Saturday 20th, April 2024
canara news

ಶುದ್ಧ-ಸ್ವಚ್ಛದ ಮಹತ್ವ ತಿಳಿಸಿಕೊಟ್ಟ ಕೊರೊನಾ

Published On : 26 Mar 2020


ಹುಟ್ಟಿದ , ಬೆಳೆದ, ಹರಡಿದ ಬಗೆಯ ಬಗ್ಗೆ ಕೊರೊನಾ ವಿಷಯದಲ್ಲಿ ಏನೇ ಊಹಾಪೋಹಗಳಿದ್ದರೂ ಕೂಡಾ ಜನರಲ್ಲಿ ಮೂಡಿದ ಎಚ್ಚರಿಕೆಯನ್ನು, ಜನರು ವಹಿಸಿದ ಜವಾಬ್ದಾರಿಯನ್ನು ನಿಜಕ್ಕೂ ಪ್ರಶಂಸಿಸಬೇಕು. ಇಂತಹ ಜವಾಬ್ದಾರಿಯ ಸಂದರ್ಭದಲ್ಲಿ ದೇಶದ ನಮ್ಮ ಪ್ರಧಾನಿ ಕೊಟ್ಟ ಕರೆಗೆ ಇಡೀ ದೇಶದ ಜನ ಒಕ್ಕೊರಲಿನಿಂದ ಬೆಂಬಲವನ್ನು ಸೂಚಿಸಿದರು. ಆದರೆ ಅಂತಹ ಬೆಂಬಲ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾದದ್ದು ದು:ಖದ ಸಂಗತಿ. ಕನಿಷ್ಠ ಒಂದು ವಾರ ಅಥವಾ ಒಂದು ಪಕ್ಷದಷ್ಟು ದಿನಗಳ ಕಾಲ ಬೆಂಬಲದೊಂದಿಗೆ ದೂರ ದೂರ ಉಳಿಯ ಬೇಕಿದ್ದ ಜನ ಎಲ್ಲವನ್ನೂ ಬಿಟ್ಟು ಕೇವಲ ಒಂದು ದಿನದ ಅಭೂತಪೂರ್ವ ಬೆಂಬಲದ ಮರುದಿನವೇ ಬೀದಿಗಿಳಿದು, ವಾಹನ ಏರಿ, ಕಂಡಕಂಡಲ್ಲಿ ತಿರುಗಾಡಿ, ಸಂಪರ್ಕಿಸ ಹತ್ತಿದರು.


ಇದನ್ನು ಕಂಡ ಅಧಿಕಾರದ ಮಂದಿ, ಸರಕಾರಗಳು ಬೇರೆ ಉಪಾಯವಿಲ್ಲದೆ ಸೆಕ್ಷನ್ ಜಾರಿ, ಲಾಕ್ ಡೌನ್, ಗಡಿ ಮುಚ್ಚುಗಡೆ, ಎಲ್ಲಾ ವಾಹನ ಬಂದ್ ಇತ್ಯಾದಿ ನಿಷ್ಠುರ, ಕಠೋರ, ಕ್ರಮಗಳ ಮೂಲಕ ಕಾನೂನಿನ ಮೊರೆ ಹೋಗಬೇಕಾದ ಪ್ರಮೇಯ ಒದಗಿಬಂದಿತು-ಎನ್ನುವುದು ಖೇದಕರ ಮಾತು. ಏನೇ ಇರಲಿ ಇಟೆಲಿ ಇತ್ಯಾದಿ ದೇಶಗಳಲ್ಲಿ ಆದಂತೆ ನಮ್ಮಲ್ಲಿ ಆಗದಂತೆ ಕಾನೂನಿನ ಮೂಲಕವಾದರೂ ತಡೆಯಲು ಕ್ರಮ ಕೈಗೊಂಡ ಎಲ್ಲಾ ರಾಜ್ಯ ಹಾಗೂ ದೇಶದ ಸರಕಾರದ ಮಂದಿಗೆ ಅನಂತಾನಂತ ವಂದನೆಗಳನ್ನು ಹೇಳಲು ದೇಶಪ್ರೇಮಿಗಳು ಮರೆಯುವುದಿಲ್ಲ.

