ಸದಾ ಓದು, ಆಟೋಟ ಅನ್ನುತ್ತಾ ಹಿರಿಯರಷ್ಟೇ ಬ್ಯುಸಿ ಇರುವ ಮಂಗಳೂರಿನ ವಿದ್ಯಾರ್ಥಿಗಳು ಅದ್ಭುತವಾದ "ಆಟಿಡೊಂಜಿ ಕೂಟ" ಕಾರ್ಯಕ್ರಮ ಆಯೋಜಿಸಿದ್ದರು. 23 ಬಗೆಯ ತುಳುನಾಡಿನ ಆಹಾರ ವೈವಿಧ್ಯಗಳು, ತುಳುನಾಡಿನ ಹಳೆಯ ವಸ್ತುಗಳ ಪ್ರದರ್ಶನ, ಬೂತದ ಅಣಿ, ಹುಲಿ ವೇಷ, ಬಂದ ಅತಿಥಿಗಳಿಗೆ ಸ್ವಾಗತ, ಟೇಬಲ್ಗೆ ಆಹಾರ ಆತಿಥ್ಯ, ಹೀಗೆ ತುಳು ಸಂಸ್ಕøತಿಯನ್ನು ಬಿಂಬಿಸುವ ಆಟಿದ ಕೂಟಕ್ಕೆ ಮಂಗಳೂರಿನ ನಿಟ್ಟೆ ವಿದ್ಯಾಸಂಸ್ಥೆಯ ಸರೋಶ್ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಅಡ್ಮಿನಿಸ್ಟ್ರೇಷನ್ ಕಾಲೇಜಿನಲ್ಲಿ ಸ್ಟಾರ್ ಹೋಟೆಲ್ ಟಚ್ ನೀಡಲಾಗಿತ್ತು. ಕಾಲೇಜ್ ವಿದ್ಯಾರ್ಥಿಸಂಘದ ಅಧ್ಯಕ್ಷ ನಿತಿನ್ ಕಾಮತ್, ವಿಧ್ಯಾರ್ಥಿ ಸಂಯೋಜಕ ಪುನೀತ್ ಮತ್ತು ಪ್ರಾದ್ಯಾಪಕರಾದ ಜೋಯೆಲ್ ಲೋಬೊ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಸಂಯೋಜನೆಗೊಂಡಿತ್ತು.
ತುಳು ಸಂಸ್ಕøತಿಯ ಅನಾವರಣ
ಬರುವ ಅತಿಥಿಗಳನ್ನು ಬೆಲ್ಲ-ನೀರು ಕೊಟ್ಟು ತುಳು ಸಂಸ್ಕøತಿಯ ಮೂಲಕ ಸ್ವಾಗತಿಸಲಾಯಿತು. ಪಿಂಗಾರಿ ಅನಾವರಣದ ಮೂಲಕ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಆಟಿ ಕಲೆಂಜ ಬರುವಾಗ ಮನೆಯ ಅನಿಷ್ಠ ಹೋಗಲೆಂದು ತಡಪೆಯಲ್ಲಿ ಅಕ್ಕಿ, ಬತ್ತ ಕೊಡುವ ಸಂಪ್ರದಾಯವೂ ನಡೆಯಿತು. ಒಟ್ಟಿನಲ್ಲಿ ಇಡೀ ಕಾರ್ಯಕ್ರಮದಲ್ಲಿ ತುಳುನಾಡಿನ ಸಂಸ್ಕøತಿ ಅನಾವರಣಗೊಳ್ಳುತ್ತಿತ್ತು.
ಪಾನಕ, ಅರಶಿನ ಎಳೆಯ ಗಟ್ಟಿ, ಹಲಸಿನ ಗಟ್ಟಿ, ಕೊಟ್ಟಿಗೆ-ಹೆಸರುಬೇಳೆ ಗಸಿ, ತಿಮರೆ ಚಟ್ನಿ (ಒಂದೆಲಗ ಚಟ್ನಿ), ಎಟ್ಟಿ ಚಟ್ನಿ, ಉಪ್ಪಡಚ್ಚಿಲ್, ಕೆಸು-ಅಂಬಡೆ ಚಟ್ನಿ, ಪತ್ರೊಡೆ, ಪುನರ್ಪುಳಿ ಚಟ್ನಿ ಹೀಗೆ ತುಳುನಾಡಿನ ಆಹಾರ ಪದ್ಧತಿಯಲ್ಲಿ ನೂರಾರು ವರ್ಷಗಳಿಂದ ಬಂದಂತಹ 23 ಬಗೆಯ ಆಹಾರಗಳನ್ನು ವಿದ್ಯಾರ್ಥಿಗಳೇ ತಯಾರಿಸಿದ್ದರು.
