶಾಂತಿ ಪ್ರಿಯರು, ಸಮಾಜಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ನಮ್ಮ ಬೆಳ್ತಂಗಡಿ ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕ್ರಿಸ್ತ ಸಮುದಾಯದ ಕೊಡುಗೆ ಅಪಾರ. ಬೆಳ್ತಂಗಡಿಯಲ್ಲಿ ಹೊಸದಾಗಿ ಅಸ್ಥಿತ್ವಕ್ಕೆ ಬಂದಿರುವ ಚರ್ಚ್ ಸಾಮರಸ್ಯದ ಕೇಂದ್ರವಾಗುವುದರಲ್ಲಿ ಸಂಶಯವಿಲ್ಲ. ದೇವರ ಆಶೀರ್ವಾದಕ್ಕಾಗಿ ಬರುವ ಭಕ್ತರಿಗೆ ಇದು ಆರಾಧನಾ ಕೇಂದ್ರವಾಗಿರುತ್ತದೆ. ಇಡೀ ಕ್ರಿಸ್ತ ಸಮುದಾಯ ಬಾಂಧವರಿಗೆ ಶುಭಹಾರೈಕೆಗಳು ಎಂದರು.
ಬಿಷಪ್ ಪೀಟರ್ ಪೌಲ್ ಅನುಗ್ರಹಿಸಿ ಸಮುದಾಯ ಸಾಮರಸ್ಯದ ಮಹತ್ವವನ್ನು ವಿವರಿಸುತ್ತಾ ವಿವಿಧ ಧರ್ಮದ ಜನರು ಚರ್ಚಿನ ಸಂಪೂರ್ಣ ನಿರ್ಮಾಣ ಕಾರ್ಯಕ್ಕೆ ಒಟ್ಟಾಗಿ ಸಹಕರಿಸಿದರು. ಇದು ಸಮಾಜದ ಏಕತೆಯನ್ನು ಪ್ರತಿಬಿಂಬಿಸುತ್ತದೆ. ಈ ರೀತಿಯ ಬಾಂಧವ್ಯವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ಸಮಾಜದ ಶಾಂತಿ ಮತ್ತು ಶ್ರೇಷ್ಟತೆಗೆ ಇದು ಅಗತ್ಯ. ಈ ಹೊಸ ಚರ್ಚಿನ ಮೂಲಕ ಸಾಮರಸ್ಯವನ್ನು ವೃದ್ದಿಸೋಣ ಎಂದರು.
ಬೆಳ್ತಂಗಡಿ ವಲಯ ಮುಖ್ಯ ಧರ್ಮಗುರು ರೆ| ಫಾ| ಬೊನವೆಂಚರ್ ನಝರತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮತ್ತು ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ, ಮಡಂತ್ಯಾರು ಚರ್ಚ್ನ ಮುಖ್ಯ ಧರ್ಮಗುರು ಮುಖ್ಯ ಧರ್ಮಗುರು ರೆ| ಫಾ| ಬಾಸಿಲ್ ವಾಸ್, ರೆ| ಫಾ| ಮೆಲ್ವಿನ್ ಡಿಸೋಜಾ, ರೆ| ಫಾ| ಅನಿಲ್ ಸಿಲ್ವಾನೊ ಫೆರ್ನಾಂಡಿಸ್, ಜಿಲ್ಲಾ ಪಂಚಾಯತ್ ಸದಸ್ಯ ಶೇಖರ್ ಕುಕ್ಕೇಡಿ, ಪದಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸಂತೋಷ್ ಕುಮಾರ್ ಜೈನ್ ಉಪಸ್ಥಿತರಿದ್ದು ಶುಭಾರೈಸಿದರು.
ಚರ್ಚ್ನ ಮುಖ್ಯ ಧರ್ಮಗುರು ಮಾರ್ಕ್ ಸಲ್ಡಾನ್ಹಾ ಸ್ವಾಗತಿಸಿದರು. ಚರ್ಚ್ನ ಪಾಲನಾ ಮಂಡಳಿ ಉಪಾಧ್ಯಕ್ಷ ಪ್ರವೀಣ್ ಮೊನಿಸ್ ಪ್ರಾಸ್ತಾವಿಕ ಭಾಷಣ ಮಾಡಿದರು. ಕಾರ್ಯದರ್ಶಿ ಡೆನಿಸ್ ಅಮನ್ ಫೆರ್ನಾಂಡಿಸ್ ವಂದಿಸಿದರು.