ಸೂಚ್ಯವಾಗಿ ಹೇಳಲು ಗಾದೆಗಳÀು ಉಪಯೋಗಿ : ರಮಣ್ ಶೆಟ್ಟಿ ರೆಂಜಾಳ
ಮುಂಬಯಿ ಜ.22: ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಫ್ರೆಂಡ್ ಸ್ವಾವಲಂಬನ ಕೇಂದ್ರ ಡೊಂಬಿವಲಿ ಇವರ ಸಂಯುಕ್ತ ಆಶ್ರಯದಲ್ಲಿ ಕಳೆದ ಶನಿವಾರ ಸಂಜೆ ಡೊಂಬಿವಲಿಯ ಗಣೇಶ ಮಂದಿರ ಸಭಾಗೃಹದಲ್ಲಿ `ಕನ್ನಡ ಗಾದೆಗಳ ವೈಭವ' ವಿಚಾರ ಸಂಕಿರಣ ಹಮ್ಮಿಕೊಂಡಿದ್ದು ಹೆಸರಾಂತ ಲೇಖಕ ರಮಣ್ ಶೆಟ್ಟಿ ರೆಂಜಾಳ ಉಪನ್ಯಾಸ ನೀಡಿ ಗಾದೆಗಳು ನೆಲದ ಸಂಸ್ಕೃತಿಯ ಪ್ರತೀಕ ಮತ್ತು ಸೂಚ್ಯವಾಗಿ ಹೇಳಲು ಗಾದೆಗಳÀು ಉಪಯೋಗಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹೇಳಬೇಕಾದದ್ದನ್ನು ಸೂಚ್ಯವಾಗಿ ಹೇಳಲು ಗಾದೆಗಳನ್ನು ಉಪಯೋಗಿಸುತ್ತೇವೆ. ಪ್ರತಿಗಾದೆಯು ಒಂದು ರೀತಿಯಲ್ಲಿ ಬಿಡಿ ಕವಿತೆಗಳಿದ್ದಂತೆ. ಪ್ರಾಸ, ಛಂದೋಬದ್ಧ, ಅಲಂಕಾರಿಕ, ಅಭಿವ್ಯಕ್ತಿ, ವ್ಯಂಗ್ಯ, ವೈಚಾರಿಕತೆ ಇತ್ಯಾದಿ ಕಾವ್ಯದ ಸೃಜನಾತ್ಮಕ ಶಕ್ತಿಯನ್ನು ಗಾದೆ ಒಳಗೊಂಡಿರುತ್ತದೆ. ಆದಿಪ್ರಾಸ ಮತ್ತು ಅಂತ್ಯ ಪ್ರಾಸ ಎರಡು ಅಪರೂಪವಾಗಿದ್ದು ಆಲಿಸುವಾತನ ನೆನಪಿನಲ್ಲುಳಿಯಲು ಸಹಾಯಕವಾಗಿದೆ. ಈ ಲಯಬದ್ಧತೆಯಿಂದಾಗಿ ಯೇ ಗಾದೆಗಳು ಜನಾಂಗದಿಂದ ಜನಾಂಗಕ್ಕೆ ಸಲೀಸಾಗಿ ಹಸ್ತಾಂತರಗೊಂಡು ಇಂದಿಗೂ ತಮ್ಮಜೀವಂತಿಕೆ ಉಳಿಸಿಕೊಂಡಿವೆ ಎಂದರು.
`ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ' ಅದೆಷ್ಟು ಸ್ವಾರಸ್ಯಕರವಾಗಿದೆಎಂದರೆ ಮನಸ್ತಾಪ ಮಾಡಿಕೊಂಡ ಪತಿ-ಪತ್ನಿ ಈ ಗಾದೆ ಕೇಳಿ ರಾಜಿಯಾಗಲೂ ಬಹುದು. ಜನಗಳ ಆರೋಗ್ಯವೇ ತಿರ್ಕೊಂಡು ತಿಂದ್ರೂ ಕರ್ಕೊಂಡು ಉಣ್ಣು, `ಹೂ ಹಂಚಿ ಮುಡಿ ಹಣ್ಣು ಹಂಚಿತಿನ್ನು' ಎಂಬ ಗಾದೆಗಳು ಒಳ್ಳೆಯ ವಸ್ತುಗಳು ಎಲ್ಲರಿಗೂ ದೊರಕಬೇಕು. ಕಷ್ಟ ಬಂದರೂ ಒಬ್ಬರಿಗೊಬ್ಬರು ನೆರವಾಗಬೇಕು ಎಂಬ ಅಂಶವನ್ನು ಅರುಹುತ್ತವೆ.
`ಮುದ್ದಾಟಕ್ಕೆ ಹೋಗಿ ಗುದ್ದಾಟವಾಯಿತು' ಮನೋರಂಜಕ ಗಾದೆಗಳಾದರೆ, `ಉದ್ಯೋಗಂ ಪುರುಷ ಲಕ್ಷಣಂ' ದುಡಿಮೆಯೇ ದೇವರು ಎಂಬುದಾಗಿ ಸಾರ್ಥಕ ಜೀವನದ ವಿವೇಕದ ದಾರಿದೀಪದಂತಹ ನುಡಿ ಮುತ್ತುಗಳು.`ಸೂಳೆಯ ಮನೆ ಉರಿಯುವಾಗ ಸನ್ಯಾಸಿಯ ಕುಂಡೆ ಎಬ್ಬಿತು' ತಿಳಿಹಾಸ್ಯ ಭರಿತ ಲೈಂಗಿಕ ಕಟು ವ್ಯಂಗ್ಯದ ಜೊತೆಗೆ ವಿಡಂಬನೆ ನೀತಿ ಬೋಧಕತೆಯಿಂದ ಕೂಡಿದೆ. ಹೀಗೆ ವೈವಿಧ್ಯತೆಯಿಂದ ಕೂಡಿದ ಗಾದೆಗಳು ಆ ಕಾಲದ ಸ್ಥಿತಿಗತಿಗಳ ಪರಿಚಯವನ್ನು ಹೇಳುತ್ತವೆ.
`ಅತ್ತೆ ಮನೆಯಲ್ಲಿ ಹೇಗಿದೆ ಮಗಳೆ' ಎಂದು ವಿವಾಹದ ನಂತರ ಪತಿ ಮನೆಯಿಂದತವರಿಗೆ ಆಗಮಿಸಿದ ಪ್ರೀತಿಯ ಮಗಳನ್ನು ಕೇಳಿದಾಗ, `ಮುಳ್ಳಾಗೆ ಹಾದಿನಡೆದಂಗೆ ಮೊಳಕೈಗೆ ಚಿಲಕ ಹೊಡೆದಂಗೆ' ಅತ್ತೆ ಮನೆಯ ಪರಿಸ್ಥಿತಿಯನ್ನು ಮಗಳು ಎಷ್ಟು ಸೂಚ್ಯವಾಗಿ ಹೇಳುತ್ತಾಳೆ.ಇಲ್ಲಿ ಬಳಸಿದ ಉಪಮೇಯಗಳಿಂದ ಧ್ವನಿಪೂರ್ಣವಾಗಿ, ಸಮರ್ಥವಾಗಿ ಚಿತ್ರಿಸಿದ್ದಾಳೆ.