ಪ್ರತ್ಯೇಕವಾಗಿರಿಸುವುದು : ಇಂತಹ ಮಹಾಮಾರಿ ಕೊರೊನಾ ವೈರಸ್ ವಿಪರೀತ ಸೆಖೆಯ, ಬಿಸಿಲಿನ ತಾಪದ ನಾಡಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಸರ್ವರೂ ಹೇಳುತ್ತಾರೆ. ಆದರೆ ವಿದೇಶೀಯರ ಆಗಮನದಿಂದ ನಮ್ಮ ದೇಶದಲ್ಲಿ ಈ ವೈರಸ್ ಬೆಳೆಯಲು, ಪಸರಿಸಲು ಆರಂಭವಾಯ್ತು. ವಿದೇಶದಿಂದ ಬಂದ ಎಲ್ಲಾ ಮಂದಿಯನ್ನೂ ರೋಗದ ಪ್ರಾರಂಭದ ಸಮಯದಿಂದಲೇ ಪ್ರತ್ಯೇಕವಾಗಿ ಇರಿಸಿ ಹದಿನೈದು ದಿನ ಕಾಲ ನಿಗಾದಲ್ಲಿ ಇರಿಸಿದ್ದಲ್ಲಿ ನಮ್ಮ ದೇಶದಲ್ಲಿ ಈ ವೈರಸ್ ಹರಡಲು ಸಾಧ್ಯವೇ ಇರುತ್ತಿದ್ದಿಲ್ಲ. ಇರಲಿ. ಮಿಂಚಿಹೋದುದಕ್ಕೆ ಚಿಂತೆ ಏಕೆ?

ಪ್ರತ್ಯೇಕವಾಗಿರಿಸುವುದು ಹೊಸ ಕ್ರಮವೇನೂ ಅಲ್ಲ. ಹಿಂದೆಲ್ಲಾ ಆಸ್ಪತ್ರೆಗಳು ಬರುವ ಮೊದಲು, ಮನೆಗಳಲ್ಲಿಯೇ ಹೆರಿಗೆಯನ್ನು ಮಾಡಿಸಲಾಗುತ್ತಿತ್ತು. ಅಂತಹ ಹೆರಿಗೆಯ ಸಂದರ್ಭದಲ್ಲಿ ಬಸುರಿಯರಿಗೆ ಹೊಟ್ಟ ನೋವು ಕಾಣಿಸಿದಾಕ್ಷಣ ಹಳ್ಳಿಯಲ್ಲಿರುವ ಸೂಲಗಿತ್ತಿಯರನ್ನು ಕರೆಯಿಸಿ ಹೆರಿಗೆಯನ್ನು ಮಾಡಿಸುತ್ತಿದ್ದರು. ಅಂತಹ ಸಂದರ್ಭದಲ್ಲಿ ಬಸುರಿ-ಬಾಣಂತಿಯನ್ನು ಪಡಸಾಲೆ ಅಥವಾ ಒಳಕೋಣೆಯಲ್ಲಿ ಅಥವಾ ಹೆಚ್ಚು ಜನ ತಿರುಗಾಡದ ಕೋಣೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗುತ್ತಿತ್ತು. ಮತ್ತು ಹನ್ನೊಂದು/ಹದಿನೈದು ದಿನಗಳು/ಒಂದು ತಿಂಗಳುಗಳ ಕಾಲ ಮಗುವನ್ನು, ಹಾಗೂ ಬಾಣಂತಿಯನ್ನು ಬಹಳ ಜತನದಿಂದ ನೋಡಿಕೊಳ್ಳಲಾಗುತ್ತಿತ್ತು. ಈ ರೀತಿ ಪ್ರತ್ಯೇಕವಾಗಿ ನೋಡಿಕೊಳ್ಳಲು ಕಾರಣ ಮಗುವಿನಂತೆಯೇ ಮಗುವನ್ನು ಹೆತ್ತ ತಾಯಿ ವಯಸ್ಕಳಾಗಿದ್ದರೂ ಕೂಡಾ ರೋಗ-ರುಜಿನ, ಖಾಯಿಲೆ-ಕಸಾಲೆಗಳಿಗೆ ಈಡಾಗುವ ಹಸಿ ಮೈಯವಳು ಎಂದು ಪರಿಗಣಿಸಲ್ಪಡುತ್ತಿದ್ದುದು. ಕೆಲವಾರು ವಿಪರೀತ ಖಾಯಿಲೆಯ ಸಂದರ್ಭದಲ್ಲಿ ಕೂಡಾ ರೋಗಸ್ಥರನ್ನು ಇದೇ ರೀತಿ ಮನೆಯಲ್ಲಿ ಅಥವಾ ಮನೆಯಿಂದ ದೂರದಲ್ಲಿ ಪ್ರತ್ಯೇಕವಾಗಿರಿಸಲಾಗುತ್ತಿತ್ತು. ಹೀಗೆ ಪ್ರತ್ಯೇಕಾಗಿರಿಸುವುದರಿಂದ ಹರಡುವಿಕೆಯನ್ನು ತಡೆಗಟ್ಟಲು ಸಾಧ್ಯವಿದೆ ಮಾತ್ರವಲ್ಲ ಉತ್ತಮ ರೀತಿಯ ಆರೈಕೆಯೂ ಸಾಧ್ಯವಿದೆ.