ತುಳು ಪರಂಪರೆಯ ಹಳೆಯ ವಸ್ತುಗಳಾದ ಭತ್ತದ ಮುಡಿ, ಗಂಟೆ, ನೊಗ, ಮಣ್ಣಿನ ಮೂರ್ತಿಗಳು, ಮಣ್ಣಿನ ಬಿಸಳೆ, ಮುಟ್ಟಲೆ, ಕೊರಂಬು ಹೀಗೆ ನೂರಾರು ವಸ್ತುಗಳನ್ನು ವಿದ್ಯಾರ್ಥಿಗಳೇ ಬೇರೆ ಬೇರೆ ಕಡೆಗಳಿಂದ ಸಂಗ್ರಹಿಸಿ ಪ್ರದರ್ಶನಕ್ಕೆ ಇಟ್ಟಿದ್ದರು.
ಪ್ರವೇಶವಾಗುವಾಗಲೇ ತಟ್ಟೆಯಿಂದ ಹಣೆದ ಬ್ಯಾನರ್ ರೀತಿಯಲ್ಲಿ ಆಟಿ ದಿನದ ತಿನಿಸುಗಳ ಮೆನುವನ್ನು ದೊಡ್ಡದಾಗಿ ಕೈಯಲ್ಲಿ ಬರೆದು ಹಾಕಿದ್ದರು. ಬೂತದ ಅಣಿ, ತೆಂಗಿನಗರಿಗಳಿಂದ ವಿದ್ಯಾರ್ಥಿಗಳೇ ಮಾಡಿದ ಸುಂದರ ವೇದಿಕೆ ಎಲ್ಲರ ಗಮನ ಸೆಳೆಯುತ್ತಿತ್ತು.
ಅತಿಥಿಗಳಿಗೆಲ್ಲ ಟೀಬಲ್ ವ್ಯವಸ್ಥೆ ಮಾಡಿ ಪ್ರತಿ ಟೇಬಲ್ನಲ್ಲೂ ಕರಕುಶಲ ವಸ್ತುಗಳಲ್ಲಿ ಮೆನುವನ್ನು ಇಟ್ಟು, ಟೇಬಲಿಗೊಬ್ಬರಂತೆ "ಆಟಿದ ಕೂಟ"ಕ್ಕೆ ಸ್ಟಾರ್ ಟಚ್ ಕೊಟ್ಟು ಮಂಗಳೂರಿನ ವಿದ್ಯಾರ್ಥಿಗಳು ಅತಿಥಿ ಸತ್ಕಾರ ವ್ಯವಸ್ಥೆ ಮಾಡಿದ್ದರು. ಒಟ್ಟಿನಲ್ಲಿ ಸ್ಟಾರ್ ಹೋಟೆಲ್ ರೀತಿಯಲ್ಲಿ ವಿದ್ಯಾರ್ಥಿಗಳು ಅತಿಥಿಗಳನ್ನು ಉಪಚರಿಸಿದರು.
ವಿದ್ಯಾರ್ಥಿಗಳು ಪಂಚೆ-ಬಿಳಿ ವಸ್ತ್ರದಲ್ಲಿದ್ದರೆ, ವಿದ್ಯಾರ್ಥಿನಿಯರು ಸೀರೆಯಲ್ಲಿ ಕಂಗೊಳಿಸುತ್ತಿದ್ದರು.
ವಿದ್ಯಾರ್ಥಿಗಳಿಗೆ ತುಳುನಾಡಿನ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ವಿಶೇಷ ಅತಿಥಿ ಕದ್ರಿ ನವನೀತ್ ಶೆಟ್ಟಿ, ಪ್ರಾಂಶುಪಾಲರಾದ ಅಮರ್ ಚೆರೆಯನ್, ಪ್ರಾದ್ಯಾಪಕರಾದ ಜೋಯೆಲ್ ಲೋಬೊ, ಕಾಲೇಜ್ ವಿದ್ಯಾರ್ಥಿಸಂಘದ ಅಧ್ಯಕ್ಷ ನಿತಿನ್ ಕಾಮತ್, ಕಾರ್ಯದರ್ಶಿ ರೇಚೆಲ್ ಮತ್ತು ವಿದ್ಯಾರ್ಥಿ ಸಂಯೋಜಕ ಪುನಿತ್ ಉಪಸ್ಥಿತರಿದ್ದರು.
ಜಿಲ್ಲೆಯಲ್ಲೇ ಇಷ್ಟು ಬಗೆಯ ತಿಂಡಿತಿನಿಸು, ವಸ್ತುಪ್ರದರ್ಶನ ವಿದ್ಯಾರ್ಥಿಗಳೇ ನಡೆಸಿಕೊಟ್ಟ ಕಾರ್ಯಕ್ರಮ ಇದೇ ಮೊದಲಾಗಿದೆ.