ವಿಜೃಂಭಿಸಿದ ದಸರಾ ಹಬ್ಬ-ಶಾರದೋತ್ಸವ
ಮುಂಬಯಿ, ಅ.10: ಶ್ರೀ ರಜಕ ಸಂಘ (ಮುಂಬಯಿ) ಇದರ ವಸಾಯಿ ಪ್ರಾದೇಶಿಕ ವಲಯದ ವತಿಯಿಂದ ವರ್ಷಂಪ್ರತಿಯಂತೆ ಈ ಬಾರಿಯೂ ದಸರಾ ಹಬ್ಬದ ಶಾರದಾ ಪೂಜೆಯನ್ನು ಕಳೆದ ರವಿವಾರ ಸಂಘದ ಕಚೇರಿಯ ಆವರಣದಲ್ಲಿ, ವಸಾಯಿ ವಲಯದ ಪ್ರಾದೇಶಿಕ ವಲಯದ ಸಮುದಯದ ಹಾಗೂ ಸ್ಥಾನೀಯ ತುಳು ಕನ್ನಡಿಗರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಧಾರ್ಮಿಕ ಕಾರ್ಯಕ್ರಮವಾಗಿ ಸಂಘದ ಮಹಿಳಾ ವಿಭಾಗದ ಸದಸ್ಯೆಯರು ಹಾಗೂ ವಸಾಯಿ ಪರಿಸರದ ಮಹಿಳೆಯರು ಭಜನಾ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಅಂತೆಯೇ ಅಚ್ಚುಕಟ್ಟಾಗಿ ಶೃಂಗರಿಸಿದ ದೇವರ ಮಂಟಪದಲ್ಲಿ ಮಹಿಳಾ ವಿಭಾಗಧ್ಯಕ್ಷೆ ಅನಿತಾ ದೇವೇಂದ್ರ ಬುನ್ನನ್, ಸದಸ್ಯರಾದ ರಮೇಶ್ ಕುಂದರ್ , ಗಣೇಶ್ ಗುಜರನ್ ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಸಲ್ಪಟ್ಟಿತು. ಸಂಘದ ಸದಸ್ಯರು, ವಸಾಯಿ ಪರಿಸರದ ತುಳು ಕನ್ನಡಿಗರು ಈ ಧಾರ್ಮಿಕ ಪೂಜೆಯಲ್ಲಿ ಪಾಲ್ಗೊಂಡು ಮಹಾಪ್ರಸಾದ ಸ್ವೀಕರಿಸಿ ದಸರೋತ್ಸವಕ್ಕೆ ಸಾಕ್ಷಿಯಾದರು.
ಕರ್ನಾಟಕ ಸಂಘ ವಸಾಯಿ ಇದರ ಮಾಜಿ ಅಧ್ಯಕ್ಷ ಒ.ಪಿ ಪೂಜಾರಿ ಅತಿಥಿüಯಾಗಿದ್ದು ಉಪಸ್ಥಿತ ಕೊಡುಗೈದಾನಿ ಹರೀಶ್ ಸಾಲಿಯಾನ್ ಇವರನ್ನು, ವಸಾಯಿ ವಲಯದ ರಜಕ ಸದಸ್ಯರಿಗಾಗಿ ನಡೆದ ಕೇರಂ ಹಾಗೂ ಚೆಸ್ ಚಾಂಪಿಯನ್ಶಿಪ್ ವಿಜೇತ ಸದಸ್ಯರಿಗೆ ಪುಷ್ಫಗುಚ್ಛವನ್ನಿತ್ತು ಅಭಿನಂದಿಸಿದರು.