Friday 19th, April 2024
canara news

ಧರ್ಮಸ್ಥಳದಲ್ಲಿ ರುಡ್‍ಸೆಟ್ ಸಂಸ್ಥೆಗಳ ನಿರ್ದೇಶಕರುಗಳ ವಾರ್ಷಿಕ ಸಮ್ಮೇಳನ ಸ್ವ-ಉದ್ಯೋಗಿಗಳು ಆನ್‍ಲೈನ್ ಸೇವೆಯನ್ನೂ ಪ್ರಾರಂಭಿಸಬೇಕು.

Published On : 24 Sep 2019   |  Reported By : Rons Bantwal


ಉಜಿರೆ: ಸ್ವ-ಉದ್ಯೋಗಿಗಳು ಆಯಾ ಊರಿನಲ್ಲಿ ಸ್ವಂತ ಉದ್ಯಮ ಪ್ರಾರಂಭಿಸಿ ಪ್ರಾಮಾಣಿಕತೆ, ತ್ಯಾಗ ಮತ್ತು ಬದ್ಧತೆಯಿಂದ ಸೇವೆ ಮಾಡಬೇಕು. ಆನ್‍ಲೈನ್ ಸೇವೆಯನ್ನೂ ಪ್ರಾರಂಭಿಸಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅವರು ಗುರುವಾರ ಧರ್ಮಸ್ಥಳದಲ್ಲಿ ಶ್ರೀಸನ್ನಿಧಿ ಅತಿಥಿ ಗೃಹದಲ್ಲಿ ರುಡ್‍ಸೆಟ್ ಸಂಸ್ಥೆಗಳ ನಿರ್ದೇಶಕರುಗಳ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಉದ್ಯಮಿಗಳಿಗೆ ಗ್ರಾಹಕರೆ ಉತ್ತಮ ಜಾಹಿರಾತು ಹಾಗೂ ಪ್ರಚಾರಕರು. ಸ್ವ-ಉದ್ಯೋಗದಿಂದ ಆದಾಯ ಹೆಚ್ಚಾಗುವುದಲ್ಲದೆ ಜೀವನ ಶೈಲಿ ಸುಧಾರಣೆಯೊಂದಿಗೆ ಕುಟುಂಬದ ಪ್ರಗತಿಯೂ ಆಗುತ್ತದೆ. ಮಹಿಳೆಯರು ನಿರುದ್ಯೋಗಿಗಳಲ್ಲ. ಅನೇಕ ಮಹಿಳೆಯರು ಕೂಡಾ ಸ್ವ-ಉದ್ಯೋಗದ ಮೂಲಕ ಉನ್ನತ ಸಾಧನೆ ಮಾಡಿರುವುದು ರುಡ್‍ಸೆಟ್ ಸಂಸ್ಥೆಗೆ ಕೀರ್ತಿ ತಂದಿದೆ. ಈಗಾಗಲೆ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದ ರುಡ್‍ಸೆಟ್ ಸಂಸ್ಥೆಗಳ ಸೇವೆ ಜಾಗತಿಕ ಮಟ್ಟಕ್ಕೆ ತಲುಪಲಿ ಎಂದು ಹೆಗ್ಗಡೆಯವರು ಹಾರೈಸಿದರು.

ಸ್ವ-ಉದ್ಯೋಗ ತರಬೇತಿಯೊಂದಿಗೆ ನೈತಿಕ ಶಿಕ್ಷಣವನ್ನೂ ನೀಡಿ ಮಾನವೀಯ ಮೌಲ್ಯಗಳೊಂದಿಗೆ ಸಮಾಜದ ಸಭ್ಯ, ಸುಸಂಸ್ಕøತ ನಾಗರಿಕರನ್ನಾಗಿ ರೂಪಿಸಲಾಗುತ್ತದೆ ಎಂದು ಅವರು ಹೇಳಿದರು.

