ನಾಡೋಜ ಹಂಪನಾರಿಂದ ಕನ್ನಡ ನಾಡು-ನುಡಿ, ಸಂಸ್ಕøತಿಗೆ ಅಮೂಲ್ಯ ಸೇವೆ
ನಾಡೋಜ ಹಂಪನಾ ಮತ್ತು ಕಮಲಾ ಹಂಪನಾ ಅವರನ್ನು ಗೌರವಿಸಲಾಯಿತು.
ಡಾ. ಚಂದ್ರಶೇಖರ ಕಂಬಾರ ಅಧ್ಯಕ್ಷ ಭಾಷಣ ಮಾಡಿದರು
ಉಜಿರೆ: ಸಹನಶೀಲ ಸ್ವಭಾವದ, ಅಗಾಧ ಭಾಷಾ ಪಾಂಡಿತ್ಯ ಹೊಂದಿರುವ, ಹೃದಯ ಶ್ರೀಮಂತಿಕೆ ಹೊಂದಿರುವ ನಾಡೋಜ ಹಂಪಸಂದ್ರ ನಾಗರಾಜಯ್ಯ (ಹಂಪನಾ) ಅವರು ಕನ್ನಡ ನಾಡು-ನುಡಿ, ಸಂಸ್ಕøತಿಗೆ ಅಮೂಲ್ಯ ಸೇವೆ ನೀಡಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಶುಕ್ರವಾರ ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲಿ ಕನ್ನಡ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ನ ಬೆಳ್ತಂಗಡಿನ ತಾಲ್ಲೂಕು ಘಟಕದ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಹಂಪನಾ ವ್ಯಕ್ತಿ, ಕೃತಿ: ಅನುಸಂಧಾನ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು “ಶಾಸ್ತ್ರಿ” ಪರಂಪರೆ ಕಣ್ಮರೆಯಾಗಿದೆ. ಜೈನ ಧರ್ಮದ ಆಳವಾದ ಅಧ್ಯಯನ ಮಾಡಿದವರು “ಶಾಸ್ತ್ರಿ” ಆಗುತ್ತಾರೆ. ಆದರೆ ಇಂದು ವಿಶೇಷ ಧಾರ್ಮಿಕ ಅಧ್ಯಯನ ಮಾಡಿದ ಶಾಸ್ತ್ರಿಗಳ ಕೊರತೆ ಎದ್ದು ಕಾಣುತ್ತಿದೆ. ಜೈನ ಧರ್ಮದಲ್ಲಿ ವಿಶೇಷ ಅಧ್ಯಯನ, ಸಂಶೋಧನೆ ಮಾಡಿದ ಹಂಪನಾ ಇಂದು ಎಲ್ಲರಿಗೂ ಧರ್ಮದ ಬಗ್ಯೆ ಅಧಿಕೃತ ಮಾಹಿತಿ ನೀಡುವ “ಹಂಪನಾ ಶಾಸ್ತ್ರಿ” ಆಗಿದ್ದಾರೆ ಎಂದು ಹೆಗ್ಗಡೆಯವರು ಶ್ಲಾಘಿಸಿದರು.
ಜೈನ ಶ್ರಾವಕ-ಶ್ರಾವಕಿಯರಿಗಲ್ಲದೆ, ಭಟ್ಟಾರಕರುಗಳಿಗೆ ಹಾಗೂ ಮುನಿಗಳಿಗೂ ಅವರು ಜೈನ ಧರ್ಮದ ಬಗ್ಯೆ ಅಧಿಕೃತ ಮಾಹಿತಿ ನೀಡಲು ಸಮರ್ಥರಾಗಿದ್ದಾರೆ.
ಧರ್ಮ, ಸಾಹಿತ್ಯ ಮತ್ತು ಕಲೆಯ ಆರಾಧಕರೂ ಆದ ಹಂಪನಾ ಉತ್ತಮ ವಾಗ್ಮಿಯಾಗಿ, ಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಹಂಪನಾ ಮತ್ತು ಕಮಲಾ ಹಂಪನಾ ದಂಪತಿಯನ್ನು ಗೌರವಿಸಲಾಯಿತು.
ನಾಡೋಜ ಕಮಲಾ ಹಂಪನಾ ವಿರಚಿತ “ಬೇರು-ಬೆಂಕಿ-ಬಿಳಲು” ಕೃತಿ ಬಿಡುಗಡೆ ಮಾಡಿದ ಹೇಮಾವತಿ ವಿ. ಹೆಗ್ಗಡೆಯವರು ಮಾತನಾಡಿ, ತಮ್ಮ ಜೀವನಾನುಭವವನ್ನು, ನೋವು-ನಲಿವನ್ನು ಕಮಲಾ ಹಂಪನಾ ಪುಸ್ತಕದಲ್ಲಿ ವಿವರಿಸಿದ್ದು ಕಾದಂಬರಿಯಂತೆ ಸುಲಿತವಾಗಿ ಓದಿಸಿಕೊಂಡು ಹೋಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಿವೃತ್ತ ಪ್ರಾಧ್ಯಾಪಕ ಬಿ.ಎ. ವಿವೇಕ ರೈ ಶುಭಾಶಂಸನೆ ಮಾಡಿ, ವ್ಯಕ್ತಿಯು ವೃತ್ತಿಯಿಂದ ನಿವೃತ್ತನಾದ ಬಳಿಕ ಆತನ ನಿಜವಾದ ಜೀವನ ಆರಂಭವಾಗುತ್ತದೆ. ವಿದ್ಯಾರ್ಥಿಗಳು ನಿರಂತರ ಓದುವ ಹವ್ಯಾಸದೊಂದಿಗೆ ಅಧ್ಯಯನ ಶೀಲತೆ ಬೆಳೆಸಿಕೊಳ್ಳಬೇಕು.