ಬಿಸಿ ನೀರಲ್ಲಿ ಕುದಿಸಿ ಬಟ್ಟೆ ಒಗೆಯುವುದು: ಇತ್ತೀಚಿನ ದಿನಗಳಲ್ಲಿ ವಾಷಿಂಗ್ ಮೆಷೀನ್ ಬಂದ ತರುವಾಯ ಎಲ್ಲರ ಬಟ್ಟೆಯನ್ನೂ ಅದರಲ್ಲಿ ಹಾಕಿ ಒಟ್ಟಿಗೆ ಒಗೆಯಲಾಗುತ್ತಿದೆ. ಇದು ಇನ್ನೊಂದು ರೀತಿಯಲ್ಲಿ ರೋಗ-ರುಜಿನ ಹರಡಲು ಮೂಲ ಕಾರಣವಾಗಿದೆ. ಹೇಗೆಂದರೆ ಹಿಂದಿನ ಕಾಲದಲ್ಲಿ ಬಾಣಂತಿಯರ, ಚಿಕ್ಕ ಮಕ್ಕಳ, ಖಾಯಿಲೆ ಪೀಡಿತರ ಬಟ್ಟೆಗಳನ್ನು ಕುದಿಯುವ ನೀರಿನಲ್ಲಿ ಅದ್ದಿ ಪ್ರತ್ಯೇಕವಾಗಿ ಒಗೆದು ಬಿಸಿಲಲ್ಲಿ ಒಣ ಹಾಕುತ್ತಿದ್ದರು. ಇದರಿಂದಾಗಿ ಬಟ್ಟೆಯಲ್ಲಿದ್ದ ಕ್ರಿಮಿ-ಕೀಟ-ವೈರಸ್-ಫಂಗಸ್ ಇತ್ಯಾದಿಗಳು ಬಿಸಿ ನೀರಲ್ಲಿ ನಾಶವಾಗುತ್ತಿತ್ತು. ಮತ್ತೂ ಉಳಿದಿದ್ದಲ್ಲಿ ಬಿಸಿಲಿನಲ್ಲಿ ಒಣಗಿಸಲ್ಪಡುವುದರಿಂದ ಸಂಪೂರ್ಣ ನಾಶಗೊಳಿಸಲ್ಪಡುತ್ತಿತ್ತು. ಆದರೆ ಇಂದು ವಾಷಿಂಗ್ ಮಷೀನ್ ನಿಂದಾಗಿ ರೋಗಿಗಳ ಬಟ್ಟೆ ಪ್ರತ್ಯೇಕಗೊಳ್ಳುವುದೂ ಇಲ್ಲ, ಅರೆ ಒಣಗಿದ ಬಟ್ಟೆಗಳು ಪಟ್ಟಣದ ಸ್ಥಳಾಭಾವದಿಂದಾಗಿ ಬಿಸಿಲಿಗೂ ಹಾಕಲ್ಪಡದೇ ಮನೆಯ ಒಳಗೇ ಒಣಗಿಸಲ್ಪಡುವುದರಿಂದ ಮನೆಯಲ್ಲಿರುವ ರೋಗಿಗಳ ಬಟ್ಟೆಯಲ್ಲಿರುವ ವೈರಸ್, ಫಂಗಸ್ ಹಾಗೇ ಉಳಿದು ಇತರರಿಗೂ ರೋಗ ಹರಡಲು ಕಾರಣವಾಗುತ್ತಿದೆ.

