ಹಿರಿಯ ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರಿಗೆ ಸನ್ಮಾನ
ಮುಂಬಯಿ (ಬದಿಯಡ್ಕ), ಜು.01: ಕಾಸರಗೋಡು ಪೆರ್ಲದ ಸವಿ ಹೃದಯದ ಕವಿ ಮಿತ್ರರು ವೇದಿಕೆಯ ನೇತೃತ್ವದಲ್ಲಿ ಕನ್ನಡ ಪತ್ರಿಕಾ ದಿನಾಚರಣೆಯ ಅಂಗವಾಗಿ ಬುಧವಾರ ಹಿರಿಯ ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು.
ವೇದಿಕೆಯ ಸಂಚಾಲಕ ಸುಭಾಶ್ ಪೆರ್ಲ, ಪರಮೇಶ್ವರ ನಾಯ್ಕ್ ಬಾಳೆಗುಳಿ, ಪುರುಷೋತ್ತಮ ಭಟ್ ಕೆ ಉಪಸ್ಥಿತರಿದ್ದು ಗೌರವಿಸಿದರು.
ಈ ಸಂದರ್ಭ ಶುಭಹಾರೈಸಿ ಮಾತನಾಡಿದ ರಾಧಾಕೃಷ್ಣ ಕೆ ಉಳಿಯತ್ತಡ್ಕ ಅವರು, ಕನ್ನಡ ಪತ್ರಿಕಾ ಕ್ಷೇತ್ರ ನಡೆದು ಬಂದ ಸುಧೀರ್ಘ ಕಾಲದ ಏಳು-ಬೀಳುಗಳು ಅಪೂರ್ವತೆಗಳಿಂದ ಒಡಗೂಡಿ ವಿಶಿಷ್ಟವಾದುದು. ಇಂದಿನ ನೂತನ ತಂತ್ರಜ್ಞಾನಗಳಿಲ್ಲದ ಕಾಲಘಟ್ಟಗಳನ್ನು ದಾಟಿ ನಿಶ್ಪಕ್ಷಪಾತ, ನೇರ ಸಾಮಾಜಿಕ ಕಾಳಜಿಯ ಮನೋಸ್ಥಿತಿಗಳು ಕನ್ನಡ ಪತ್ರಿಕಾಲೋಕವನ್ನು ಸೃಜನಶೀಲವಾಗಿ ಬೆಳೆಸಿಕೊಟ್ಟಿದೆ. ಹೊಸ ತಲೆಮಾರು ಇವನ್ನು ಅನುಸರಿಸುವ ಅಗತ್ಯವಿದೆ ಎಂದರು.