ಪ್ರಾಕೃತ ಹಾಗೂ ಸಂಸ್ಕøತ ಅಧ್ಯಯನದೊಂದಿಗೆ ಹಳೆಗನ್ನಡ ಕಾವ್ಯಗಳನ್ನು ಓದಬೇಕು.
ಕರ್ನಾಟಕದಲ್ಲಿ ಅನೇಕ ಮಂದಿ ಜೈನಯತಿಗಳು, ಕವಿಗಳು, ಸಾಹಿತಿಗಳು ಅಮೂಲ್ಯ ಸೇವೆ ಮಾಡಿದ್ದು ಅವರ ಅಧ್ಯಯನ ಮಾಡಬೇಕು.
ಪಂಪಭಾರತ, ಗದಾಯುದ್ಧ, ಕುಮಾರವ್ಯಾಸ ಮೊದಲಾದ ಕೃತಿಗಳು ಇತರ ಭಾಷೆಗಳಿಗೂ ಅನುವಾದಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಹಂಪನಾ ಮಾತನಾಡಿ, ಇಂದು ನಮಗೆ 3ಜಿ, 4ಜಿ ಬೇಡ, ಸಾರ್ಥಕ ಬದುಕಿಗೆ ಮಾರ್ಗದರ್ಶನ ನೀಡುವ ಗುರೂಜಿ ಬೇಕು.
ವಿದ್ಯಾರ್ಥಿಗಳು ಕನ್ನಡದ ಬಗ್ಯೆ ಒಲವು ತೋರಿ, ಪಾಶ್ಚಾತ್ಯ ಸಂಸ್ಕøತಿಯ ಪ್ರಭಾವದಿಂದ ಕನ್ನಡ ಕೊಚ್ಚಿ ಹೋಗದಂತೆ ಕನ್ನಡವನ್ನು ಕಾಪಾಡಿ ಎಂದು ಸಲಹೆ ನೀಡಿದರು.
ಪಂಪನ ತಮ್ಮನಾದ ಜಿನವಲ್ಲಭನಂತಹ ಅಜ್ಞಾತ ಸಾಹಿತಿಗಳ ಬಗ್ಯೆ ಹೆಚ್ಚಿನ ಅಧ್ಯಯನ ಹಾಗೂ ಸಂಶೋಧನೆ ಆಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ನಾಡೋಜ ಚಂದ್ರಶೇಖರ ಕಂಬಾರ ಮಾತನಾಡಿ, ಬ್ರಿಟಿಷರ ಆಡಳಿತದಿಂದ ನಾವು ಅವರ ದಾಸಾನುದಾಸರಾಗಿ ಬೆಳೆಯಬೇಕಾಯಿತು.
ಸ್ವಾತಂತ್ರ್ಯ ದೊರಕಿದ ಬಳಿಕ ಭಕ್ತಿ ಚಳವಳಿಯಿಂದ ಧಾರ್ಮಿಕ ಉನ್ನತಿ ಸಾಧ್ಯವಾಯಿತು. ಎಲ್ಲರೂ ಮುಕ್ತವಾದ ಭಕ್ತಿಯಿಂದ ದೇವರ ಅನುಗ್ರಹಕ್ಕೆ ಪಾತ್ರರಾಗಲು ಸಾಧ್ಯವಾಯಿತು. ಯಾವುದು ವಿನಯವನ್ನು ನೀಡುತ್ತದೊ ಅದು ನಿಜವಾದ ವಿದ್ಯೆ.
ಕಥೆಗಳ ಮೂಲಕ ಬದುಕಿಗೆ ಪೂರಕವಾದ ಅಮೂಲ್ಯ ಮಾರ್ಗದರ್ಶನ ಸಿಗುತ್ತದೆ. ಈ ದಿಸೆಯಲ್ಲಿ ಮೂರು ಸಾವಿರ ಕಥೆಗಳನ್ನು ಬರೆದ ಹಂಪನಾ ಕೊಡುಗೆ ಅಮೂಲ್ಯವಾಗಿದೆ. ಕಥೆಗಳ ಮೂಲಕ ಬ್ರಹ್ಮ ಸುಖ ನೀಡುವ ರಸಾನುಭವ ದೊರಕುತ್ತದೆ. ನಮ್ಮ ದುಃಖ ದುಮ್ಮಾನಗಳು ದೂರವಾಗುತ್ತವೆ.
ಪ್ರಾಕೃತ ವಿಶ್ವವಿದ್ಯಾಲಯ ಪ್ರಾರಂಭಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್ ಮತ್ತು ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್ ಹಾಗೂ ಡಾ. ಬಿ. ಯಶೋವರ್ಮ, ರಾಜ್ಯಶ್ರೀ ಹಂಪನಾ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಉಪಸ್ಥಿತರಿದ್ದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಿ.ಪಿ. ಸಂಪತ್ ಕುಮಾರ್ ಸ್ವಾಗತಿಸಿದರು. ಪ್ರಾಂಶುಪಾಲ ಪ್ರೊ. ಎಸ್. ಸತೀಶ್ಚಂದ್ರ ಧನ್ಯವಾದವಿತ್ತರು.
ಡಾ. ರಾಜಶೇಖರ ಹಳೆಮನೆ ಕಾರ್ಯಕ್ರಮ ನಿರ್ವಹಿಸಿದರು.