ಪುತ್ತೂರು ಅಂಚೆ ವಿಭಾಗದ ಆಶ್ರಯದಲ್ಲಿ ಜುಲೈ 09, 2019 ರಂದು ಒಂದು ದಿನದ ಅಂಚೆಚೀಟಿ ಪ್ರದರ್ಶನ ಹಾಗೂ ಕಾರ್ಯಾಗಾರ
ಪುತ್ತೂರಿನ ಸಂತ ವಿಕ್ಟರ್ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆಯಿತು. ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ, ಫಿಲಾಟೆಲಿಸ್ಟ್, ಲೇಖಕ ಮೂಡುಬಿದಿರೆಯ ರಾಯೀ ರಾಜಕುಮಾರರು ಕಾರ್ಯಾಗಾರವನ್ನು ನಡೆಸಿಕೊಟ್ಟು ಪ್ರದರ್ಶನವನ್ನು ಏರ್ಪಡಿಸಿದ್ದರು. ಅವರು ತಮ್ಮ ಕಾರ್ಯಾಗಾರದಲ್ಲಿ ಅಂಚೆಚೀಟಿ ಸಂಗ್ರಹಣೆಯ ಕ್ರಮ, ಅದರಲ್ಲಿರುವ ವಿವಿಧತೆಗಳು, ಪ್ರದರ್ಶನಕ್ಕೆ ಅಣಿಗೊಳಿಸುವಿಕೆ, ಪ್ರತೀ ಸಂದರ್ಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಇತ್ಯಾದಿಗಳ ಬಗೆಗೆ ಮಾಹಿತಿ ಇತ್ತರು.
ವಿದ್ಯಾರ್ಥಿಗಳ ಹಲವಾರು ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ನೀಡಿದರು. ಇದೇ ಸಂದರ್ಭದಲ್ಲಿ ನಡೆದ ಪ್ರದರ್ಶನದಲ್ಲಿ ಸ್ವಾತಂತ್ಯಾ ನಂತರದ ಅಂಚೆಚೀಟಿಗಳು, ಹೂವು, ಗುಲಾಬಿ, ಪ್ರಕೃತಿ, ಮಿನಿಯೇಚರ್ ಇತ್ಯಾದಿ ವಿಷಯದ ಅಂಚೆಚೀಟಿಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಹಿರಿಯ ಅಂಚೆ ಅಧೀಕ್ಷಕರಾದ ಎಂ. ಜಗದೀಶ ಪೈ ಯವರು ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಉಪ ಅಂಚೆ ಅಧೀಕ್ಷಕ ಲೋಕನಾಥ್ ಎಂ. ರವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಉಪ ಅಂಚೆ ಅಧೀಕ್ಷಕ ಶಂಕರ್ ಬಿ. ಹಾಗೂ ಶ್ರೀಮತಿ ಸುಮಾ ಮಯ್ಯ ರವರು ಪ್ರದರ್ಶನವನ್ನು ಆಯೋಜಿಸಿದ್ದರು. ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ರೋಸ್ಲಿನ್ ಲೋಬೋರವರು ಹಾಜರಿದ್ದರು. ಶಾಲಾ ಶಿಕ್ಷಕ ರೊನಾಲ್ಡ್ ರವರು ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.