ನೂತನ ಅಧ್ಯಕ್ಷರಾಗಿ ಡಾ| ಆರ್.ಕೆ ಶೆಟ್ಟಿ ಆಯ್ಕೆ
ಮುಂಬಯಿ, ಮಾ.14: ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಇದರ ಮಹಾರಾಷ್ಟ್ರ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ಡಾ| ಆರ್.ಕೆ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ ಎಂದು ಜಾನಪದ ಪರಿಷತ್ತ್ನ ಕೇಂದ್ರ ಸಮಿತಿ ಅಧ್ಯಕ್ಷ ಟಿ.ತಿಮ್ಮೇಗೌಡ (ಐಎಎಸ್) ಬೆಂಗಳೂರು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಇದರ ಸಲಹಾ ಸಮಿತಿ ಸದಸ್ಯರಾಗಿ, ಬಂಟ್ಸ್ ಸಂಘ ಮುಂಬಯಿ ಇದರ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿಯೂ ಸಮಾಜ ಸೇವೆಯಲ್ಲಿ ತೊಡಗಿಸಿರುವ ಡಾ| ಆರ್.ಕೆ ಶೆಟ್ಟಿ ಅವರು ಬೃಹನ್ಮುಂಬಯಿನಲ್ಲಿ ಎಲ್ಲೈಸಿ ಸಂಸ್ಥೆಯ ಮೂಲಕ ಜನಾನುರಾಗಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಣಕಾಸು ತಜ್ಞರಾಗಿದ್ದಾರೆ.
ಜಾನಪದ, ಸಾಹಿತ್ಯ, ಕಲೆ, ಸಂಸ್ಕ್ರತಿಯ ಸಂವರ್ಧನೆಗಾಗಿ 1979ರಲ್ಲಿ ಸ್ಥಾಪಿತ ಕರ್ನಾಟಕ ಜಾನಪದ ಪರಿಷತ್ತು ಈಗಾಗಲೇ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾ ಘಟಕಗಳನ್ನು ಹೊಂದಿದ್ದು ಒಳನಾಡು ಕರ್ನಾಟಕ ಅಲ್ಲದೆ ಹೊರನಾಡುಗಳಾದ ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಹಾಗೂ ಅನಿವಾಸಿ ಭಾರತೀಯ ಬಾಹುಳ್ಯವುಳ್ಳ ದುಬಾಯಿ (ಯುಎಇ) ಇಲ್ಲೂ ಘಟಕಗಳನ್ನು ಹೊಂದಿದೆ.
ನಶಿಸುತ್ತಿರುವ ಪುರಾತನ ಜಾನಪದ ಕಲೆ-ಸಂಸ್ಕೃತಿಯನ್ನು ಮುಂದಿನ ದಿನಗಳಲ್ಲಿ ಉಳಿಸಿ ಬೆಳೆಸುವಲ್ಲಿ ಈ ಜಾನಪದ ಪರಿಷತ್ತು ಪ್ರಯತ್ನಿಸುದಲ್ಲದೆ ಎಲ್ಲಾ ಕನ್ನಡ ಶಾಲೆಗಳಲ್ಲಿ ಎಳವೆಯರಿಗೆ ಜಾನಪದ ಅರಿವು ಮೂಡಿಸಲು ಮಹಾರಾಷ್ಟ್ರ ಘಟಕದ ಮೂಲಕ ಶ್ರಮಿಸುವುದಾಗಿ ನೂತನ ಅಧ್ಯಕ್ಷ ಡಾ| ಆರ್.ಕೆ ಶೆಟ್ಟಿ ತಿಳಿಸಿದ್ದಾರೆ.