ದಾನಿಗಳ ನೆರವಿನಿಂದ ನಿರ್ಮಿಸಿದ 7.50ಲಕ್ಷ ರೂ.ವೆಚ್ಚದ ನಮ್ಮಮನೆ ಹಸ್ತಾಂತರ
ಶಿರ್ವ: ಸಮಾಜದಲ್ಲಿ ಶ್ರೀಮಂತವರ್ಗದವರು ಅದ್ದೂರಿಯಗಿ ಬ್ರಹ್ಮಕಲಶೋತ್ಸವ, ಮದುವೆ, ಮೆಹೆಂದಿ ಕಾರ್ಯಕ್ರಮಗಳನ್ನು ನಡೆಸಿ ಹಣವನ್ನು ಪೋಲು ಮಾಡುವುದಕ್ಕಿಂತ ಅಗತ್ಯವುಳ್ಳ ಕಡುಬಡವರಿಗೆ ಮನೆನಿರ್ಮಾಣ ಹಾಗೂ ಅರ್ಹ ಶಿಕ್ಷಣಾಕಾಂಕ್ಷಿಗಳಿಗೆ ಶಿಕ್ಷಣ ನೀಡಿದಲ್ಲಿ ಹೇರಳ ಪುಣ್ಯ ಸಂಪಾದನೆ ಮಾಡಬಹುದು ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ ತಿಳಿಸಿದ್ದಾರೆ.
ಕಟಪಾಡಿ ಕೋಟೆ ಗ್ರಾಮದ ದೇವರ ತೋಟದಲ್ಲಿ ಕಳೆದ 6 ದಶಕಗಳಿಂದ ವಿದ್ಯುತ್ ಸೌಕರ್ಯವಿಲ್ಲದ ಹಳೆಯ ಪ್ಲಾಸ್ಟಿಕ್ ಹೊದಿಕೆಯ ಮುರುಕಲು ಮನೆಯಲ್ಲಿ ವಾಸಿಸುತ್ತಿದ್ದ ಬಡ ರಾಜೀವಿ ಶೆಡ್ತಿ ಕುಟುಂಬಕ್ಕೆ ದಾನಿಗಳ ನೆರವಿನೊಂದಿಗೆ 7.50ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ 700 ಚದರಡಿಯ ನೂತನ ಆರ್ಸಿಸಿ ಮನೆ ನಮ್ಮ ಮನೆಯ ಗೃಹಪ್ರವೇಶ ಮತ್ತು ಮನೆಯ ಕೀ ಹಸ್ತಾಂತರ ಕಾರ್ಯಕ್ರಮ ನೆರವೇರಿಸಿ ಬುಧವಾರ ಆಶೀರ್ವಚನ ನೀಡಿದರು.
ಆಧುನಿಕ ಸೌಕರ್ಯಗಳೊಂದಿಗೆ ಬಡ ಕುಟುಂಬಕ್ಕೆ ಎರಡು ಬೆಡ್ ರೂಮ್ ಸಹಿತ ಸುಸಜ್ಜಿತ ಮಾಡರ್ನ್ ಶೌಚಾಲಯ, ಹಾಲ್, ಮಾಡರ್ನ್ ಕಿಚನ್ ಸೇರಿದಂತೆ ಸಂಪೂರ್ಣ ಟೈಲ್ಸ್ ನೆಲಹಾಸಿನ ಮನೆಯನ್ನು ಯಾವುದೇ ಪ್ರಚಾರವಿಲ್ಲದೆ ಬಡಕುಟುಂಬವೊಂದಕ್ಕೆ ಚೊಕ್ಕದಾದ ಸುಂದರ ಮನೆ ನಿರ್ಮಾಣದ ಪರಿಕಲ್ಪನೆಯನ್ನು ವಿವಿಧ ದಾನಿಗಳ ನೆರವಿನಿಂದ ಸಾಕಾರಗೊಳಿಸಿರುವುದು ಮಾದರಿ ಕಾರ್ಯಕ್ರಮವಾಗಿದೆ ಎಂದರು.
ಸಮಾಜ ಸೇವಕಿ ವಿದ್ಯಾಲತಾ ಯು. ಶೆಟ್ಟಿ ಬನ್ನಂಜೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಕೋಟೆ ಸಮೀಪದ ಬಂಟರ ಬಡಕುಟುಂಬದ ಪರಿಸ್ಥಿತಿಯನ್ನು ಪತ್ರಿಕೆಗಳಲ್ಲಿ ಓದಿದ ಬಳಿಕ ಈ ಕುಟುಂಬಕ್ಕೆ ಸುಸಜ್ಜಿತ ಮನೆ ನಿರ್ಮಿಸುವ ಕನಸು ಬರೇ ಮೂರೇ ತಿಂಗಳಲ್ಲಿ ದಾನಿಗಳ ನೆರವಿನಿಂದ ನನಸಾಗಿದೆ ಎಂದರು. ಈ ಸಂದರ್ಭ ಮನೆ ನಿರ್ಮಾಣಕ್ಕೆ ಸಹಕರಿಸಿರುವ ದಾನಿಗಳನ್ನು ಹಾಗೂ ಸಕಾಲದಲ್ಲಿ ಮನೆನಿರ್ಮಿಸಿಕೊಟ್ಟಿರುವ ಮೇಸ್ತ್ರಿಯನ್ನು ಸನ್ಮಾನಿಸಲಾಯಿತು. ಮನೆ ನಿರ್ಮಾಣದ ರುವಾರಿ ಕಟಪಾಡಿಯ ವೈದ್ಯ ಡಾ.ಯು.ಕೆ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಬಡವರಿಗೆ ಮನೆ ನಿರ್ಮಿಸಿಕೊಡುವುದು ದೇವರ ಕೆಲಸ ಹಾಗಾಗಿ ನಾವು ಕೇಳದೆ ಅನೇಕರು ಸ್ವ ಇಚ್ಚೆಯಿಂದ ಆರ್ಥಿಕ ನೆರವು ನೀಡಿ ಸಹರಿಸಿದ್ದರಿಂದ ಸುಸಜ್ಜಿತವಾದ ಮಾದರಿ ಮನೆಯನ್ನು ನಿರ್ಮಿಸಿಕೊಡಲು ಸಾಧ್ಯವಾಯಿತು ಎಂದರು.
ಸಮಾಜ ಸೇವಕಿ ವೈಶಾಲಿ ಶೆಟ್ಟಿ ಉಡುಪಿ, ಅಶೋಕ್ ಶೆಟ್ಟಿ ಮೂಡಬೆಟ್ಟುಗುತ್ತು , ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಡಾ.ಎ. ರವೀಂದ್ರನಾಥ ಶೆಟ್ಟಿ, ಸಮಾಜಸೇವಾರತ್ನ ಕಾಪು ಲೀಲಾಧರ್ ಶೆಟ್ಟಿ, ದಿನಕರ್ ಶೆಟ್ಟಿ ಕುರ್ಕಾಲು, ಹರೀಶ್ಚಂದ್ರ ಅಮೀನ್, ಕಾಪು ಕಸಾಪ ಅಧ್ಯಕ್ಷ ಪುಂಡಲೀಕ ಮರಾಠೆ, ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ ಉಪಸ್ಥಿತರಿದ್ದರು. ಶಿರ್ವ ರೋಟರಿ ಅಧ್ಯಕ್ಷ ದಯಾನಂದ ಕೆ.ಶೆಟ್ಟಿ ದೆಂದೂರು ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.