`ಟ್ರಿಪಲ್ ತಲಾಖ್' ಡಿ.08: ಲಂಡನ್ನ ಬ್ರಿಸ್ಟೆಲ್ಲ್ನಲ್ಲಿ ಬಿಡುಗಡೆ
ಮುಂಬಯಿ, ಡಿ.05: ಮುಂಬಯಿ ಅಲ್ಲಿನ ಸಮಾಜ ಸೇವಕ, ಎನ್.ಪಿ ಸುವರ್ಣ ಮತ್ತು ಯಾಕೂಬ್ ಖಾದರ್ ಗುಲ್ವಾಡಿ ನಿರ್ಮಾಣದ `ಟ್ರಿಪಲ್ ತಲಾಖ್' ಡಿ.8 ರಂದು ಲಂಡನ್ನ ಬ್ರಿಸ್ಟೆಲ್ಲ್ನಲ್ಲಿ ತೆರೆ ಕಾಣಲಿದೆ. ಇದೇ ಡಿ.08ನೇ ಭಾನುವಾರ ಬೆಳಿಗ್ಗೆ 10 ಗಂಟೆಗೆ ಇಂಗ್ಲೆಂಡ್ ನೈರುತ್ಯ ಕರಾವಳಿಯ ಬ್ರಿಸ್ಟಲ್ಲ್ ಇಲ್ಲಿನ ನಾರ್ಥುಂಬ್ರಿಯಾ ರಸ್ತೆ-51ಯಲ್ಲಿನ ಸ್ಕಾಟ್ ಸಿನೆಮಾ ಮಂದಿರದಲ್ಲಿ ಮೊದಲ ಚಿತ್ರ ಪ್ರದರ್ಶನವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. 2017ರಲ್ಲಿ ರಾಷ್ಟ್ರಪ್ರಶಸ್ತಿ (ರಜತಕಮಲ) ಪಡೆದ ಕನ್ನಡ ಚಲನಚಿತ್ರ `ರಿಸರ್ವೇಶನ್' ನಿರ್ಮಿಸಿದ ಗುಲ್ವಾಡಿ ಟಾಕೀಸ್ ಇದೀಗ `ಟ್ರಿಪಲ್ ತಲಾಖ್- ಕುರಾನ್ ಹೇಳಿಲ್ಲ' ಚಿತ್ರ ನಿರ್ಮಿಸಿದೆ.
ಈ ಹಿಂದೆ `ರಿಸರ್ವೇಶನ್' ಪ್ರದರ್ಶನಕ್ಕೆ ಬ್ರಿಸ್ಟಲ್ಗೆ ಬಂದಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ನಿರ್ಮಾಪಕ, ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿ ಅವರು ಬ್ರಿಸ್ಟಲ್ಗೆ ತೆರಳಿ ಸಿನೆಮಾ ಪ್ರದರ್ಶನದ ನಂತರ ಸ್ಥಳಿಯ ಸಿನಿಮಾ ಪ್ರೇಕ್ಷಕರ ಜೊತೆ ಸಂವಾದದಲ್ಲಿ ಭಾಗವಹಿಸಲಿದ್ದಾರೆ.
ಕನ್ನಡದ ಪ್ರಾದೇಶಿಕ ಭಾಷೆಗಳಲ್ಲೊಂದಾದ ಬ್ಯಾರಿ ಹಾಗೂ ಕನ್ನಡ ಭಾಷೆಗಳಲ್ಲಿ (ಇಂಗ್ಲಿಷ್ ಸಬ್ ಟೈಟಲ್ ಇದೆ) ಚಿತ್ರಿತಗೊಂಡಿರುವ ಸಾಂಸಾರಿಕ ಸಿನೆಮಾ ಇದಾಗಿದ್ದು ಡಾ| ಸಾ.ರಾ ಅಬೂಬಕ್ಕರ್ ರಚಿತ ಕತೆಯನ್ನು ಈ ಸಿನೆಮಾ ಆಧರಿಸಿದೆ. ಭಾರತದಲ್ಲಿನ ಸಮುದಾಯವೊಂದರಲ್ಲಿ ಪ್ರಸ್ತುತವಾಗಿರುವ ತ್ರಿವಳಿ ತಲಾಖ್ ಸಮಸ್ಯೆ ಹಾಗೂ ಸುಪ್ರೀಂ ಕೋರ್ಟ್ನ ಇತ್ತೀಚಿನ ತೀರ್ಪಿನ ಸುತ್ತ ಚಿತ್ರಕತೆ ಸಿನೆಮಾದಲ್ಲಿ ಹೆಣೆಯಲ್ಪಟ್ಟಿದೆ.