ಸಾಮಾನ್ಯವಾಗಿ ನಾವು ಚಿಕ್ಕವರಿರುವಾಗ ಸ್ವಲ್ಪ ಶೀತ, ಜ್ವರ, ಕೆಮ್ಮು, ನೆಗಡಿಯಾದಾಕ್ಷಣ ನಮ್ಮ ಹಿರಿಯರು ನಮ್ಮ ಬಟ್ಟೆಗಳನ್ನು ಪ್ರತ್ಯೇಕವಾಗಿಟ್ಟು ಬಿಸಿ ನೀರಲ್ಲಿ ಕುದಿಸಿ ಪ್ರತ್ಯೇಕವಾಗಿಯೇ ಒಗೆದು ಬಿಸಿಲಲ್ಲಿ ಒಣಗಾಕುತ್ತಿದ್ದುದು ಈಗಲೂ ನೆನಪಿದೆ. ಅಂತಹ ಯಾವುದೇ ಪ್ರಕ್ರಿಯೆಯನ್ನು, ಎಚ್ಚರಿಕೆಯ ಕಾರ್ಯಗಳನ್ನು ಈಗಿನ ಮಂದಿ ಮಾಡದೇ ಎಲ್ಲರ ಬಟ್ಟೆಯನ್ನೂ ಒಟ್ಟಿಗೇ ಹಾಕಿ ಎಲ್ಲರಿಗೂ ರೋಗ ಹರಡುವಂತೆ ಮಾಡುತ್ತಿರುವ ತಿಳಿದವರು, ಕಲಿತವರಿಗೆ ಏನೆನ್ನೋಣ?

ಹುಚ್ಚಾಟ, ಅಪ್ಪಾಟಗಳಿಂದ ದೂರವಿರಿ : ಏನೇ ಆದರೂ ಹಿಂದಿನವರು ಮಾಡಿಕೊಂಡು ಬಂದ ಕ್ರಮ, ನಿಯಮಗಳನ್ನು ಮತ್ತೊಮ್ಮೆ ನೆನಪಿಸಿದ, ಎಚ್ಚರಿಸಿದ, ಜಾರಿಗೆ ಬರುವಂತೆ ಮಾಡಿದ ಕೊರೊನಾಕ್ಕೆ ಧನ್ಯವಾದ ಹೇಳಲೇಬೇಕು. ಮನುಷ್ಯ ತನ್ನ ಇತಿ-ಮಿತಿ-ಎಚ್ಚರಿಕೆಯಿಂದ ಜೀವನ ಸಾಗಿಸಬೇಕೆನ್ನುವುದನ್ನು ಕೊರೊನಾ ತಿಳಿಸಿಕೊಟ್ಟಿದೆ. ಅನಗತ್ಯ ತಿರುಗಾಟ, ಹುಚ್ಚಾಟ, ಸಲುಗೆಯ ಒಡನಾಟ, ಅಪ್ಪುಗೆಯ ಅಪ್ಪಾಟಗಳಿಂದ ದೂರವಿದ್ದು ಒಬ್ಬರು ಇನ್ನೊಬ್ಬರಿಂದ ಪ್ರತ್ಯೇಕಾಗಿದ್ದು ಶುದ್ಧ, ಸ್ವಚ್ಛ ಹಸ್ತದಿಂದ ಬದುಕನ್ನು ನಡೆಸಬೇಕೆನ್ನುವುದನ್ನು ತೋರಿಸಿಕೊಟ್ಟಿದೆ.

