ಧ್ವನಿ ಪ್ರತಿಷ್ಠಾನದ 35ನೇ ವಾರ್ಷಿಕೋತ್ಸವ `ರಂಗಸಿರಿ ಉತ್ಸವ 2020'ದಲ್ಲಿ ಪ್ರದಾನ
ಮುಂಬಯಿ (ದುಬಾಯಿ), ಜ.14: ಧ್ವನಿ ಪ್ರತಿಷ್ಠಾನ ಕನ್ನಡ ರಂಗಭೂಮಿಯಲ್ಲಿ ವಿಶೇಷ ಸೇವೆಗೈದವರನ್ನು ಗುರುತಿಸಿ ಕಳೆದ ಹನ್ನೆರಡು ವರ್ಷಗಳಿಂದ ನೀಡುತ್ತಾ ಬರುತ್ತಿರುವ `ಧ್ವನಿ ಶ್ರೀರಂಗ' ಅಂತಾರಾಷ್ಟ್ರೀಯ ರಂಗ ಪ್ರಶಸ್ತಿಗೆ ಡಾ| ಹೆಚ್.ಎಸ್ ವೆಂಕಟೇಶ ಮೂರ್ತಿ ಅವರು ಅಯ್ಕೆ ಗೊಂಡಿರುವರು. ಇವರು ಕನ್ನಡ ರಂಗ ಕ್ಷೇತ್ರಕ್ಕೆ ತಮ್ಮ ವಿಭಿನ್ನ ನಾಟಕಗಳ ಮುಖಾಂತರ ಹೊಸತನವನ್ನು ಮೂಡಿಸಿರುವುದಲ್ಲದೆ ಕವಿಯಾಗಿಯು ಅಗ್ರಗಣ್ಯರಾಗಿರುವರು.
ಅಧುನಿಕ ನಾಟಕಗಳ ಬ್ರಹ್ಮ ಆದ್ಯ ರಂಗಾಚಾರ್ಯರ ನೆನಪಿನಲ್ಲಿ ಅಂತಾರಾಷ್ಟ್ರೀಯ ನೆಲೆಯಲ್ಲಿ ಕೊಡಮಾಡುವ ಈ ರಂಗ ಪ್ರಶಸ್ತಿ ದುಬೈಯ ಪ್ರಯಾಣ, ಮೂರುದಿನಗಳ ವಸತಿ ವೆಛ್ಚ ಹಾಗೂ 25,000/- ನಗದು ಮತ್ತು ಸ್ಮರಣಿಕೆಯನ್ನು ಹೊಂದಿದೆ. (ಈ ತನಕ ಬಿ.ಜಯಶ್ರೀ, ಟಿ.ಎಸ್.ನಾಗಭರಣ, ಶ್ರೀನಿವಾಸ ಕಪ್ಪಣ್ಣ, ಮುಖ್ಯಮಂತ್ರಿ ಚಂದ್ರು,ಸಾಣೆಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ, ಡಾ| ಹೆಚ್.ಎಸ್ ಶಿವಪ್ರಕಾಶ್, ಶ್ರೀಮತಿ ಉಮಾಶ್ರೀ, ಡಾ| ನಾ.ದಾ ಶೆಟ್ಟಿ, ಗಿರಿಜಾ ಲೋಕೇಶ್, ಸಿ.ಕೆ.ಗುಂಡಣ್ಣ ಮುಂತಾದವರು ಭಾಜಕರಾಗಿರುವರು). ಪ್ರಶಸ್ತಿಯನ್ನು ದುಬಾಯಿಯ ಏಮಿರೇಟ್ಸ್ ಥಿüಯೇಟರ್ನಲ್ಲಿ ತಾ.14.02.2020ರ ಶುಕ್ರವಾರ ಸಂಜೆ ನಡೆಯಲಿರುವ ಧ್ವನಿ ಪ್ರತಿಷ್ಠಾನದ ಮೂವತ್ತೈದನೇ ವಾರ್ಷಿಕೋತ್ಸವ ಸಮಾರಂಭ ರಂಗಸಿರಿ ಉತ್ಸವ 2020' ದಲ್ಲಿ ಪ್ರದಾನಿಸಲಾಗುವುದು.
ಇದೇ ಸಂದರ್ಭದಲ್ಲಿ ಗಿರೀಶ್ ಕಾರ್ನಾಡ್ ಅವರ `ಮದುವೆಯ ಆಲ್ಬಮ್' ನಾಟಕವನ್ನು ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ನಿರ್ದೇಶನದಲ್ಲಿ ರಂಗವೇರಿಸಲಾಗುವುದು. ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸ ಬೇಕಾಗಿ ಆಯೋಜಕರು ವಿನಂತಿಸಿದ್ದಾರೆ.