ಮುಂಬಯಿಯ ಮನಸ್ಸುಗಳು ಕರಾವಳಿಯನ್ನು ಉಳಿಸಿದೆ : ನಾ.ಮೊಗಸಾಲೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಡಿ.08: ಪ್ರಸುತ ಸನ್ಮಾನ ತೆಗೆದುಕೊಳ್ಳುವುದು ಬಹಳ ಕಷ್ಟ ಅನಿಸುತ್ತಿದೆ. ಆದರೂ ಈ ಗೌರವ ನಾಡೋಜ ಪ್ರಶಸ್ತಿ ಸಿಕ್ಕಿದಷ್ಟೇ ಗೌರವ ಸ್ವೀಕರಿಸಿದ ಅನುಭವವಾಗುತ್ತಿದೆ. ಇಂದು ಮುಂಬಯಿಯ ಮನಸ್ಸುಗಳು ಕರಾವಳಿಯನ್ನು ಉಳಿಸಿದ್ದು, ನಿಮ್ಮ ಸಂಸ್ಕಾರ, ಸಂಸ್ಕೃತಿಯ ಬೇರು ಕರಾವಳಿಯಲ್ಲಿ ನೆಲೆಯಾಗಿದೆ. ಪ್ರೀತಿಸುವುದಲ್ಲಿ ಎರಡು ಕಾರಣಗಳಿದ್ದು, ಒಂದು ಅಂತರಂಗವಾಗಿ ಪ್ರೀತಿಸುವುದು, ಇನ್ನೊಂದು ಕಾರಣವಾಗಿ ಪ್ರೀತಿಸುವುದು. ನಾವೂ ಅಕ್ಷರಗಳ ಮೂಲಕ ನಾಡಿಗೆ ಮೂಡಬೇಕು. ನೀವು ನೀಡಿರುವ ಈ ಪ್ರೀತಿ ನನ್ನ ತಂದೆ ತಾಯಿಗಳಿಗೆ ಸಲ್ಲುವಂತದ್ದು. ನಾಡಿಗೆ ನಮನ ಮಾಲೆಯನ್ನು ಕರ್ನಾಟಕ ಗುರುತಿಸಿದೆ ಎಂದು ನಾಡಿನ ಹಿರಿಯ ವಿದ್ವಾಂಸ, ಕಾಂತಾವರ ಕನ್ನಡ ಸಂಘದ ಸ್ಥಾಪಕಾಧ್ಯಕ್ಷ ಡಾ| ನಾ.ಮೊಗಸಾಲೆ ಮಾತನಾಡಿದರು.
ಸಾಹಿತ್ಯ ಬಳಗ ಮುಂಬಯಿ ತನ್ನ ರಜತೋತ್ಸವ ಸಮಾರೋಪ ಸಮಾರಂಭ ಇಂದಿಲ್ಲಿ ಸಂಜೆ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್ನ ಕಿರು ಸಭಾಗೃಹದಲ್ಲಿ ಆಚರಿಸಿದ್ದು, ಕರ್ನಾಟಕ ಸಂಘ ಮುಂಬಯಿ ಉಪಾಧ್ಯಕ್ಷ, ತ್ರಿಭಾಷಾ ಪಂಡಿತ ಡಾ| ಎಸ್.ಕೆ ಭವಾನಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸಮಾರಂಭಕ್ಕೆ ಋಗ್ವೇದ ಘನಪಾಠಿ ದುರ್ಗಾಪ್ರಸಾದ್ ಭಟ್ ದೀಪ ಪ್ರಜ್ವಲಿಸಿ ಚಾಲನೆಯನ್ನಿತ್ತು ಸ್ವಸ್ತಿ ವಾಚನಗೈದರು.
ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಮತ್ತು ಮೈಸೂರು ಅಸೋಸಿಯೇಶನ್ ಮುಂಬಯಿ ಸಹಯೋಗ ದಲ್ಲಿ ನಡೆಸಲ್ಪಟ್ಟ ಸಮಾರಂಭದಲ್ಲಿ ನಾಡಿಗೆ ನಮಸ್ಕಾರ ಯೋಜನೆಯಡಿ 228 ಕೃತಿಗಳನ್ನು ಪ್ರಕಟಿಸಿ ವಿಜಯರಥ ಶಾಂತಿ ಆಚರಿಸಿದ ನಾಡಿನ ಹಿರಿಯ ಸಾಹಿತಿ ಡಾ| ನಾ.ಮೊಗಸಾಲೆ ಇವರಿಗೆ ಅಭಿನಂದನಾ ಗೌರವ ಪ್ರದಾನಿಸಿ ಅಭಿನಂದಿಸಿದ್ದು, ಗೌರವಕ್ಕೆ ಉತ್ತರಿಸಿ ಮೊಗಸಾಲೆ ಮಾತನಾಡಿದರು.