568 ರುಡ್‍ಸೆಟ್ ಸಂಸ್ಥೆಗಳ ಮೂಲಕ ಈಗಾಗಲೆ ಮೂವತ್ತೇಳು ಲಕ್ಷ ನಿರುದ್ಯೋಗಿಗಳಿಗೆ ಸ್ವ-ಉದ್ಯೋಗ ತರಬೇತಿ ನೀಡಲಾಗಿದೆ.

ಮಂಗಳೂರಿನ ಎಂ.ಆರ್.ಪಿ.ಎಲ್.ನ ಆಡಳಿತ ನಿರ್ದೇಶಕ ಎಂ. ವೆಂಕಟೇಶ್ ಮಾತನಾಡಿ, ದೇಶದಲ್ಲಿ ನಾವೀಗ ಶಕ್ತಿಯ ಕೊರತೆಯನ್ನು ಕಾಣುತ್ತಿದ್ದೇವೆ. ದೇಶದ ಪ್ರಗತಿಗಾಗಿ ಶಕ್ತಿಯ ಉತ್ಪಾದನೆ ಮಾಡಿ ಬಳಕೆಯೊಂದಿಗೆ ಪರಿಸರ ಸಂರಕ್ಷಣೆಯನ್ನೂ ಮಾಡಬೇಕು. ಪ್ಲಾಸ್ಟಿಕ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಹೆಗ್ಗಡೆಯವರು ಕೌಶಲಾಭಿವೃದ್ಧಿಗೆ ನೀಡುತ್ತಿರುವ ಪ್ರೋತ್ಸಾಹದ ಬಗ್ಯೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ವೆಲ್ಡರ್, ಫಿಟ್ಟರ್ಸ್, ಎಲೆಕ್ಟ್ರಿಕಲ್ ಕೆಲಸದವರಿಗೆ ಇಂದು ಸಾಕಷ್ಟು ಬೇಡಿಕೆ ಇದೆ ಎಂದು ಅವರು ಹೇಳಿದರು.

ಸಿಂಡಿಕೇಟ್ ಬ್ಯಾಂಕಿನ ಮಹಾ ಪ್ರಬಂಧಕ ಸಾಯಿರಾಂ ಹೆಗ್ಡೆ ಮತ್ತು ಕೆನರಾ ಬ್ಯಾಂಕಿನ ಡಿ.ಜಿ.ಎಂ. ಅಂಬುಕ್ಕರನು ರುಡ್‍ಸೆಟ್ ಸಂಸ್ಥೆಗಳ ಸಾಧನೆಯನ್ನು ಶ್ಲಾಘಿಸಿ ಅಭಿನಂದಿಸಿದರು.

ರುಡ್‍ಸೆಟ್ ತರಬೇತಿಯಿಂದ ಯಶಸ್ವಿ ಉದ್ಯಮಿಗಳಾದ ಗದಗದ ಸಾವಿತ್ರಿ, ಕಣ್ಣೂರಿನ ಪ್ರಿಯಾ, ಮಧುರೈನ ದುರ್ಗಾ ಮತ್ತು ಉಜಿರೆಯ ಜೀವನ್ ತಮ್ಮ ಸಾಧನೆಯ ಯಶೋಗಾಥೆಯನ್ನು ವಿವರಿಸಿದರು.

ರುಡ್‍ಸೆಟ್ ಸಂಸ್ಥೆಗಳ ಕೇಂದ್ರೀಯ ಆಡಳಿತ ಸಮಿತಿಯ ಕಾರ್ಯನಿರ್ವಾಹಕ ನಿರ್ದೇಶಕ ಎಂ. ಜನಾರ್ದನ್ ಸ್ವಾಗತಿಸಿದರು. ನಿರ್ದೇಶಕ ವಿನಯಕುಮಾರ್ ಧನ್ಯವಾದವಿತ್ತರು. ಹಿರಿಯ ಉಪನ್ಯಾಸಕಿ ಅನುಸೂಯ ಕಾರ್ಯಕ್ರಮ ನಿರ್ವಹಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here