ಹಲವಾರು ಮಂದಿ ಪಬ್, ಬಾರ್ ಗಳಲ್ಲಿ ಸಿಕ್ಕ ಸಿಕ್ಕವರನ್ನು ಅಪ್ಪಿಕೊಂಡು, ಆಲಿಂಗಿಸಿಕೊಂಡು ನಡೆಸುತ್ತಿದ್ದ ಅಪ್ಪಾಟಗಳು ಕೊರೊನಾದಿಂದಾಗಿ ನಿಂತುಹೋಗಿದೆ. ಕನಿಷ್ಠ ಪಕ್ಷ ಹತ್ತಿರ ಸುಳಿಯಲೂ ಬಿಡದೇ ಎಷ್ಟೇ ಪರಿಚಯವಿದ್ದರೂ ದೂರದಿಂದಲೇ ಮಾತನಾಡಿಸುವ, ಹಲ ಕೆಲವರು ಕೈ, ಬಾಯಿಗಳಿಗೆ ಗ್ಲೌಸ್, ಮಾಸ್ಕ್ ಧರಿಸುವ ಮಟ್ಟಿಗೆ ಮುಂದಾಗಿದ್ದಾರೆ. ಅಂತೂ ಎಲ್ಲ ಎಗರಾಟಗಳೂ ತಹಬಂದಿಗೆ ಬಂದಿದೆ. ಎಚ್1ಎನ್1 ಹಾಗೂಏಡ್ಸ್ ಗಳಿಗೆ ಅಷ್ಟೊಂದು ತಲೆಕೆಡಿಸಿಕೊಳ್ಳದ ಮಂದಿ ಅಮೆರಿಕಾದಲ್ಲಿ, ಇಟೆಲಿಯಲ್ಲಿ ಕೊರೊನಾ ಎಚ್ಚರಿಕೆಯನ್ನು ಉಪೇಕ್ಷಿಸಿದವರಿಗೆ ಆದ ಗತಿಯನ್ನು ಕಂಡು ತಲ್ಲಣಿಸಿ ಹೋಗಿದ್ದಾರೆ. ಅತಿಯಾದರೆ ಎಲ್ಲವೂ ವಿಷ ಎನ್ನುವುದನ್ನು ಇದೀಗ ಹುಚ್ಚಾಟ, ಅಪ್ಪಾಟ ನಟೆಸುತ್ತಿದ್ದ-ಬೀಚ್ ನಲ್ಲಿ ಬೇಕಾಬಿಟ್ಟಿ ಆಡುತ್ತಿದ್ದ ಬೀಚಾಟದ ಮಂದಿಗೆ ಕೊರೊನಾ ತಿಳಿಸಿ ಮನಗಾಣಿಸಿದೆ.

ವಿದೇಶ ಪ್ರೇಮ : ಹಲವಾರು ಮಂದಿಗೆ ಇಂದು ಭಾರತವೇ ಶ್ರೇಷ್ಠ ಎಂದೆಣಿಸಿದೆ. ಏಕೆಂದರೆ ಭಾರತದಲ್ಲಿ ಹೆಚ್ಚಿನ ಎಲ್ಲಾ ಖಾಯಿಲೆ-ಕಸಾಲೆ, ರೋಗ-ರುಜಿನಗಳನ್ನು ತಡೆಯುವ, ಪ್ರಭಾವ ತಗ್ಗಿಸುವ ಆಯುರ್ವೇದೀಯ ಗುಣೌಷಧಗಳಿರುವುದು. ಎಂತಹ ಸಾಂಕ್ರಾಮಿಕ ರೋಗಗಳು ಬಂದರೂ ಇಲ್ಲಿಯ ವಿವಿಧ ಕಷಾಯಗಳು ಪರಿಣಾಮ ನಿಧಾನವಾದರೂ, ರಾಮಬಾಣದಂತೆ ಉಪಯೋಗಕ್ಕೆ ಬರುತ್ತಿದೆ. ಮಾತ್ರವಲ್ಲ ಜನರಲ್ಲಿ ರೋಗವನ್ನು ಬರದಂತೆ ತಡೆಯಲು ಯೋಗ ಇತ್ಯಾದಿಗಳು ಹೆಚ್ಚಿನ ಫಲವನ್ನು ನೀಡಿವೆ. ಸಂಬಾರ ಪದಾರ್ಥಗಳ ಉಪಯೋಗ, ನಿಯಮಿತ ಆಹಾರ ಕ್ರಮ, ಆರೋಗ್ಯ ಪ್ರದವಾಗಿವೆ, ಎಲ್ಲರನ್ನೂ ಆಕರ್ಷಿಸಿವೆ.