ಕೆ.ಎಲ್ ಕುಡಂತ್ತಾಯ ಅಭಿನಂದನಾ ಭಾಷಣಗೈದು ಕೃಷಿ ಹಿನ್ನಲೆಯಿಂದ ಬಂದ ಡಾ| ಮೊಗಸಾಲೆ ಕಾಂತಾವರಕ್ಕೆ ಬಂದಾಗ ಕಾತೇಶ್ವರ ದೇವಸ್ಥಾನದ ಗಂಟೆಯ ಕಲರವ ಮಾತ್ರ ಇತ್ತು. ಈಗ ಅಲ್ಲಿ ಸಾಹಿತ್ಯದ ಕಲರವ ಕೇಳಿಬರುತ್ತದೆ. ಒಂದು ವಿವರಿಸಲಾಗದ ವ್ಯಕ್ತಿತ್ವ ನಾ.ಮೊಗಸಾಲೆ ಅವರದ್ದು, ಸಾಹಿತ್ಯವನ್ನು ಮಾತ್ರ ಪ್ರೀತಿಸುವುದಲ್ಲ, ಸಾಹಿತ್ಯ ಸಂಸ್ಕೃತಿಯನ್ನು ಒಂದುಗೂಡಿಸಿ ಮುನ್ನಡೆದವರು ಮೊಗಸಾಲೆ ಎಂದು ತಿಳಿಸಿದರು.
ತಾವು ಬೆಳೆಯುತ್ತಾ ಇತರರನ್ನು ಬೆಳೆಸಿದವರು ಎಂಬತ್ತೇಳರ ಹೆಚ್.ಬಿ.ಎಲ್ ರಾವ್ ಹಾಗೂ ಎಪ್ಪತ್ತೈದರ ನಾ.ಮೊಗಸಾಲೆ. ಇತಿಹಾಸದ ಬಗ್ಗೆ ನಾವು ಗಂಭೀರವಾದ ಆರೋಪ ಇದೆ ಇದು ನಿಜವೂ ಹೌದು. ನಮ್ಮ ಸಾಧನೆಗಳ ಸುತ್ತ ಇತಿಹಾಸ ಹುಟ್ಟುತ್ತಿದೆ. ಅದನ್ನು ದಾಖಲಿಸುವ ಕೆಲಸ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ನಾ.ಮೊಗಸಾಲೆ ಹಾಗೂ ಅವರಿಂದ ಪ್ರೇರಣೆ ಪಡೆದು ಹೆಚ್.ಬಿ.ಎಲ್ ರಾವ್ ಇವರ ಸಾಂಸ್ಕೃತಿಕ ಇತಿಹಾಸವನ್ನು ದಾಖಲಿಸುವ ಕಾರ್ಯಸ್ತುತ. ಇದು ನಾಡನ್ನು, ದೇಶವನ್ನು ಕಟ್ಟಿಸುವ ಕಾರ್ಯ ಎಂದು ಮುಂಬಯಿ ವಿವಿ ಕನ್ನಡದ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಪ್ರಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಸರಕಾರದ (ಎನ್ಐಎ) ವಿಶೇಷ ವ್ಯಾಜ್ಯದಾರ ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ, ಡಾ| ವ್ಯಾಸರಾಯ ನಿಂಜೂರು, ಟಿ.ಎನ್ ಅಶೋಕ, ಶ್ರೀನಿವಾಸ ಜೋಕಟ್ಟೆ, ಯು. ವೆಂಕಟ್ರಾಜ್, ಶ್ಯಾಮ ಎನ್.ಶೆಟ್ಟಿ ವಾಶಿ, ಡಾ| ಕೆ.ಗೋವಿಂದ ಭಟ್, ಸಾಹಿತ್ಯ ಬಳಗದ ಉಪಾಧ್ಯಕ್ಷರುಗಳಾದ ಡಾ| ಕೆ.ಗೋವಿಂದ ಭಟ್ ಮತ್ತು ಡಾ| ಕರುಣಾಕರ ಎನ್.ಶೆಟ್ಟಿ, ಬಳಗದ ಗೌ| ಕಾರ್ಯದರ್ಶಿ ಎಸ್.ಕೆ.ಸುಂದರ್, ಕೋಶಾಧಿಕಾರಿ ಸಾ.ದಯಾ (ದಯಾನಂದ ಸಾಲ್ಯಾನ್), ರಾಜು ಶ್ರೀಯಾನ್, ಅನುರಾಧ ರಾವ್, ಎ.ಆರ್ ನಾರಾಯಣ ರಾವ್, ನಿತ್ಯಾನಂದ ಡಿ.ಕೋಟ್ಯಾನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದÀರು.
ಸಾಹಿತ್ಯ ಬಳಗ ಮುಂಬಯಿ ಅಧ್ಯಕ್ಷ ಹೆಚ್.ಬಿ.ಎಲ್ ರಾವ್ ಸ್ವಾಗತಿಸಿದರು. ಡಾ| ಜ್ಯೋತಿ ಸತೀಶ್, ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಜಿ.ಎಸ್ ನಾಯಕ್ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಾಟ್ಯ ವಿದುಷಿ ಸಹನಾ ಭಾರದ್ವಾಜ್ ಸ್ವಾಗತಂ ಕೃಷ್ಣ ನೃತ್ಯರೂಪಕ, ಪದ್ಮಾವತಿ ಯು.ಭಟ್ ಮತ್ತು ತಂಡವು ಜಾನಪದ ನೃತ್ಯ ಹಾಗೂ ಡಾ| ಎ.ವಿ ರಾವ್ ಪ್ರಾಯೋಜಕತ್ವದಲ್ಲಿ ನಾಟ್ಯ ವಿದುಷಿ ಮೈತ್ರೀ ರಾವ್ ಬೆಂಗಳೂರು ಬಳಗವು ಭರತನಾಟ್ಯ ಪ್ರದರ್ಶಿಸಿತು.