ಉಜಿರೆ: ತುಳುನಾಡಿನ ನಂಬಿಕೆ-ನಡವಳಿಕೆಯನ್ನು ಪ್ರತಿಬಿಂಬಿಸುವ “ಆಟಿಡೊಂಜಿ” ವಿಶೇಷ ಕಾರ್ಯಕ್ರಮವನ್ನು ಧರ್ಮಸ್ಥಳದಲ್ಲಿ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾಯಿತು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಅವರು ಚೆನ್ನೆ ಮಣೆ ಆಟ ಆಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ನಾಟಕ ಪ್ರದರ್ಶನ, ವಸ್ತು ಪ್ರದರ್ಶನ, ಆಟಿ ತಿಂಗಳ ಮಹತ್ವವನ್ನು ಪ್ರತಿ ಬಿಂಬಿಸುವ ಭಿತ್ತಿ ಪತ್ರ ಪ್ರದರ್ಶನ, ತುಳು ಹಾಡುಗಳು, ಶೋಭಾನೆ, ಪಾಡ್ದನ, ಗ್ರಾಮೀಣ ಆಟಗಳಾದ ಕಲ್ಲಾಟ, ಜಿಬಿಲಿ, ಚೆನ್ನೆ ಮಣೆ, ಗೋಲಿ, ಕವಡೆ ಆಟಗಳನ್ನು ಆಡಿ ಮಕ್ಕಳು ಆನಂದಿಸಿದರು.
ಮಾವಿನ ಎಲೆ, ಅಡಿಕೆ ಹಾಳೆ ಮತ್ತು ತೆಂಗಿನ ಗರಿಗಳ ಹೂಗುಚ್ಛ ತಯಾರಿಸಿ, ತಳಿರು-ತೋರಣಗಳಿಂದ ಶಾಲಾ ಮುಂಭಾಗ ಮತ್ತು ವೇದಿಕೆಯನ್ನು ಅಲಂಕರಿಸಲಾಗಿತ್ತು.
ಗ್ರಾಮೀಣ ಸಾಂಪ್ರದಾಯಿಕ ಉಡುಗೆ-ತೊಡುಗೆಯೊಂದಿಗೆ ವಿದ್ಯಾರ್ಥಿಗಳು ಶಾಲೆಗೆ ಬಂದರು.
ಕೋಳಿ ಅಂಕ, ಕಂಬಳ, ಭೂತದ ಕೋಲ, ಆಟಿ ಕಳೆಂಜ, ಗದ್ದೆ ಬೇಸಾಯದ ದೃಶ್ಯಾವಳಿಗಳನ್ನು ಸಿ.ಡಿ. ಮೂಲಕ ಪ್ರದರ್ಶಿಸಲಾಯಿತು.
ಡಿ. ಹರ್ಷೇಂದ್ರ ಕುಮಾರ್, ಶಾಲಾ ಸಂಚಾಲಕ ಅನಂತಪದ್ಮನಾಭ ಭಟ್ ಮೊದಲಾದವರು ಮಕ್ಕಳ ಸೃಜನಾತ್ಮಕ ಚಟುವಟಿಕೆಗಳನ್ನು ವೀಕ್ಷಿಸಿ ಅಭಿನಂದಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳಾ, ಎಂ.ವಿ. ಮತ್ತು ಶಿಕ್ಷಕ ವೃಂದದವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಅತ್ಯಂತ ಅಚ್ಚುಕಟ್ಟಾಗಿ ಪ್ರದರ್ಶನಗೊಂಡಿತು.
ಕುಷ್ಠ ರೋಗಿಗಳಿಗೆ ಉಚಿತ ಸೇವೆ
ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ಮದ್ದಡ್ಕದಲ್ಲಿ ಧರ್ಮಸ್ಥಳದ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ರೈಟ್ ಇಂಡಿಯಾ ಸಂಸ್ಥೆಯಲ್ಲಿರುವ ಕುಷ್ಠ ರೋಗಿಗಳ ಪುನರ್ವಸತಿ ಕೇಂದ್ರದಲ್ಲಿ ಕುಷ್ಠ ರೋಗಿಗಳಿಗೆ ಉಚಿತವಾಗಿ ವಾಸ್ತವ್ಯ, ಆಹಾರ ಮತ್ತು ಔಷಧಿ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಗಿ ಸಂಪರ್ಕಿಸಿ ಕೋಶಾಧಿಕಾರಿ, ಬ್ರೈಟ್ ಇಂಡಿಯಾ ಮದ್ದಡ್ಕ, ಅಂಚೆ: ಕುವೆಟ್ಟು, ಬೆಳ್ತಂಗಡಿ ತಾಲ್ಲೂಕು. ಮೊಬೈಲ್: 9448850626