ಬ್ರಿಸ್ಟಲ್ಲ್ನ ಕನ್ನಡ ಸ್ನೇಹಿತರು ಈ ಚಿತ್ರ ಪ್ರದರ್ಶನ ಆಯೋಜಿಸಿದ್ದು ಸಿನೆಮಾ ಸದಭಿರುಚಿಯ ಕನ್ನಡ ಮೂಲದ ಸಿನೆಮಾಗಳನ್ನು ಇಷ್ಟಪಡುವ ಬ್ರಿಸ್ಟಲ್ ಹಾಗು ನೆರೆಯ ಊರಿನ ಕನ್ನಡಿಗರು ವಿಶೇಷ ಕಾತರದಿಂದ ಗುಲ್ವಾಡಿ ಟಾಕೀಸ್ ನ ಹೊಸಚಿತ್ರವನ್ನು ನಿರೀಕ್ಷಿಸುತ್ತಿದ್ದಾರೆ.
ಟ್ರಿಪಲ್ ತಲಾಖ್ (ಬ್ಯಾರಿ ಭಾಷೆಯ ಚಲನಚಿತ್ರ)
ನಾಡೋಜ ಡಾ| ಸಾ. ರಾ ಅಬೂಬಕ್ಕರ್ ಕಥೆಯನ್ನಾಧರಿಸಿ ಯಾಕೂಬ್ ಖಾದರ್ ಗುಲ್ವಾಡಿ ಅವರ ಚಿತ್ರಕಥೆ ಸಂಭಾಷಣೆ-ನಿರ್ದೇಶನ ಹಾಗೂ ಪಣಕನಹಳ್ಳಿ ಪ್ರಸನ್ನ ಮತ್ತು ರಿಝ್ವಾನ್ ಗುಲ್ವಾಡಿ ಸಹ ನಿರ್ದೇಶನದಲ್ಲಿ ಮುಂಬಯಿನ ಎನ್.ಪಿ ಸುವರ್ಣ ಮತ್ತು ಯಾಕೂಬ್ ಖಾದರ್ ಗುಲ್ವಾಡಿ ನಿರ್ಮಾಪಕತ್ವದಲ್ಲಿ ಗುಲ್ವಾಡಿ ಟಾಕೀಸ್ ನಿರ್ಮಾಣ ಗೊಳಿಸಿದೆ.
ಪಿ.ವಿ.ಆರ್ ಸ್ವಾಮಿ ಮತ್ತು ಸತೀಶ್ ಕುಮಾರ್ ಛಾಯಾಗ್ರಹಣದಲ್ಲಿ ರಚಿತ ಸಿನೆಮಾಕ್ಕೆ ಗಿರೀಶ್ ಬಿ.ಎಂ ಹಿನ್ನೆಲೆ ಸಂಗೀತ ಮತ್ತು ಸೌಂಡ್ ಎಫೆಕ್ಟ್ ನೀಡಿರುವರು. ಮೋಹನ್ ಎಲ್.ರಂಗ ಕಹಳೆ ಕಲರೀಸ್ಟ್ ಎಡಿಟರ್ ಆಗಿದ್ದು ಮುನೀಬ್ ಅಹಮದ್ ಸೌಂಡ್ ಮಿಕ್ಸಿಂಗ್ ನಡೆಸಿರುವರು. ಆಬೀದ್ ಖಾದರ್ ಕಲೆಯಲ್ಲಿ ರಚಿಸಿದ ಚಿತ್ರಕ್ಕೆ ಇಸ್ಮಾಯಿಲ್ ಸರ್ಫುದ್ದೀನ್ ವಸ್ತ್ರವಿನ್ಯಾಸಗೊಳಿಸಿರುವರು. ರೂಪ ವರ್ಕಾಡಿ, ನವ್ಯ ಪೂಜಾರಿ, ಬೇಬಿ ಫಹಿಮತುಲ್ ಯುಶ್ರ, ಅಝರ್ ಶಾ, ಮಹಮ್ಮದ್ ಬಡ್ಡೂರ್, ಎಂ.ಕೆ ಮಠ, ಅಮೀರ್ ಹಂಝ, ರವಿಕಿರಣ್ ಮುರ್ಡೇಶ್ವರ, ಎ.ಎಸ್.ಎನ್ ಹೆಬ್ಬಾರ್, ಉಮರ್ ಯು.ಹೆಚ್, ಮಾಸ್ಟರ್ ಫಹಾದ್, ನಾರಾಯಣ ಸುವರ್ಣ, ಪ್ರಭಾ ಎನ್.ಪಿ ಸುವರ್ಣ ಅಭಿನಯದಲ್ಲಿ ಈ ಸಿನೆಮಾ ಮೂಡಿಬಂದಿದೆ.
