ಅದಮಾರು ಕಿರಿಯ ಪಟ್ಟಾಧೀಶ ಶ್ರೀ ಈಶ ಪ್ರಿಯ ತೀರ್ಥರ ಭೇಟಿ
ಮುಂಬಯಿ, ಅ.27: ಶ್ರೀ ಮಾಧ್ವಾಚಾರ್ಯರ ಮುಂದುವರೆದ ಪರಂಪರೆಯಂತೆ ಸದ್ಯ ಸೇವಾನಿರತ ಅದಮಾರು ಮಠಾಧೀಶ 108 ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರ ಆದೇಶದಂತೆ ಉಡುಪಿ ಶ್ರೀ ಕೃಷ್ಣಮಠದ 32ನೇ ಪರ್ಯಾಯ ದೀಕ್ಷೆಗೆ ಸನ್ನದ್ಧರಾದ ಶ್ರೀ ಅದಮಾರು ಮಠದ ಕಿರಿಯ ಪಟ್ಟಾಧೀಶ ಶ್ರೀ ಈಶ ಪ್ರಿಯತೀರ್ಥ ಶ್ರೀಪಾದರು ಇಂದು (ಅ.28) ಸೋಮವಾರ ಬೆಳಿಗ್ಗೆ 9.30 ಗಂಟೆಗೆ ಪೇಜಾವರ ಮಠ ಮುಂಬಯಿ ಶಾಖೆಯಾದ ಶ್ರೀಪೇಜಾವರ ಮಠ ಪ್ರಭಾತ್ ಕಾಲೋನಿ ಸಾಂತಾಕ್ರೂಜ್ ಪೂರ್ವ ಮುಂಬಯಿ ಇಲ್ಲಿಗೆ ಪಾದಾರ್ಪಣೆ ಮಾಡಲಿದ್ದಾರೆ.
ಜಗದೊಡೆಯ ಶ್ರೀ ಕೃಷ್ಣನ ಪೂಜಾ ಕೈಂಕರ್ಯಕ್ಕೆ 2020 ಜನವರಿಯಲ್ಲಿ ನಡೆಯಲಿರುವ ಪರ್ಯಾಯ ದೀಕ್ಷೆ ತೊಡಲಿರುವ ಶ್ರೀ ಈಶ ಪ್ರಿಯತೀರ್ಥರಿಗೆ ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಪರಮಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಮತ್ತು ಕಿರಿಯ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರ ಆಶೀರ್ವದಗಳೊಂದಿಗೆ ಪೇಜಾವರ ಮಠ ಮುಂಬಯಿ ಶಾಖೆಗೆ ಸಂಪ್ರದಾಯಿಕವಾಗಿ ಸ್ವಾಗತಿಸಲಾಗುವುದು ಎಂದು ಮಠದ ಪ್ರಧಾನ ವ್ಯವಸ್ಥಾಪಕ ವಿದ್ವಾನ್ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ತಿಳಿಸಿದ್ದಾರೆ.
ಶ್ರೀಗಳು ತಮ್ಮ ಪರ್ಯಾಯದ ಬಗ್ಗೆ ತಿಳಿಸಿ ಪ್ರವಚನ, ಅನುಗ್ರಹ ಸಂದೇಶ ನೀಡಿ ನೆರೆದ ಭಕ್ತರಿಗೆ ಅನುಗ್ರಹಿಸಲಿದ್ದು, ಈ ಶುಭಾವಸರದಲ್ಲಿ ಮಹಾಪೂಜೆ, ಅಭಿಷೇಕ ಸೇವೆ, ಪಾದಪೂಜೆ ನಡೆಸಲಾಗುವುದು. ಸೇವೆಗಳನ್ನು ನಡೆಸಲುದ್ದೇಶಿಸುವ ಭಕ್ತರು ಅಧಿಕ ಮಾಹಿತಿಗಾಗಿ ಪೇಜಾವರ ಮಠದ ದೂರವಾಣಿ 26126614 / 9892697670 ಸಂಖ್ಯೆಗೆ ಸಂಪರ್ಕಿಸುವಂತೆ ಕೋರಲಾಗಿದೆ.
ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ನಾಡಿನ ಸಮಸ್ತ ಭಕ್ತಾಭಿಮಾನಿಗಳು ಸಹಭಾಗಿಗಳಾಗಿ ಶ್ರೀಕೃಷ್ಣ ದೇವರ ಕೃಪೆಗೆ ಪಾತ್ರರಾಗುವಂತೆ ಪೂರ್ಣಪ್ರಜ್ಞಾ ವಿದ್ಯಾಪೀಠ ಪ್ರತಿಷ್ಠಾನದ ವಿಶ್ವಸ್ಥ ಮಂಡಳಿ ಹಾಗೂ ಪೇಜಾವರ ಮಠ ಮುಂಬಯಿ ಶಾಖೆಯ ಪ್ರಬಂಧಕರುಗಳಾದ ಪ್ರಕಾಶ ಆಚಾರ್ಯ ರಾಮಕುಂಜ, ಹರಿ ಭಟ್ ಪುತ್ತಿಗೆ, ನಿರಂಜನ್ ಗೋಗ್ಟೆ ಈ ಮೂಲಕ ತಿಳಿಸಿದ್ದಾರೆ.