`ಗಂಡಿಗೆ ಚಟವಿರಬಾರದು, ಹೆಣ್ಣಿಗೆ ಹಟವಿರಬಾರದು' ಹೀಗೆ ಸಾಂಸಾರಿಕ ವ್ಯವಸಾಯಕ್ಕೆ ಸಂಬಂಧಿಸಿದ ಗಾದೆಗಳು ಪರಿಶ್ರಮದ ಮಹತ್ವವನ್ನು ಸಾರಿದರೆ ಧಾರ್ಮಿಕತೆಗೆ ಮೂಢನಂಬಿಕೆಗೆ, ದಾಂಪತ್ಯಕ್ಕೆ, ಕೌಟುಂಬಿಕ, ವ್ಯಾವಹಾರಿಕ, ಬಡತನ, ಆಹಾರ, ಹಣ್ಣುತರಕಾರಿ, ಊರು - ಕೇರಿ, ಹಣ, ಪಶುಪಕ್ಷಿ, ಮಾತು, ಹುಟ್ಟುಸಾವು, ಗೆಳೆತನ, ಊಟ, ಮದುವೆ, ಹೀಗೆ ಯಾವುದಕ್ಕೆಗಾದೆಇಲ್ಲ?! ಎಲ್ಲದಕ್ಕೂ ಗಾದೆಗಳಿವೆ. ಹಿಂದಿನವರ ಅನುಭವದ ಭಂಡಾರವೇ ಈ ಗಾದೆಗಳು. ಅದಕ್ಕೆ ಹೇಳುತ್ತಾರೆ-`ವೇದ ಸುಳ್ಳಾದರೂ ಗಾದೆ ಸುಳ್ಳಲ್ಲ'. ಗಾದೆಗಳು ಅನುಭವದಿಂದ ಬಂದವುಗಳು. `ಮಾತಿಗೊಂದು ಮಾತು ಚಕ್ಲಿಗೊಂದು ತೂತು' ಎನ್ನುವಂತೆ ನಮ್ಮ ಜಾನಪದರ ಬಹುದೊಡ್ಡ ಆಸ್ತಿಗಳಲ್ಲಿ ಗಾದೆಗಳೂ ಒಂದು ಎಂದು ತಮ್ಮಉಪನ್ಯಾಸದಲ್ಲಿ ಅಭಿಪ್ರಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ಶೆಣೈ ಶಾಮ್ ಭಟ್ `ಆದದ್ದೆಲ್ಲ ಒಳ್ಳೆಯದಕ್ಕೆ' ಎಂಬ ಗಾದೆ, ರಾಜಮಂತ್ರಿಯಕಥೆ, ಸುಳ್ಳು ಸತ್ಯದ ಕಥೆಗಳ ಮೂಲಕ ಗಾದೆಗಳ ವಿಶಾಲತೆ ಹಾಗೂ ದೈನಂದಿನ ಜೀವನದಲ್ಲಿ ಅವುಗಳ ಪಾತ್ರದಕುರಿತು ವಿವರಿಸಿದರು. ಫ್ರೆಂಡ್ಸ್ ಸ್ವಾವಲಂಬನ ಕೇಂದ್ರದ ಕಾರ್ಯಕರ್ತರಿಂದ ಗಾದೆಗಳ ಕ್ವಿಜ್ ಏರ್ಪಡಿಸಲಾಗಿತ್ತು.
ಶೆಣೈ ಶ್ಯಾಮ ಭಟ್ ದಂಪತಿಗಳು ದೀಪ ಪ್ರಜ್ವಲಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯದರ್ಶಿ ವಿಶ್ವನಾಥ ದೊಡ್ಮನೆ ಸ್ವಾಗತಿಸಿದರು. ಕಸ್ತೂರಿ ಐನಾಪುರೆ ಪ್ರಾಸ್ತಾವನೆಗೈದರು. ಸಭಾಧ್ಯಕ್ಷರು ಕ್ವಿಜ್ನಲ್ಲಿ ಭಾಗವಹಿಸಿದವರಿಗೆ ಬಹುಮಾನ ವಿತರಿಸಿ ಅಭಿನಂದಿಸಿದರು. ಪ್ರತಿಭಾ ವೈದ್ಯ ಕಾರ್ಯಕ್ರಮ ನಿರೂಪಿಸಿದರು. ಸ್ವಾವಲಂಬನ ಕೇಂದ್ರದ ಪ್ರಬಂಧಕಿ ಜ್ಯೋತಿ ಹೆಗ್ಡೆ ವಂದಿಸಿದರು.