ಟ್ರಿಪಲ್ ತಲಾಖ್ (ಕಥೆ ಸಾರಾಂಶ)
ಅದೊಂದು ಬ್ಯಾರಿ ಜನಾಂಗ ಇರುವ ಊರು.ಅಲ್ಲೊಂದು ಕುಟುಂಬ,ಹಂಝ, ಫಾತಿಮಾಳಿಗೆ ಎರಡನೇ ಗಂಡ.ಅವಳಿಗೆ ಶಬೀನ ಎಂಬ ಮೊದಲ ಗಂಡನ ಮಗಳಿದ್ದಾಳೆ.ಈಗ ಹಂಝಾನಿಗೂ ಒಂದು ಗಂಡು ಮಗು ಹುಟ್ಟಿದೆ.ಹಂಝ ಲಾರಿ ಡ್ರೈವರ್, ಫಾತಿಮಾ ಬೀಡಿ ಕಟ್ಟುವ ಕೆಲಸ ಮಾಡುತ್ತ ಕಷ್ಟದ ಜೀವನ ಸಾಗಿಸುತ್ತಿದ್ದಾಳೆ. ಅದೊಂದು ದಿನ ಗಂಡ ಕೆಲಸದ ಮೇಲೆ ಗೋವ ಕಡೆ ಹೋಗುತ್ತೇನೆಂದು ಹೋದವನು,ಒಂದು ಘಟನೆಯ ಮೂಲಕ ಮತ್ತೊಂದು ಮದುವೆ ಆಗುತ್ತಾನೆ. ಫಾತಿಮಾಳಿಗೆ ಅಂಚೆ ಮೂಲಕ ತಲಾಖ್ ಪತ್ರ ಕಳಿಸಿ ಕೊಡುತ್ತಾನೆ. ಅದರಿಂದ ಫಾತಿಮ ಆಘಾತಕ್ಕೆ ಒಳಗಾಗುತ್ತಾಳೆ. ಇರುವ ಊರಲ್ಲಿ ಅವಮಾನದ ಬದುಕು ಸಾಗಿಸುವುದು ಕಷ್ಟವೆನಿಸಿ ಊರು ತೊರೆಯುತ್ತಾಳೆ.
ಪರಿಚಯವಿಲ್ಲದ ಊರಿಗೆ ಬಂದ ಫಾತಿಮ ಅಲ್ಲಿ ಪರಿಚಯವಾದ ವಕೀಲರೊಬ್ಬರ ಹೆಂಡತಿ ಮಮ್ತಾಜ್ಳ ನೆರವಿನ ಮೂಲಕ ಅವರ ಮನೆ ಕೆಲಸದವಳಾಗಿ ನೆಲೆಯೂರುತ್ತಾಳೆ. ಅವರ ಸಹಕಾರದಿಂದ ಹೊಸ ಬದುಕು ಕಟ್ಟಿಕೊಳ್ಳುವಲ್ಲಿ ಯಶ ಸಾಧಿಸುತ್ತಾಳೆ. ಮಗಳು ಕಾನೂನು ಪದವಿ ಮಾಡಿ, ಸ್ನಾತಕೋತ್ತರ ಪದವಿ ಮಾಡುವ ಪ್ರಯತ್ನದಲ್ಲಿ ಇರುತ್ತಾಳೆ. ಆ ದಿನಗಳಲ್ಲಿ ಆಕಸ್ಮಿಕ ಘಟನೆಯ ಮೂಲಕ ಪರಿಚಯವಾದ ಹೈದರಾಬಾದ್ ಮೂಲದ ಮುಸ್ತಾಕ್ ಎನ್ನುವ ಹುಡುಗನ ಜೊತೆ ಶಬೀನಳ ಮದುವೆ ಆಗುತ್ತದೆ. ಆ ನಂತರ ಕೆಲ ದಿನಗಳಲ್ಲೇ ಅವನಿಂದಲೂ ಶಬೀನಾಗೆ ತಲಾಖ್ ಆಗುತ್ತದೆ . ಅಂಚೆ, ವಾಟ್ಸಪ್, ಪೆÇೀನ್, ಈ ಮೈಲ್ ಈ ತರದ ಒಂದೇ ಬಾರಿ ಮೂರು ಸಾರಿ ಹೇಳುವ `ಟ್ರಿಪಲ್ ತಲಾಖ್'ಗೆ ಪವಿತ್ರ ಕುರಾನ್ನಲ್ಲಿ ಅರ್ಥವಿಲ್ಲವೆಂದು ಕಾನೂನಿನ ಮೂಲಕ ಹೋರಾಟ ಮಾಡುವ ಸಂಘರ್ಷಮಯ ಕಥಾನಕವೆ `ಟ್ರಿಪಲ್ ತಲಾಖ್' ಇದೊಂದು ಚಿಂತನ ಶೀಲ ಸಂವೇನಾತ್ಮಕ ಕಥಾವಸ್ತು. ಹ್ರದಯಸ್ಪರ್ಶಿ ದೃಶ್ಯಗಳ ಮೂಲಕ ಕಥಾಹಂದರ ಬಿಚ್ಚಿಕೊಳ್ಳುತ್ತದೆ.
: ಚಿತ್ರ-ಮಾಹಿತಿ: ರೋನ್ಸ್ ಬಂಟ್ವಾಳ್