ಭಾರತೀಯಲ್ಲಿ ಬೆಳೆದಿದ್ದ ವಿದೇಶ ಪ್ರೇಮ ಮೇಲ್ಕಂಡ ಹಲವಾರು ಅಂಶಗಳಿಂದ ದೂರವಾಗುತ್ತಿದ್ದು ನಮ್ಮ ದೇಶದ ಸಂಸ್ಕøತಿ, ಆಚಾರ-ವಿಚಾರಗಳ ಉತ್ತಮ ಅಂಶಗಳಿಂದ,, ಯೋಗ-ಆಯುರ್ವೇದ ಇತ್ಯಾದಿಗಳಿಂದ ದೇಶದ ಮೇಲಿನ ಪ್ರೀತಿ ಬೆಳೆಯುವಂತೆ ಮಾಡಿದೆ. ಹಣದಾಸೆಗೆ ಬಲಿಯಾಗಿ ವಿದೇಶದಲ್ಲಿ ಪ್ರಾಣ ಕಳೆದುಕೊಂಡವರನ್ನು ನೋಡಿದ ಭಾರತೀಯರು ವಿದೇಶಕ್ಕೆ ಹೋಗುವದನ್ನೇ ತಿರಸ್ಕರಿಸುತ್ತಿದ್ದಾರೆ. ಹೋದವರೂ ಹಿಂದಕ್ಕೆ ಬರುವ ಮನ ಮಾಡುತ್ತಿದ್ದಾರೆ. ಏಕೆಂದರೆ ಕೊರೊನಾ ಅಷ್ಟು ಪ್ರಭಾವ ಬೀರಿದೆ.

ಭಾರತೀಯರಿಗೆ ಭಾರತೀಯ ಸಂಸ್ಕøತಿ, ಆಚಾರ-ವಿಚಾರ, ರೀತಿ-ನೀತಿ-ಕ್ರಮಗಳಲ್ಲಿರುವ ಉತ್ತಮ ಅಂಶಗಳನ್ನು ತಿಳಿಯುವಂತೆ, ನೆನಪಿಸುವಂತೆ ಕೊರೊನಾ ಮಾಡಿದೆ. ಅದೇ ರೀತಿ ಇರುವ ಸ್ಥಳವನ್ನು ಸ್ವಚ್ಛ-ಸುಂದರವಾಗಿಟ್ಟುಕೊಂಡು ಶುಭ್ರಗೊಳಿಸಿಕೊಳ್ಳಲೂ ಪ್ರೋತ್ಸಾಹಿಸಿದೆ. ಹಾಗೆಯೇ ವಿದೇಶದಿಂದ ಬರುವವರನ್ನು ದೂರವಿರಿಸಿ ರೋಗ ರಹಿತರೆಂದು ಕಂಡುಕೊಳ್ಳುವಂತೆಯೂ ಎಚ್ಚರಿಸಿದೆ. ಈ ರೀತಿ ಎಚ್ಚರಿಕೆಯ ಗಂಟೆ ಬಾರಿಸಿ ಭಾರತೀಯತೆಗೆ ಪ್ರೇರೇಪಿಸಿದ ಕೊರೊನಾಗೆ ಮತ್ತೊಮ್ಮೆ ಧನ್ಯವಾದಗಳು.

ಲೇಖನ : ರಾಯೀ ರಾಜ ಕುಮಾರ್, ಮೂಡುಬಿದಿರೆ - ಸಂಪನ್ಮೂಲ ವ್ಯಕ್ತಿ, ಸಮಾಜ ಚಿಂತಕರು, ಲೇಖಕರು, 460 ಕ್ಕೂ ಮಿಕ್ಕಿ ವಿವಿಧ ವಿಷಯದ ಕಾರ್ಯಾಗಾರಗಳನ್ನು ರಾಜ್ಯ ಮಟ್ಟದಲ್ಲಿ ನಡೆಸಿದವರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here