(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)
ಮುಂಬಯಿ, ಅ.05: ಮುಂಬಯಿ ವಡಲಾ ಅಲ್ಲಿನ ಶ್ರೀ ರಾಮಮಂದಿರ ದ್ವಾರಕಾನಾಥ ಭವನದ ನಾಗ ಮಂಡಪದಲ್ಲಿ ಕಳೆದ ಅನೇಕ ದಶಕಗಳಿಂದ ಆಚರಿಸಿ ಬಂದಿರುವಂತೆ ಈ ಬಾರಿಯೂ ವಾರ್ಷಿಕ ನಾಗರ ಪಂಚಮಿಯನ್ನು ಇಂದಿಲ್ಲಿ ಸೋಮವಾರ ಶ್ರಾವಣ ಶುದ್ಧ ಪಂಚಮಿ ಶುಭಾವಸರÀದಲ್ಲಿ ಸಂಭ್ರಮ ಸಡಗರದಿಂದ ಆಚರಿಸಲ್ಪಟ್ಟಿತು.
ಸಂಪ್ರದಾಯಿಕ ಮತ್ತು ಧಾರ್ಮಿಕ ಸೇವೆಗಳಿಂದ ವೈವಿಧ್ಯಮಯವಾಗಿ ನಡೆಸಲಾದ ನಾಗರಪಂಚಮಿ ಉತ್ಸವ ನಿಮಿತ್ತ ಬೆಳಿಗ್ಗೆಯಿಂದ ಶ್ರೀ ನಾಗರದೇವರ ಸನ್ನಿಧಿಯಲ್ಲಿ ಪಂಚಾಮೃತ ಅಭಿಷೇಕ, ಸಹಸ್ರ ನಾರಿಕೇಳಾಭಿಷೇಕ, ನವಕಲಶ ಮಹಾಭಿಷೇಕ, ನಾಗದೇವರ ಮೂರ್ತಿಬಲಿ ಇತ್ಯಾದಿ ಪೂಜೆಗಳು ನೆರವೇರಿಸಲ್ಪಟ್ಟಿತು. ವೇದಮೂರ್ತಿ ಗೋವಿಂದ ಆಚಾರ್ಯ ಮತ್ತು ವೇದಮೂರ್ತಿ ಅನಂತ ಭಟ್ ವಿವಿಧ ವಿಶೇಷ ಪೂಜೆಗಳನ್ನು ನೆರವೇರಿಸಿ ತೀರ್ಥಪ್ರಸಾದ ವಿತರಿಸಿ ಹರಸಿದರು.
ಈ ಸಂದರ್ಭದಲ್ಲಿ ಶ್ರೀ ರಾಮಮಂದಿರ ಸಮಿತಿಯ ಕಾರ್ಯಾಧ್ಯಕ್ಷ ಮುಕುಂದ್ ವೈ.ಕಾಮತ್, ಗೌ| ಕಾರ್ಯದರ್ಶಿ ಉಲ್ಲಾಸ್ ಡಿ.ಕಾಮತ್, ಕಾರ್ಯದರ್ಶಿ ಅಮೋಲ್ ವಿ.ಪೈ ಮತ್ತಿತರ ಪದಾಧಿಕಾರಿಗಳು, ಬಾಬು ಆರ್.ಕಾಮತ್, ಉಮೇಶ್ ಪೈ, ಅರುಣಾ ನಾಯಕ್ ಸೇರಿದಂತೆ ಮಹಿಳಾ ಮತ್ತು ಯುವ ಸೇವಾಕರ್ತರು, ಸಾವಿರಾರು ಸಂಖ್ಯೆಯ ಭಕ್ತರು ಉಪಸ್ಥಿತದ್ದು ನಾಗದೇವರನ್ನು ಆರಾಧಿಸಿದರು.